ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಪ್ರಭಾವಿ ಮುಖಂಡರು
ರಾಮನಗರ, ನವೆಂಬರ್ 01: ದೀಪಾವಳಿ ದಿನದಂದು ಚನ್ನಪಟ್ಟಣ ಕ್ಷೇತ್ರದ ಅನೇಕ ಕಾಂಗ್ರೆಸ್ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಮುಖ್ಯವಾಗಿ ಕುರುಬ ಸಮುದಾಯದ ನಾಯಕಿ ಮಂಗಳವಾರಪೇಟೆಯ ಗೀತಾ ಶಿವರಾಂ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಗೀತಾ ಶಿವರಾಂ ಅವರು ನಗರಸಭೆ ಮಾಜಿ ಸದಸ್ಯರಾಗಿದ್ದು, ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಚನ್ನಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಸೇರಿದ ಮುಖಂಡರನ್ನು ಬರಮಾಡಿಕೊಂಡ ನಂತರ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡಿ, ಹದಿನೇಳು ಕೆರೆಗಳಿಗೆ ನಿರುವ ನೀರು ತುಂಬಿಸಿದ ವ್ಯಕ್ತಿಯನ್ನು ಭಗೀರಥ ಎನ್ನುವುದಾದರೆ, 107 ಕೆರೆಗಳಿಗೆ ನೀರು ತುಂಬಿಸಿದರನ್ನು ಏನೆಂದು ಕರೆಯಬೇಕು? ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ನಾನು ಮುಖ್ಯಮಂತ್ರಿಯಾಗಿ ಹಾಗೂ ಐದು ವರ್ಷ ಚನ್ನಪಟ್ಟಣ ಶಾಸಕನಾಗಿ ನಾನು 107 ಕೆರೆಗಳಿಗೆ ನೀರು ತುಂಬಿಸಿದ್ದೇನೆ. ಅವರದೇ ಸರ್ಕಾರ ಇದೆ, ಕಡತಗಳನ್ನು ತೆಗೆದು ನೋಡಲಿ. ನಾನು ನಾನು ಹದಿನೇಳು ಕೆರೆಗಳಿಗೆ ನೀರು ತುಂಬಿಸಿದೆ ಎಂದು ಹೇಳುತ್ತಾರೆ, ಆದರೆ 107 ಕೆರೆಗಳಿಗೆ ನೀರು ತುಬಿಸಿದ್ದನ್ನು ಇವರು ಯಾಕೆ ಮರೆ ಮಾಚುತ್ತಾರೆ? ನಿಜ ಹೇಳುವುದಕ್ಕೆ ಏನಾಗಿದೆ ಅವರಿಗೆ? ಕಡತ ಇಲ್ಲವೇ? ಆದೇಶಗಳು ಇಲ್ಲವೇ? ತೆರೆದು ನೋಡಲಿ ಎಂದು ಅವರು ಕಿಡಿಕಾರಿದರು.
ದೇವೇಗೌಡರು ಇಗ್ಗಲೂರು ಜಲಾಶಯ ಕಟ್ಟಿಸದಿದ್ದರೆ ಇವರು ಹದಿನೇಳು ಕೆರೆಗಳಿಗೆ ನೀರು ತುಂಬಿಸಲು ಸಾಧ್ಯ ಆಗುತ್ತಿತ್ತಾ? ಇವತ್ತು ಚನ್ನಪಟ್ಟಣ, ರಾಮನಗರ ತಾಲ್ಲೂಕಿನ ಜನರಿಗೆ ಆ ಜಲಾಶಯ ಜೀವನಾಧಾರವಾಗಿದೆ. ಅದನ್ನೇಕೆ ಇವರು ಹೇಳುವುದಿಲ್ಲ? ಹಾಗಾದರೆ ಒಂದು ಬೃಹತ್ ಜಲಾಶಯವನ್ನೇ ಕಟ್ಟಿಸಿದ ದೇವೇಗೌಡರನ್ನು ಏನೆಂದು ಕರೆಯಬೇಕು? 107 ಕೆರೆಗಳಿಗೆ ನೀರು ತುಂಬಿಸಿದ ನನ್ನನ್ನು ಏನೆಂದು ಕರೆಯಬೇಕು? ನಾವೂ ಭಗೀರಥರು ಎಂದು ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದೇವೆಯೇ? ಎಂದು ಕೇಂದ್ರ ಸಚಿವರು ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು.
ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಸಂಸದ ಸುರೇಶ್ ಸವಾಲು ಹಾಕಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು; ಚನ್ನಪಟ್ಟಣಕ್ಕೆ ಸುರೇಶ್ ಕೊಡುಗೆ ಏನು? ದಿನವೂ ರಾತ್ರಿ ಮತ್ತಿಕೆರೆ ಹತ್ತಿರ ಲೋಡುಗಟ್ಟಲೇ ಕಲ್ಲು ಬರುತ್ತಲ್ಲಾ.. ಹೀರಾ ದೇಶಕ್ಕೆ ಕಳಿಸುವುದಕ್ಕೆ.. ಅದೇ ಅವರ ಕೊಡುಗೆ. ಅಂತಹವರ ಜತೆ ನಾನು ಬಹಿರಂಗ ಚರ್ಚೆಗೆ ಬರಬೇಕಾ? ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.
ಇನ್ನೂ ಚನ್ನಪಟ್ಟಣ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದ್ದನ್ನೇ ಲೇವಡಿ ಮಾಡುವ ಕಾಂಗ್ರೆಸ್ ನಾಯಕರ ಮೇಲೆ ಚಾಟಿ ಬೀಸಿದ ಅವರು; ಅವರಿಗೆ ಕಣ್ಣೀರೇ ಬರುವುದಿಲ್ಲವೇ? ಕಣ್ಣೀರು ಬರದಿದ್ದರೆ ಅವರು ಮನುಷ್ಯರೇ ಅಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಎರಡು ಬಾರಿ ನಿಖಿಲ್ ಸೋತಿದ್ದಾರೆ ಎಂದು ಜೆಡಿಎಸ್ ನಾಯಕರು ಹೇಳುತ್ತಿರುವುದಕ್ಕೆ ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಇದು ಕರ್ನಾಟಕ, ಯಾರು ಎಲ್ಲಿಗೆ ಬೇಕಾದರೂ ಹೋಗಿ ನಿಲ್ಲಬಹುದು. ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋಲುತ್ತೇನೆ ಎಂದು ಬಂದು ಕೇರಳದ ವೈನಾಡಿಗೆ ಬಂದು ನಿಲ್ಲಲಿಲ್ಲವೇ? ಪ್ರಿಯಾಂಕಾ ಗಾಂಧಿ ಅಲ್ಲೇ ಉತ್ತರ ಪ್ರದೇಶದಲ್ಲಿ ಸ್ಪರ್ಧೆ ಮಾಡಬಹುದಿತ್ತು. ಅವರ ಕುಟುಂಬ ಯಾವಾಗಲೂ ಅಮೇಥಿ, ರಾಯ್ ಬರೇಲಿ ಕ್ಷೇತ್ರಗಳಲ್ಲಿ ನಿಲ್ಲುತ್ತಿದ್ದರು. ಹಾಗಾದರೆ, ಅವರು ಕೇರಳಕ್ಕೆ ಬಂದು ಏಕೆ ನಿಂತರು? ಈ ಬಗ್ಗೆ ಕಾಂಗ್ರೆಸ್ ನಾಯಕರ ಮೌನ ಯಾಕೆ? ಎಂದು ತಿರುಗೇಟು ಕೊಟ್ಟರು.
ಇನ್ನೂ , ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಜೆ.ಎಸ್.ರಾಜು, ಕಾಳಿಕಾಂಭ ದೇವಾಲಯ ಅಭಿವೃದ್ಧಿ ಅಧ್ಯಕ್ಷ ವೀರಭದ್ರಚಾರ್, ಸಮಾಜದ ಮುಖಂಡರಾದ ಬ್ರಹ್ಮಚಾರ್, ಸುರೇಶಚಾರ್, ರಘು ಆಚಾರ್, ಅಶ್ವತಚಾರ್ ಸೇರಿದಂತೆ ಹಲವಾರು ನಾಯಕರು ಜೆಡಿಎಸ್ ಸೇರ್ಪಡೆಯಾದರು. ಈ ಚುನಾವಣೆಯಲ್ಲಿ ಸಮುದಾಯದ ಬೆಂಬಲ ನಿಖಿಲ್ ಕುಮಾರಸ್ವಾಮಿ ರವರಿಗೆ ಇರಲಿದೆ ಎಂದು ಅವರು ಘೋಷಿಸಿದರು.












Click it and Unblock the Notifications