ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಹೋಗಿದ್ದು ಬೇರೆ ಉದ್ದೇಶಕ್ಕೆ : ಛಲವಾದಿ ನಾರಾಯಣಸ್ವಾಮಿ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 19: ಬರಗಾಲ ಬಂದರೂ ರಾಜ್ಯಾದ್ಯಂತ ಯಾವ ಸಚಿವರು ಸಹ ಪ್ರವಾಸ ಮಾಡುತ್ತಿಲ್ಲ. ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಹೋಗಿದ್ದು ಬೇರೆ ಉದ್ದೇಶಕ್ಕೆ, ಅಲ್ಲಿನ ಜಿಲ್ಲಾ ಸಚಿವರು ಅವರನ್ನು ಸ್ವಾಗತಿಸಿಲ್ಲ. ಸತೀಶ್ ಜಾರಕಿಹೊಳಿ ಸಂಬಂಧ ಸಮಸ್ಯೆ ಶುರುವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್ ಹೈಕಮಾಂಡ್ ಒತ್ತಡದ ಕಾರಣಕ್ಕೆ ಆತುರಾತುರವಾಗಿ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ. ತಡವಾಗಿದೆ ಎಂಬ ಕಾರಣಕ್ಕೆ ನಿನ್ನೆ ವೇಣುಗೋಪಾಲ್ ಬಂದರು. ಎಟಿಎಂ ಮಾಲೀಕ ಸುರ್ಜೇವಾಲಾ ಬಂದುಬಿಟ್ಟರು. ಪಂಚರಾಜ್ಯ ಚುನಾವಣೆ ಬಂದ ಕಾರಣ ಅವರಿಗೆ ಹಣ ಬೇಕಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

ಇನ್ನೂ ಕಾಂಗ್ರೆಸ್ ಸರ್ಕಾರ ಬೇಗಬೇಗನೆ ಕಲೆಕ್ಷನ್, ಬೇಗಬೇಗ ಡ್ರಾ ಮಾಡಲು ಬಂದಿದ್ದಾರೆ. ಸಿದ್ದರಾಮಯ್ಯರ ಸರಕಾರ ಇಲ್ಲಿನ ಜನರಿಗೆ, ಅಭಿವೃದ್ಧಿ ಕಾರ್ಯದ ವಿಚಾರದಲ್ಲಿ ನುಡಿದಂತೆ ನಡೆಯುತ್ತಿಲ್ಲ. ಹೈಕಮಾಂಡಿಗೆ ನೀಡಿದ ವಚನ ಪಾಲಿಸುವುದರಲ್ಲಿ ವಿಳಂಬವಾದ ಕಾರಣ ಅಲ್ಲಿನ ನಾಯಕರು ತೆಲಂಗಾಣ, ಛತ್ತೀಸಗಡ, ಮಧ್ಯಪ್ರದೇಶಕ್ಕೆ ಹಣ ಕಳಿಸಿ ಎಂದು ಒತ್ತಡ ಹಾಕಲು ಇಲ್ಲಿ ಬಂದಿದ್ದಾರೆ ಎಂದು ಹೇಳಿದರು.
ಡೈರಿ ನಿಪುಣರು ಯಾರೆಂದು ನಮಗೂ ಗೊತ್ತಿದೆ. ಗುತ್ತಿಗೆದಾರರಿಂದ ವಶಪಡಿಸಿಕೊಂಡದ್ದು ಬಿಜೆಪಿಯವರ ಹಣ ಎಂದು ಡಿಸಿಎಂ ಶಿವಕುಮಾರ್ ಅವರು ಹೇಳಿದ್ದೇ ನಿಜವಾದರೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡಲು ಇರುವ ತೊಂದರೆಯಾದರೂ ಏನು ಸವಾಲೆಸೆದರು. ಇದು ಬಿಜೆಪಿಯವರ ಹಣವೆಂದು ಶಿವಕುಮಾರರಿಗೆ ಗೊತ್ತಿದ್ದರೆ, ಆ ಸಂಬಂಧ ಡೈರಿ ಇದ್ದರೆ ಅದನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು. ಅದು ನಮ್ಮ ಹಣವಾಗಿದ್ದರೆ ನೀವ್ಯಾಕೆ ಹಿಂದೆ ಬೀಳುತ್ತೀರಿ? ಸಿಬಿಐ ತನಿಖೆ ಮಾಡಿಸಿ. ಸತ್ಯಾಸತ್ಯತೆ ಹೊರಕ್ಕೆ ಬರಲಿ ಎಂದು ತಿಳಿಸಿದರು.
