ವಿಶೇಷಾಧಿಕಾರಿ ಬಂಧನ, ಸಚಿವರು ಹೇಳಿದ್ದೇನು?
ಬೆಂಗಳೂರು, ಏಪ್ರಿಲ್ 05 : 'ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ ಕುರಿತು ಸಿಐಡಿ ತನಿಖೆಗೆ ಸಿದ್ಧವಾಗಿದ್ದೇನೆ' ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದರು. ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಪದವಿ ಪೂರ್ವ ಶಿಕ್ಷಣ ಇಲಾಖೆಯ 10 ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ಮಂಗಳವಾರ ಬೆಳಗ್ಗೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು, 'ಸರ್ಕಾರ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ನನ್ನ ಕಚೇರಿಯ ಸಿಬ್ಬಂದಿ ಸೋರಿಕೆ ಹಗರಣದಲ್ಲಿ ಭಾಗಿಯಾಗಿರುವುದು ಅಚ್ಚರಿ ಮೂಡಿಸಿದೆ' ಎಂದರು. [ಪತ್ರಿಕೆ ಸೋರಿಕೆ, ಸಚಿವರ ಪಿಎ ಸೇರಿ ಮೂವರ ಬಂಧನ]

'ನನ್ನ ವಿಶೇಷಾಧಿಕಾರಿ ಓಬಳರಾಜು ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಸೋಮವಾರ ಮಧ್ಯಾಹ್ನ ಈ ಕುರಿತು ಮಾಹಿತಿ ಲಭ್ಯವಾಯಿತು. ತಕ್ಷಣ ಬೆಂಗಳೂರಿಗೆ ಆಗಮಿಸಿದೆ. ಓಬಳರಾಜು ಅವರು ಮೊದಲು ಸಿ.ಎಂ.ಉದಾಸಿ ಅವರ ಬಳಿ ಕೆಲಸ ಮಾಡುತ್ತಿದ್ದರು. ಅವರ ಶಿಫಾರಸಿನಂತೆ ನನ್ನ ಬಳಿಗೆ ಆಗಮಿಸಿದ್ದರು' ಎಂದು ಸಚಿವರು ತಿಳಿಸಿದರು. [ಲೀಕಾಗಿದ್ದ ಕೆಮಿಸ್ಟ್ರಿ ಪಿಯು ಪ್ರಶ್ನೆ ಪತ್ರಿಕೆ ಬೆಲೆ 10 ಲಕ್ಷ ರು!]
'ನನ್ನ ಕಚೇರಿಯಲ್ಲಿಯೇ ಇಂತಹ ವ್ಯಕ್ತಿ ಇದ್ದ ಎಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಓಬಳರಾಜು ಅವರನ್ನು ಬಂಧಿಸಿರುವ ಹಿನ್ನಲೆಯಲ್ಲಿ ಸಿಐಡಿ ನನ್ನ ವಿಚಾರಣೆ ನಡೆಸಲು ಬಯಸಿದರೆ ವಿಚಾರಣೆ ಎದುರಿಸುತ್ತೇನೆ. ತನಿಖೆಯಲ್ಲಿಯೂ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ' ಎಂದು ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು. [ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಟ್ಯೂಷನ್ ಮಾಫಿಯಾ?]
10 ಜನರು ಸಿಐಡಿ ವಶಕ್ಕೆ : ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ 40 ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಇವರಲ್ಲಿ 10 ಅಧಿಕಾರಿಗಳನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications