ಮೋದಿ ಫಲಾನುಭವಿಗಳು: ಚಕ್ರವರ್ತಿ ಸೂಲಿಬೆಲೆ Vs ಶೋಭಾ ಕರಂದ್ಲಾಜೆ
ಬೆಂಗಳೂರು, ಜೂನ್ 28: ನರೇಂದ್ರ ಮೋದಿಯ ಹೆಸರಿನಲ್ಲಿ ಗೆದ್ದಿರುವುದು ನಮ್ಮ ಹೆಮ್ಮೆ, ಯಾರಿಂದಲೂ ಹೇಳಿಸಿಕೊಳ್ಳುವ ಅವಶ್ಯಕತೆ ನನಗಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಿಜೆಪಿ ಸಂಸದರ ಬಗ್ಗೆ ಚಕ್ರವರ್ತಿ ಸೂಲಿಬೆಲೆ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿರುವ ವಿಚಾರವನ್ನು ಮಾಧ್ಯಮದವರು ಪ್ರಸ್ತಾವಿಸಿದಾಗ ಶೋಭಾ, ಮೋದಿ ಹೆಸರಿನಲ್ಲಿ ಗೆದ್ದರೆ ಅದರಲ್ಲಿ ತಪ್ಪೇನಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ಮೋದಿ ಸರಕಾರ ಮಾಡಿರುವ ಅಭಿವೃದ್ದಿ ಕೆಲಸದಿಂದ ನಾವೆಲ್ಲಾ ಗೆದ್ದಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.
ರಾಯಚೂರಿನಲ್ಲಿ ನಡೆದ ಘಟನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಶೋಭಾ, ಸಮ್ಮಿಶ್ರ ಸರಕಾರ ಎಲ್ಲಾ ರಂಗದಲ್ಲೂ ವೈಫಲ್ಯತೆಯನ್ನು ಕಾಣುತ್ತಿದೆ. ಆ ತಪ್ಪನ್ನು ಮುಚ್ಚಿಕೊಳ್ಳಲು ನರೇಂದ್ರ ಮೋದಿ ವಿರುದ್ದ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದಾರೆಂದು ಶೋಭಾ ಹೇಳಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು ಹೀಗೆ, " ನಾಲ್ಕು ಲಕ್ಷ ಮತಗಳ ಅಂತರದಿಂದ ಗೆದ್ದವರೂ ನಲವತ್ತೇ ಸಾವಿರ ಮತಗಳ ಅಂತರದಿಂದ ಗೆದ್ದವರು ಎಲ್ಲರೂ ಮೋದಿ ಮತಭಿಕ್ಷೆಯ ಫಲಾನುಭವಿಗಳೇ"
"ಮೋದಿಯೊಬ್ಬರಿಲ್ಲದೇ ಹೋಗಿದ್ದರೆ ಕರ್ನಾಟಕದ ಬಹುತೇಕ ಸಂಸದರ ಪರಿಸ್ಥಿತಿ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್ ಮುನಿಯಪ್ಪನವರಿಗಿಂತಲೂ ಭಿನ್ನವಾಗಿರುತ್ತಿರಲಿಲ್ಲ. ಸೋಲು ಹೀನಾಯವಾಗಿರುತ್ತಿತ್ತು" ಎಂದು ಚಕ್ರವರ್ತಿ ಬರೆದುಕೊಂಡಿದ್ದರು.
ಗ್ರಾಮಸ್ವರ್ಗ ಅಭಿಯಾನದ ಹೆಸರಿನಲ್ಲಿ ಒಂದೊಂದು ಗ್ರಾಮವನ್ನು ದತ್ತು ಪಡೆದುಕೊಂಡು, ಅಭಿವೃದ್ದಿ ಪಡಿಸುವ ಚಾಲೆಂಜ್ ಅನ್ನು ಯುವ ಬ್ರಿಗೇಡ್ ಮೂಲಕ ಚಕ್ರವರ್ತಿ ಸೂಲಿಬೆಲೆ ರಾಜ್ಯದ ಎಲ್ಲಾ 28 ಸಂಸದರಿಗೆ ನೀಡಿದ್ದರು.












Click it and Unblock the Notifications