ಸಹಕಾರ ಸಪ್ತಾಹಕ್ಕೆ ಚಾಲನೆ: ಸಹಕಾರ ರತ್ನ ಪ್ರಶಸ್ತಿ ಪ್ರದಾನ
ಬೆಂಗಳೂರು, ನ. 14: ಭಾರತದ ಸಹಕಾರ ರಂಗ ಜಗತ್ತಿನ ಅತ್ಯಂತ ದೊಡ್ಡ ವ್ಯವಸ್ಥೆಯಾಗಿದ್ದು, ಭಾರತದಲ್ಲಿ ಒಟ್ಟು 8 ಲಕ್ಷ ಸಹಕಾರ ಸಂಸ್ಥೆಗಳಿವೆ. 28 ಕೋಟಿಗೂ ಹೆಚ್ಚು ಸದಸ್ಯರಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ-2020ನ್ನು ಉದ್ಘಾಟಿಸಿ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಜಗತ್ತಿಗೆ ಸಹಕಾರ ಕ್ಷೇತ್ರದಲ್ಲಿ ಭಾರತದ ಕೊಡುಗೆ ಮಹತ್ತರವಾದದ್ದು, ಭಾರತಕ್ಕೆ ಸಹಕಾರ ಕ್ಷೇತ್ರದಲ್ಲಿ ಕರ್ನಾಟಕದ ಕೊಡುಗೆ ಅಪಾರ. ಕರ್ನಾಟಕದಲ್ಲಿ ಇಂದು 45 ಸಾವಿರ ಸಹಕಾರ ಸಂಸ್ಥೆಗಳಿದ್ದು, 2 ಕೋಟಿಗೂ ಹೆಚ್ಚು ಸದಸ್ಯರಾಗಿದ್ದಾರೆ ಎಂದು ಯಡಿಯೂರಪ್ಪ ಅವರು ವಿವರಿಸಿದರು.

ಮಹಾತ್ಮಗಾಂಧಿ ಅವರ ಪ್ರೇರಣೆ
ಸ್ವಾತಂತ್ರ್ಯಪೂರ್ವದಲ್ಲಿ ಮಹಾತ್ಮಗಾಂಧಿ ಅವರ ಪ್ರೇರಣೆಯಿಂದ ಆರಂಭವಾದ ಸಹಕಾರ ಕ್ಷೇತ್ರ ಇಂದು ಕೃಷಿಯಿಂದ ಶುರುವಾಗಿ ಈಗ ಅನೇಕ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದೆ. ರಾಜ್ಯದ ಸಹಕಾರ ಸಂಸ್ಥೆಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು, ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಯಡಿಯೂರಪ್ಪ ಅವರು ಹೇಳಿದರು.

ಆರ್ಥಿಕ ಸ್ಪಂದನೆ ಮೂಲಕ ಸಾಲ
ಕೋವಿಡ್-19 ಸಮಯದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 53 ಕೋಟಿ ರೂ.ಗಳನ್ನು ನೀಡಿತ್ತು. ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿಯಲ್ಲಿ ಕೃಷಿ ಕ್ಷೇತ್ರ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸ್ವಾವಲಂಬನೆ ಬೆಳೆಸಲು ಕೃಷಿ, ಹಾಲು ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಆರ್ಥಿಕ ಸ್ಪಂದನೆ ಮೂಲಕ 39 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಸಿಎಂ ಹೇಳಿದರು. ಹಾಗೆ ಸಹಕಾರ ಪ್ರಶಸ್ತಿ ಪಡೆದುಕೊಂಡ ಸಹಕಾರ ಕ್ಷೇತ್ರದ ಸಾಧಕರಿಗೆ ಅಭಿನಂದನೆ ಸಲ್ಲಿಸಿದರು.

ಕ್ಷೇತ್ರ ವಿಸ್ತರಿಸಲು ಸಹಕಾರ ಸಪ್ತಾಹ
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಮಾತನಾಡಿ, ಸಹಕಾರ ಕ್ಷೇತ್ರವನ್ನು ವಿಸ್ತರಿಸಲು ಈ ಸಹಕಾರ ಸಪ್ತಾಹ ಸಹಾಯವಾಗಲಿದೆ. ಇಂದು ಇಲ್ಲಿ ಆರಂಭವಾದ ಈ ಸಹಕಾರ ಸಪ್ತಾಹ ಒಟ್ಟು 7 ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ನಡೆಯಲಿದ್ದು, ಪ್ರತಿದಿನ ಒಂದೊಂದು ವಿಷಯಗಳನ್ನು ಆಧರಿಸಿ ಆಚರಿಸಲಾಗುವುದು ಎಂದರು.
Recommended Video

ಆಶಾ ಕಾರ್ಯಕರ್ತೆಯರಿಗೆ ಗೌರವ ಧನ
ರಾಜ್ಯದಲ್ಲಿ ಕಳೆದ ಕೊರೊನಾ ವೈರಸ್ ಸಮಯದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮತ್ತು ಜವಬ್ದಾರಿಯನ್ನು ಗೌರವಿಸಿ ಒಟ್ಟು 42,500 ಆಶಾ ಕಾರ್ಯಕರ್ತೆಯರಿಗೆ ತಲಾ ಮೂರು ಸಾವಿರ ಗೌರವ ಧನವನ್ನು ಸಹಕಾರ ಮಂಡಳದಿಂದ ನೀಡಲಾಗಿತ್ತು ಎಂದು ಸಚಿವ ಸೋಮಶೇಖರ್ ವಿವರಿಸಿದರು.












Click it and Unblock the Notifications