ಇನ್ನೂ ಒಂದು ವೇಳೆ ಇದನ್ನು ಸಿಬಿಐ- ಇಡಿ ತನಿಖೆಗೆ ವಹಿಸದಿದ್ದರೆ ಅದು ನಿಮ್ಮ ಹಣ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು. ನಮ್ಮ ಹಣವಾದರೆ ತನಿಖೆ ಮಾಡಿಸಿ. ನಿಮ್ಮ ಹಣವಾಗಿದ್ದರೆ ಅದನ್ನು ನೀವು ಒಪ್ಪಿಕೊಂಡರೆ ಸಾಕು ಎಂದು ಕಿಡಿಕಾರಿದರು.
ಕಾಂಗ್ರೆಸ್ಸಿಗೆ ಒಳಗಿನಿಂದಲೂ ಸಮಸ್ಯೆ, ಹೊರಗಿನಿಂದಲೂ ಸಮಸ್ಯೆ. ಅವರ ತಲೆ ಮೇಲೆ ಅವರೇ ಬಂಡೆ ಹಾಕಿಕೊಂಡಿದ್ದಾರೆ, ರಾಜ್ಯದ ಕಾಂಗ್ರೆಸ್ ಸರಕಾರದ ಆಯುಸ್ಸು ಬಹಳ ಕಡಿಮೆ. ಕಾಂಗ್ರೆಸ್ನವರು ಗ್ಯಾರಂಟಿ ಜಾರಿ ಮಾಡಲಾಗದೆ ಪರಿತಪಿಸುತ್ತಿದ್ದಾರೆ. ಅವರ ತಪ್ಪುಗಳನ್ನು ಸದಾ ಎಳೆಎಳೆಯಾಗಿ ಜನರ ಮುಂದಿಡುತ್ತೇವೆ. ಕಾಂಗ್ರೆಸ್ ಸರಕಾರವನ್ನು ತೆಗೆಯುವ ವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ಈ ಸರಕಾರವೇ ಬೇಡ ಎಂದು ಕಾಂಗ್ರೆಸ್ಸಿನವರೇ ಹೇಳುತ್ತಿದ್ದಾರೆ. ಈ ಸರಕಾರದ ಅವಧಿ ಇನ್ನೊಂದು ವರ್ಷವಾದರೆ ಹೆಚ್ಚು ಎಂದು ಕಿಡಿಕಾರಿದ ಅವರು, ಈಗ ವಾಸನೆ ಬರಲು ಶುರುವಾಗಿದೆ. 24 ಶಾಸಕರನ್ನು ಕರೆದುಕೊಂಡು ಗುಂಡ್ಲುಪೇಟೆ ಚಾಮರಾಜನಗರದ ಕಡೆ ಹೋಗಲು ಜಾರಕಿಹೊಳಿ ಮುಂದಾಗಿದ್ದರು. ಜಾರಕಿಹೊಳಿ ಬ್ರದರ್ಸ್ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದರೆ ನಾವು ಉಳಿಯುವುದಿಲ್ಲ ಎಂದು ಡಿಸಿಎಂ ಶಿವಕುಮಾರರಿಗೂ ಗೊತ್ತಿದೆ. ಚುನಾವಣೆಗೆ ಹಣ ಕೊಡದಿದ್ದರೆ ಹೈಕಮಾಂಡಿನ ಸಮಸ್ಯೆ. ಇಲ್ಲಿ ಕಲೆಕ್ಷನ್ಗೆ ಇಳಿದರೆ ಇಲ್ಲಿ ಸಮಸ್ಯೆ. ಕಾಂಗ್ರೆಸ್ ಹಲವಾರು ತುಂಡುಗಳಾಗಿದೆ. ಇದು ಹೊರಗಡೆ ಬರಲು ಕೆಲವೇ ದಿನಗಳು ಉಳಿದಿವೆ ಎಂದರು.












Click it and Unblock the Notifications