ಕಾಂಗ್ರೆಸ್ ಸರ್ಕಾರಕ್ಕೆ ಕಂಟಕ; ʼಯಾವುದೇ ಸಂದರ್ಭದಲ್ಲೂ ಚುನಾವಣೆ ಎದುರಿಸುವ ಸ್ಥಿತಿ ಬರಬಹುದುʼ
ಬೆಂಗಳೂರು,ಸೆಪ್ಟೆಂಬರ್ 04: ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ರಾಜ್ಯ ಸರ್ಕಾರಕ್ಕೆ ತಲೆನೋವಾಗಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳ್ಳಲಿದೆ ಎಂದು ವಿಪಕ್ಷಗಳ ನಾಯಕರು ಹೇಳಿಕೆ ನೀಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಕುರಿತು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಸದಸ್ಯತ್ವ ನೋಂದಣಿ ಕಾರ್ಯವು ಹಬ್ಬದ ಮಾದರಿಯಲ್ಲಿ ನಡೆಯಲಿ. ರಾಜ್ಯದಲ್ಲಿ ನಾವು ಯಾವುದೇ ಸಂದರ್ಭದಲ್ಲೂ ಚುನಾವಣೆ ಎದುರಿಸುವ ಸ್ಥಿತಿ ಬರಬಹುದು. ಆದ್ದರಿಂದ ಪಕ್ಷವನ್ನು ಬಲಪಡಿಸಲು ಶ್ರಮಿಸೋಣ ಎಂದು ಹೇಳಿದರು. ತಳಮುಖವಾಗಿ ಮೇಲಕ್ಕೆ ಬೆಳೆದ ಪಕ್ಷ ಬಿಜೆಪಿ. ಇದರ ಶಕ್ತಿ ನಾಯಕರಲ್ಲ, ಬಿಜೆಪಿ ಶಕ್ತಿ ಕಾರ್ಯಕರ್ತರ ರೂಪದಲ್ಲಿದೆ. ಸಮಾಜದ ಅನೇಕಾನೇಕ ಪ್ರಕೋಷ್ಠಗಳಲ್ಲಿ ಕೆಲಸ ಮಾಡುವವರೇ ಕಾರ್ಯಕರ್ತರು ಎಂದು ವಿಶ್ಲೇಷಿಸಿದರು.

1980ರಲ್ಲಿ ಶೇ 1 ಮತ ಪಡೆದರೆ ಖುಷಿ ಪಡುವ ಪಕ್ಷ ನಮ್ಮದಾಗಿತ್ತು. ಇದೀಗ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷ ಬಿಜೆಪಿ. ಹಿಂದೆ ದೇಶದಲ್ಲಿ 18 ಕೋಟಿ ಸದಸ್ಯರಿದ್ದು, ರಾಜ್ಯದಲ್ಲಿ 1.04 ಕೋಟಿ ಸದಸ್ಯರಿದ್ದರು. ವಿಜಯೇಂದ್ರ ಅವರು ಅಧ್ಯಕ್ಷರಾದ ಬಳಿಕ ನವಚೈತನ್ಯ ನಮ್ಮ ಪಕ್ಷಕ್ಕೆ ಲಭಿಸಿದೆ ಎಂದು ವಿವರಿಸಿದರು. ನಮ್ಮ ಶಕ್ತಿ ಈಗ ಏರುಮುಖವಾಗುತ್ತಿದೆ ಎಂದರು. ಕಾಂಗ್ರೆಸ್ ಪಕ್ಷದ ಆಡಳಿತವುಳ್ಳ ರಾಜ್ಯಗಳು ಇಳಿಮುಖವಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಕೋವಿಡ್ ಅವಧಿಯಲ್ಲಿ ಜನರಿಗೆ ಸ್ಪಂದಿಸಿದ ಬಿಜೆಪಿ ಒಂದು ವಿಭಿನ್ನ ಸೇವಾಪರ ಪಕ್ಷ. ಕರ್ನಾಟಕವು ಸದಸ್ಯತ್ವದಲ್ಲಿ ಮುಂಚೂಣಿಯಲ್ಲಿ ಇರುವ ವಿಶ್ವಾಸವಿದೆ. 