2019ಕ್ಕೆ ಕೇಂದ್ರ ಸರಕಾರ ಬಿಜೆಪಿ ಮುಕ್ತವಾಗಲಿದೆ: ಮೋದಿಗೆ ಪರಮೇಶ್ವರ್ ತಿರುಗೇಟು
ಬೆಂಗಳೂರು, ಫೆಬ್ರವರಿ 4: ಅರಮನೆ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಭಾಷಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅಂಕಿ ಅಂಶಗಳ ಸಮೇತ ತಿರುಗೇಟು ನೀಡಿದರು. ಕಾಂಗ್ರೆಸ್ ಮುಕ್ತ ಕರ್ನಾಟಕದ ಬಗ್ಗೆ ಮಾತನಾಡುವ ಮೊದಲು 2019ರಲ್ಲಿ ಕೇಂದ್ರ ಸರಕಾರ ಬಿಜೆಪಿ ಮುಕ್ತವಾಗಲಿದೆ ಎನ್ನುವುದನ್ನು ಪ್ರಧಾನಿ ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು ಎಂದು ಪರಮೇಶ್ವರ್ ವಾಗ್ದಾಳಿ ನಡೆಸಿದರು.
ಪ್ರಧಾನಿ ಭಾಷಣದ ಬೆನ್ನಿಗೆ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪರಮೇಶ್ವರ್ ಮೋದಿ ವಿರುದ್ಧ ಹರಿಹಾಯ್ದರು.
"ಕರ್ನಾಟಕ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ನರೇಂದ್ರ ಮೋದಿ ಹೇಳುತ್ತಾರೆ. ಆದರೆ ಈ ಹಿಂದಿನ ಬಿಜೆಪಿ ಸರಕಾರದ ಭ್ರಷ್ಟಾಚಾರವನ್ನು ಅವರು ಮರೆತಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದ ಯಡಿಯೂರಪ್ಪರನ್ನು ಪಕ್ಕದಲ್ಲಿ ವೇದಿಕೆಯಲ್ಲೇ ಕೂರಿಸಿಕೊಂಡು ಈ ಆರೋಪ ಮಾಡುತ್ತಾರೆ," ಎಂದು ಪರಮೇಶ್ವರ್ ವ್ಯಂಗ್ಯವಾಡಿದರು.

"ಕರ್ನಾಟಕದಲ್ಲಿ ಶೇಕಡಾ 10 ಕಮಿಷನ್ ಪಡೆಯದೇ ಕೆಲಸವಾಗುವುದಿಲ್ಲ ಎನ್ನುತ್ತಾರೆ. ಅವರಿಗೆ ಈ ಬಗ್ಗೆ ಯಾರು ಮಾಹಿತಿ ನೀಡಿದ್ದಾರೋ ಗೊತ್ತಿಲ್ಲ. ಯಾವ ಪ್ರಾಜೆಕ್ಟ್ ನಲ್ಲಿ ಶೇ. 10 ಕಮಿಷನ್ ಪಡೆದಿದ್ದಾರೆ ಎಂದು ಅವರು ಹೇಳಬೇಕು. ಇಲ್ಲದೇ ಹೋದರೆ ಪ್ರಧಾನಿ ಮಾತಿಗೆ ಅರ್ಥ ಬರುವುದಿಲ್ಲ. ಪ್ರಧಾನ ಮಂತ್ರಿ ಅಂದರೆ ಇಡೀ ದೇಶವೇ ಕೇಳುತ್ತದೆ. ನಾವೂ ಕೇಳುತ್ತೇವೆ. ಹೀಗಿರುವಾಗ ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು," ಎಂದು ಹೇಳಿದ ಕೆಪಿಸಿಸಿ ಅಧ್ಯಕ್ಷರು, "ಇದು ಕರ್ನಾಟಕ ಹಾಗೂ ಕರ್ನಾಟಕದ ಜನತೆಗೆ ಮಾಡಿದ ಅವಮಾನ ಎಂದು ವಿಶ್ಲೇಷಿಸುತ್ತೇನೆ," ಎಂದಿದ್ದಾರೆ.
ಪರಮೇಶ್ವರ್ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು ಇಲ್ಲಿವೆ..
* ಸ್ಟೀಲ್ ಬ್ರಿಡ್ಜ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದಿದ್ದಾರೆ. ಆದರೆ ನಾವು ಆ ಯೋಜನೆಯನ್ನೇ ಕೈಬಿಟ್ಟಿದ್ದೇವೆ.
* ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಕೌಂಟ್ ಡೌನ್ ಆರಂಭವಾಗಿದೆ ಎಂದಿದ್ದಾರೆ. ಭಾರತೀಯ ಜನತಾ ಪಾರ್ಟಿ ಮುಕ್ತ ಕೇಂದ್ರ ಆಗುತ್ತದೆ ಎನ್ನುವುದನ್ನು ಅವರು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು. 2019ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.
