ಕಾವೇರಿ ತೀರ್ಪು ಅನುಷ್ಠಾನ: ಎರಡು ವಾರ ಸಮಯ ಕೋರಿದ ಕೇಂದ್ರ ಸರ್ಕಾರ
ಬೆಂಗಳೂರು, ಏಪ್ರಿಲ್ 27: ಕಾವೇರಿ ನದಿ ನೀರು ವಿವಾದದ ಸಂಬಂಧದ ತೀರ್ಪನ್ನು ಜಾರಿಗೊಳಿಸಲು ಎರಡು ವಾರಗಳ ಸಮಯಾವಕಾಶ ಕೋರಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದೆ.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಯಾವ ರೀತಿ ಅನುಷ್ಠಾನಗೊಳಿಸಬಹುದು ಎಂಬುದಕ್ಕೆ ಸೂಕ್ತ ಚೌಕಟ್ಟು ರೂಪಿಸಲು ಇನ್ನೂ ಹೆಚ್ಚಿನ ಸಮಯದ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕಾವೇರಿ ತೀರ್ಪು ಜಾರಿಯ ಸ್ಕೀಮ್ ರಚಿಸುವ ಸಂಬಂಧ ಮೇ 3ರಂದು ವಿಚಾರಣೆ ನಡೆಯಲಿದೆ. ತಮಿಳುನಾಡು ಸರ್ಕಾರವು ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧ ಸುಪ್ರೀಂ ಕೋರ್ಟ್ನಿಂದ ಸ್ಪಷ್ಟನೆಯನ್ನು ಕೋರಿತ್ತು. ಮಂಡಳಿ ಕುರಿತು ತೀರ್ಪಿನಲ್ಲಿ ಪ್ರಸ್ತಾಪಿಸಿರಲಿಲ್ಲ. ಆದರೆ, ತನ್ನ ಆದೇಶವನ್ನು ಜಾರಿಗೊಳಿಸಲು ವ್ಯವಸ್ಥೆ ರೂಪಿಸುವಂತೆ ಅದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಕಾವೇರಿ ನೀರು ವಿವಾದದ ಕುರಿತಂತೆ ಪರಿಹಾರ ಕಂಡುಕೊಳ್ಳುವ ಸೂತ್ರಗಳ ಕರಡನ್ನು ಸಿದ್ಧಪಡಿಸುವಂತೆ ಸಹ ಕೋರ್ಟ್ ಕೇಂದ್ರಕ್ಕೆ ಸೂಚಿಸಿತ್ತು. ಕಾವೇರಿ ವಿವಾದದ ಕುರಿತು ತಮಿಳುನಾಡು ಕೇಂದ್ರ ಸರ್ಕಾರದ ವಿರುದ್ಧ ಹೂಡಿರುವ ನ್ಯಾಯಾಂಗ ನಿಂದನೆ ದಾವೆಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.
ನಿಗದಿತ ಕಾಲಮಿತಿಯೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ತಮಿಳುನಾಡು ಆರೋಪಿಸಿತ್ತು.
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿಗಳ ನಡುವೆ ನೀರು ಹಂಚಿಕೆ ಸೂತ್ರವನ್ನು ಕೇಂದ್ರ ರೂಪಿಸುವ ಕರಡು ಒಳಗೊಳ್ಳಬೇಕಿದೆ. ಸೂಚನೆ ನೀಡಿ ಆರು ತಿಂಗಳು ಕಳೆದರೂ ಕರಡು ಯೋಜನೆ ಸಿದ್ಧಪಡಿಸದ ಕೇಂದ್ರದ ವಿಳಂಬ ಧೋರಣೆ ವಿರುದ್ಧ ಸುಪ್ರೀಂಕೋರ್ಟ್ ಕಿಡಿಕಾರಿತ್ತು.
ಕರಡು ಸಿದ್ಧಪಡಿಸುವ ಸಂಬಂಧ ಇರುವ ತೊಡಕುಗಳ ಕುರಿತು ಮಾರ್ಚ್ 31ರ ಕಾಲಮಿತಿಯೊಳಗೆ ಕೋರ್ಟ್ಗೆ ವಿವರಣೆ ನೀಡದೆ ಇರುವುದಕ್ಕೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಸಂಬಂಧ ಕೇಂದ್ರವು ಸಮರ್ಪಕ ವ್ಯವಸ್ಥೆಯನ್ನು ರೂಪಿಸಬೇಕು ಮತ್ತು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಸೂಚಿಸಿತ್ತು.
ಅಲ್ಲದೆ, ಕಾವೇರಿ ನೀರು ತೀರ್ಪನ್ನು ಅನುಷ್ಠಾನಗೊಳಿಸುವ ಸ್ಕೀಮ್ ಅನುಮೋದನೆ ಪಡೆದುಕೊಳ್ಳುವವರೆಗೂ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ಕೇಂದ್ರಸರ್ಕಾರ ನಿರ್ವಹಿಸಬೇಕು ಎಂದು ಹೇಳಿತ್ತು.












Click it and Unblock the Notifications