2047ನೇ ಇಸವಿಗೆ ಭಾರತವನ್ನು ವಿಕಸಿತ ರಾಷ್ಟ್ರವಾಗಿ, ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡುವ ಕನಸು ಮಾನ್ಯ ಪ್ರಧಾನಿ ನರೇಂದ್ರ ಮೋದಿಜೀ ಅವರದು. ಮೋದಿಜೀ ಅವರಿಗೆ ಇನ್ನೂ ಹೆಚ್ಚು ಬಲ ಕೊಡುವ ಕೆಲಸ ನಡೆಸಬೇಕಿದೆ ಎಂದು ತಿಳಿಸಿದರು. ಅಭಿಯಾನದ ಯಶಸ್ವಿಗಾಗಿ ಪ್ರತಿ ಬೂತ್ಗಳಲ್ಲಿ ಕಾರ್ಯಕರ್ತರನ್ನು ಜೋಡಿಸಲಾಗಿದೆ ಎಂದರು.
ಕಾಂಗ್ರೆಸ್ ಎಂದರೆ ಅದು ಅಧಿಕಾರದಿಂದ ಅಧಿಕಾರಕ್ಕೋಸ್ಕರ ಇರುವ ಪಕ್ಷ. ಅಧಿಕಾರ ಇಲ್ಲವೆಂದರೆ ಕಾಂಗ್ರೆಸ್ ಪಕ್ಷದವರು ನೀರಿನಿಂದ ಹೊರಗೆ ಬಿದ್ದ ಮೀನಿನ ಪರಿಸ್ಥಿತಿ ಹೊಂದಿರುತ್ತಾರೆ ಎಂದು ಟೀಕಿಸಿದರು. ಅಧಿಕಾರ ಇಲ್ಲದೆ ಬದುಕಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವೇ ಇಲ್ಲ. ಮತ್ತೊಂದು ಕಡೆ ಬಿಜೆಪಿ ಸೇವೆಯೇ ಸಂಘಟನೆ ಎಂಬ ಶ್ರೇಷ್ಠ ಭಾವನೆಯಿಂದ ದೇಶ ಮೊದಲು, ನಂತರ ಪಕ್ಷ ಎಂಬ ಉತ್ತಮ ಸಿದ್ಧಾಂತ ಹೊಂದಿದೆ. ಕೋವಿಡ್ ದಿನಗಳಲ್ಲಿ ದೇಶದ ಇತರ ರಾಜಕೀಯ ಪಕ್ಷದವರು ಮನೆಯಲ್ಲಿ ಕೂತಿದ್ದರು. ಆದರೆ, ನಮ್ಮ ಪಕ್ಷವು ದೇಶದ ಲಕ್ಷಾಂತರ ಜನರ ಸಂಕಷ್ಟಕ್ಕೆ ಸ್ಪಂದಿಸಿತ್ತು ಎಂದು ವಿವರಿಸಿದರು. ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ಸೇರಿ, ಮುಖಂಡರು, ಕಾರ್ಯಕರ್ತರು ಆಹಾರದ ಕಿಟ್ ನೀಡುವುದು ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಉಚಿತ ಔಷಧಿ, ಮಾತ್ರೆ ಕೊಡುವ ಕೆಲಸ ಮಾಡಿದ್ದರು ಎಂದರು.