* ದೇಶದಲ್ಲಿ 4 ಕೋಟಿ ಜನ ಕಗತ್ತಲಲ್ಲಿದ್ದಾರೆ ಎಂದಿದ್ದಾರೆ. 126 ಕೋಟಿ ಜನರಿಗೆ ಕಾಂಗ್ರೆಸ್ ಪಕ್ಷ ಬೆಳಕು ಕೊಟ್ಟಿದ್ದನ್ನು ಅವರು ಜ್ಞಾಪಿಸಿಲ್ಲ.
* 17,000 ಕೋಟಿ ನಾವು ಸಬ್ ಅರ್ಬನ್ ರೈಲಿಗೆ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಆದರೆ ಕೇಂದ್ರ ಪಾಲು ಶೇ. 20 ಮಾತ್ರ. ರಾಜ್ಯ ಶೇ. 20, ಹಣಕಾಸು ಸಂಸ್ಥೆಗಳು ಶೇಕಡಾ 60 ಹಣ ನೀಡಲಿವೆ. ಹಣಕಾಸು ಸಂಸ್ಥೆಗಳ ನೀಡುವ ಹಣದ ಜವಾಬ್ದಾರಿ ನಮಗೂ ಇದೆ.
* 'ಆಪರೇಷನ್ ಗ್ರೀನ್' ಮೂಲಕ ಬೆಳೆಗಳಿಗೆ ಒಂದೂವರೆ ಪಟ್ಟು ಬೆಲೆ ಬರುವಂತೆ ಮಾಡುತ್ತೇನೆ ಎಂದಿದ್ದಾರೆ. ಆದರೆ ದೇಶದಲ್ಲಿ 12,000 ರೈತರು ಸತ್ತಿದ್ದು, ಅವರಿಗೆ ಒಂದು ರೂಪಾಯಿ ಪರಿಹಾರವನ್ನೂ ನೀಡಿಲ್ಲ. ಒಂದೂವರೆ ಪಟ್ಟು ಬೆಲೆ ಹೇಗೆ ಜಾಸ್ತಿ ಮಾಡುತ್ತಾರೋ ಗೊತ್ತಿಲ್ಲ.
* ಕರ್ನಾಟಕ ಸರಕಾರ ರೈತ ವಿರೋಧಿ ಎಂದಿದ್ದಾರೆ. ಸರಕಾರ 50,00 ರೂಪಾಯಿ ಸಾಲ ಮನ್ನಾ ಮಾಡಿದೆ. ನೀರಾವರಿ ಸಾಕಷ್ಟು ಅನುದಾನ ನೀಡಿದೆ. 3 ಲಕ್ಷವರೆಗೂ ಬಡ್ಡಿ ರಹಿತ, 10 ಲಕ್ಷ ವರೆಗೆ ಶಢ. ಬಡ್ಡಿದರದಲ್ಲಿ ಸಾಲ ನೀಡಿದ ಸರಕಾರ ಹೇಗೆ ರೈತ ವಿರೋಧಿಯಾಗಲು ಸಾಧ್ಯ?
* ಮಹಾದಾಯಿ ಹೋರಾಟದಲ್ಲಿ ರೈತರು ಸತ್ತಿದ್ದಾರೆ. ಸಂವಿಧಾನದ ಆರ್ಟಿಕಲ್ 256ರ ಅಡಿಯಲ್ಲಿ ಪ್ರಧಾನಿ ಮಧ್ಯಪ್ರವೇಶಿಸಲು ಅವಕಾಶವಿದ್ದರೂ ಮಧ್ಯಪ್ರವೇಶಿಸಿಲ್ಲ. ಹುಬ್ಬಳ್ಳಿ-ಧಾರವಾಡದಲ್ಲಿ ಕುಡಿಯಲು ನೀರಿಲ್ಲ. ಹೀಗಿದ್ದೂ ಭಾಷಣದಲ್ಲಿ ಮಹಾದಾಯಿ ಪ್ರಸ್ತಾಪವಿಲ್ಲ.
* ಕರ್ನಾಟಕ ಅಪರಾಧಿಗಳ ರಾಜ್ಯ ಎನ್ನುತ್ತಾರೆ. ಬೆಂಗಳೂರು ವಿಶ್ವದಲ್ಲೇ ಡೈನಾಮಿಕ್ ನಗರ. ಏಷ್ಯಾದಲ್ಲೇ ಅತೀ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ನಗರ. ದೇಶದಲ್ಲಿ ಅಪರಾಧಗಳಲ್ಲಿ ಶೇ. 9.5 ಉತ್ತರ ಪ್ರದೇಶದಲ್ಲಿ, ಶೇ. 8.5 ಮಧ್ಯಪ್ರದೇಶದಲ್ಲಿ ನಡೆಯುತ್ತದೆ. ಅಲ್ಲಿ ಬಿಜೆಪಿ ಸರಕಾರಗಳಿವೆ. ಅಪರಾಧಗಳಲ್ಲಿ ಕರ್ನಾಟಕ ಟಾಪ್ 10ರಲ್ಲಿ ಬಂದೇ ಇಲ್ಲ.
