ಸಾಮೂಹಿಕ ರಾಜೀನಾಮೆಗೆ ಮುಂದಾದ ಯೋಗೇಶ್ವರ್ ಬೆಂಬಲಿಗರು
ರಾಮನಗರ, ಅಕ್ಟೋಬರ್ 17: ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಸಾಮೂಹಿಕ ರಾಜೀನಾಮೆ ಸರಣಿ ಆರಂಭವಾಗಿದೆ.
ತಾಲೂಕು ಪಂಚಾಯ್ತಿಯ 17 ಮಂದಿ ಸದಸ್ಯರು ಕಾಂಗ್ರೆಸ್ಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಮುದಗೆರೆ ಎಂಟಿಆರ್ ಹೋಟೆಲ್ನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಸದಸ್ಯರು ತಮ್ಮ ನಿರ್ಧಾರ ಪ್ರಕಟಿಸಿದರು.
ತಾಪಂ ಅಧ್ಯಕ್ಷ ಹರೂರು ರಾಜಣ್ಣ ಮಾತನಾಡಿ, 17 ಮಂದಿ ತಾ.ಪಂ. ಸದಸ್ಯರೆಲ್ಲಾ ಅಕ್ಟೋಬರ್ 22 ರಂದು ಆಯೋಜಿಸಿರುವ ಸಭೆಯಲ್ಲಿ ಯೋಗೇಶ್ವರ್ ಯಾವುದೇ ತೀರ್ಮಾನ ತೆಗೆದುಕೊಂಡರು ನಾವು ಅವರ ತೀರ್ಮಾನಕ್ಕೆ ಬೆಂಬಲ ನೀಡುತ್ತೇವೆ 22ರ ಸಭೆ ಬಳಿಕ ನಾವು 17ಮಂದಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ತೀರ್ಮಾನ ಕೈಗೊಂಡಿದ್ದೇವೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಂಗಳವಾರ (ಅ.17ರ) ಹಮ್ಮಿಕೋಂಡಿರುವ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ತಾಲ್ಲೂಕು ಪಂಚಾಯ್ತಿಯ ಎಲ್ಲ ಸದಸ್ಯರು ಸಾಮೂಹಿಕವಾಗಿ ಗೈರು ಹಾಜರಾಗುತ್ತಿದ್ದೇವೆ ಎಂದು ತಿಳಿಸಿದರು. ಅಲ್ಲದೆ, ಕಾಂಗ್ರೆಸ್ ಸರ್ಕಾರದಿಂದ ನಮ್ಮ ತಾಲೂಕು ಪಂಚಾಯ್ತಿಗೆ ಯಾವುದೇ ಜನಪರ ಅನುದಾನಗಳು ಬಂದಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿಯ 17 ಮಂದಿ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಯೋಗೇಶ್ವರ್ ಯಾವುದೇ ಪಕ್ಷಕ್ಕೆ ಸೇರ್ಪಡೆಯಾದರೂ ನಾವು ಅವರ ನಿರ್ಧಾರವನ್ನು ಬೆಂಬಲಿಸುತ್ತೇವೆ ಎಂದು ಒಮ್ಮತದಿಂದ ಎಲ್ಲ ಸದಸ್ಯರು ಕೈ ಎತ್ತಿ ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.