ಕಳೆದ ಬಾರಿ 1.04 ಕೋಟಿ ಸದಸ್ಯರ ನೋಂದಣಿ ಆಗಿತ್ತು. ಈ ಬಾರಿ ಇನ್ನೂ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಲಾಗುವುದು. ಎಲ್ಲ ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸುತ್ತಾರೆ ಎಂದು ಹೇಳಿದರು. ಮುಂದಿನ 40-45 ದಿನಗಳ ಕಾಲ ಎರಡು ಹಂತಗಳ ಅಭಿಯಾನದಲ್ಲಿ ಭಾಗವಹಿಸೋಣ ಎಂದು ತಿಳಿಸಿದರು.
ಬಿಜೆಪಿ ಸದಸ್ಯತ್ವ ಅಭಿಯಾನ ಪರ್ವದ ಉದ್ಘಾಟನೆ ಇವತ್ತು ನಡೆದಿದೆ. ಇದು ಹಬ್ಬದ ವಾತಾವರಣ. ಗಣೇಶ ಹಬ್ಬದ ಹತ್ತಿರದಲ್ಲಿ ನಾವಿದ್ದು, ರಾಜ್ಯದ ಜನತೆಗೆ ಗೌರಿಗಣೇಶ ಹಬ್ಬದ ಶುಭಾಶಯಗಳು ಎಂದು ತಿಳಿಸಿದರು. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರು ಮೊನ್ನೆ ಈ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ಅರ್ಥಪೂರ್ಣ ಅಭಿಯಾನ ನಡೆಸಬೇಕೆಂದು ರಾಷ್ಟ್ರೀಯ ಅಧ್ಯಕ್ಷ ನಡ್ಡಾಜೀ ಅವರ ಅಪೇಕ್ಷೆ ಇದೆ. ಬಿಜೆಪಿ ಕೇವಲ ರಾಜಕೀಯ ಪಕ್ಷವಲ್ಲ. ಬಿಜೆಪಿ ಸರ್ವಸ್ಪರ್ಶಿ- ಸರ್ವವ್ಯಾಪಿ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷವು ಸದಸ್ಯತ್ವ ಆಧಾರದಲ್ಲಿ ಪಕ್ಷ ಬೆಳೆಸುವುದಿಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ- ಅವರ ಕುಟುಂಬ ಇದೆಯೇ ಎಂಬುದು ಅವರಿಗೆ ಮಹತ್ವದ್ದು. ಒಂದೊಮ್ಮೆ ರಾಹುಲ್ ಗಾಂಧಿ ಅವರಿಗೆ ಬೇಸರವಾಗಿ ಇಟೆಲಿಗೆ ಹೋದರೆ ಆ ಪಕ್ಷ ಇರುವುದಿಲ್ಲ. ಅದು ಲೀಡರ್ಗಳ ಪಕ್ಷ. ನಮ್ಮದು ಕಾರ್ಯಕರ್ತರ ಪಕ್ಷ ಎಂದು ತಿಳಿಸಿದರು.
ಸದಸ್ಯತ್ವವನ್ನು ವಿಸ್ತøತವಾಗಿ ಮಾಡಬೇಕಿದೆ. ಅದಕ್ಕಾಗಿ ಬೀದಿಗೆ ಇಳಿಯಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷವು ಹೆಸರಿಗೆ ಬೇಕಾಗಿ ಹಣ ತಾವೇ ನೀಡಿ ಸದಸ್ಯರನ್ನು ಮಾಡುತ್ತದೆ. ಇಲ್ಲಿ ಹಾಗಿಲ್ಲ. ನಾವು ಸದಸ್ಯತ್ವಕ್ಕೆ ಶುಲ್ಕ ಇಟ್ಟಿಲ್ಲ. ಸಕ್ರಿಯ ಸದಸ್ಯರು 100 ರೂ. ಕೊಡಬೇಕಿದೆ ಎಂದು ಹೇಳಿದರು. ಬಿಜೆಪಿಯ ಜೀವ ಕಾರ್ಯಕರ್ತರು ಮತ್ತು ಸದಸ್ಯರಲ್ಲಿದೆ ಎಂದು ತಿಳಿಸಿದರು.












Click it and Unblock the Notifications