* 'ಈಸ್ ಆಫ್ ಡೂಯಿಂಗ್ ಮರ್ಡರ್, 23 ಜನ ಬಿಜೆಪಿ ಹಿಂದೂಗಳ ಹತ್ಯೆಯಾಗಿದೆ ಎನ್ನುತ್ತಾರೆ. ಆದರೆ ಗೃಹ ಸಚಿವರ ಮಾಹಿತಿ ಪ್ರಕಾರ ಕೋಮು ಘಟನೆಗಳಿಗೆ ಸತ್ತವರು ಕೇವಲ 9. ಈ ಪ್ರಕರಣಗಳಲ್ಲಿ ಅನೇಕರನ್ನು ದಸ್ತಗಿರಿ ಮಾಡಲಾಗಿದೆ; ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
* 3.3 ಲಕ್ಷ ಕೋಟಿ ಬಿಡುಗಡೆ ಮಾಡಿದ್ದೇವೆ. ಕೇವಲ 30 ಸಾವಿರ ಕೋಟಿ ಉಪಯೋಗವಾಗಿದೆ ಎನ್ನುತ್ತಾರೆ. ಒಂದೊಮ್ಮೆ ನಾವು ಪ್ಲಾನ್ ಆಫ್ ಅಲೊಕೇಶನ್ ನೀಡದಿದ್ದಲ್ಲಿ ಮುಂದಿನ ವರ್ಷ ಹಣ ಕೊಡುವುದಿಲ್ಲ. ಆದರೆ ಪ್ರತೀ ವರ್ಷ ಕರ್ನಾಟಕಕ್ಕೆ ಶೇ. 15 ಜಾಸ್ತಿ ಹಣ ನೀಡಿದ್ದಾರೆ. ನಮ್ಮ ಪ್ಲಾನ್ ಆಫ್ ಅಲೋಕೇಶನ್ ಸರಿಯಾಗಿದೆ.
* 3.34 ಲಕ್ಷ ಮನೆ ಮಂಜೂರಾಗಿದ್ದಲ್ಲಿ 36 ಸಾವಿರ ಮಾತ್ರ ನಿರ್ಮಾಣವಾಗಿದೆ ಎನ್ನುತ್ತಿದ್ದಾರೆ. ತಪ್ಪು ಮಾಹಿತಿ ಯಾರು ಕೊಟ್ಟಿದ್ದಾರೋ ಗೊತ್ತಿಲ್ಲ. ಕರ್ನಾಟಕ ಸರಕಾರದ ವತಿಯಿಂದ 15 ಲಕ್ಷ ಮನೆ ನಿರ್ಮಾಣವಾಗಿದೆ.
* ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 900 ಕೋಟಿ ನೀಡಿದ್ದು 160 ಕೋಟಿ ರೂ. ಉಪಯೋಗವಾಗಿದೆ ಎಂದಿದ್ದಾರೆ. ಅದರಲ್ಲಿ ಅವರ ಪಾಲು ಕೇವಲ 35%. ಜತೆಗೆ ಅವರ ಪ್ರಕ್ರಿಯೆಯಲ್ಲಿನ ವಿಳಂಬದಿಂದ ಹಣ ಬಳಕೆಯಾಗಿಲ್ಲ. ಅದಕ್ಕೆ ನಾವು ಕಾರಣ ಅಲ್ಲ.
* ಸಾಲ ಮನ್ನಾ ಕೇಳಿದ್ದೆವು. ಅದರ ಪ್ರಸ್ತಾಪ ಬಜೆಟ್ ನಲ್ಲೂ ಇಲ್ಲ. ಇವತ್ತೂ ಇಲ್ಲ. ಮಹಾದಾಯಿ ಪ್ರಸ್ತಾಪವೂ ಇಲ್ಲ.
ಇದೇ ವೇಳೆ ಪ್ರಧಾನಿ ಆರೋಪಕ್ಕೆ ಉತ್ತರ ನೀಡಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ, "ಗುಜರಾತಿನಲ್ಲಿ ನೀವು ಪ್ರಧಾನಿಯಾಗಿದ್ದಾಗಲೇ 60 ಕರಸೇವಕರು ಸತ್ತಿದ್ದರು ಎಂಬುದನ್ನು ಮರೆಯಬೇಡಿ. ನಿಮಗೆ ಅಮೆರಿಕಾ ಸೇರಿದಂತೆ ಹಲವು ದೇಶಗಳು ವೀಸಾ ಕೂಡ ನೀಡುತ್ತಿರಲಿಲ್ಲ," ಎಂದು ಟಾಂಗ್ ನೀಡಿದ್ದಾರೆ.












Click it and Unblock the Notifications