ಅಶ್ಲೀಲ ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಆರೋಪ ಮುಕ್ತ?
ಬೆಂಗಳೂರು, ಜು. 27: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿರಪರಾಧಿಯಾಗಿ ಹೊರ ಬಿದ್ದಿದ್ದು, ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಎಸ್ಐಟಿ ಮುಂದಾಗಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಂತ್ರಸ್ತ ಯುವತಿಗೆ ಕೆಲಸದ ಅಮಿಷ ತೋರಿ ಲೈಂಗಿಕವಾಗಿ ದೌರ್ಜನ್ಯ ಎಸಗಿಲ್ಲ. ಬದಲಿಗೆ ಜಾರಕಿಹೊಳಿಯನ್ನು ಖೆಡ್ಡಾಗೆ ಬೀಳಿಸಿ ಸುಲಿಗೆಗೆ ಯತ್ನಿಸಿದ ಸಂಬಂಧ ಸಂತ್ರಸ್ತ ಯುವತಿ ಸೇರಿ ಮೂವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಎಸ್ಐಟಿ ತನಿಖಾ ತಂಡ ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನನಗೆ ಕೆಲಸದ ಅಮಿಷ ತೋರಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದು ಸಂತ್ರಸ್ತ ಯುವತಿ ಆರೋಪಿಸಿ ದೂರು ನೀಡಿದ್ದರು. ಅಶ್ಲೀಲ ಸಿಡಿ ತಯಾರಿಸಿ ನನಗೆ ಬ್ಲಾಕ್ ಮೇಲ್ ಮಾಡಿದ್ದರು ಎಂದು ಆರೋಪಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೂರು ನೀಡಿದ್ದರು. ರಾಸಲೀಲೆ ಸಿಡಿ ಹೊರ ಬರುತ್ತಿದ್ದಂತೆ ಜಲ ಸಂಪನ್ಮೂಲ ಖಾತೆಗೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು.
ರಮೇಶ್ ಜಾರಕಿಹೊಳಿ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಬಿ ವರದಿ ಸಲ್ಲಿಸಲಿದ್ದಾರೆ. ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಸೇರಿ ಮೂವರ ವಿರುದ್ಧ ಲಭ್ಯ ಸಾಕ್ಷ್ಯಾಧಾರಗಳ ಆಧಾರದ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೈಕೋರ್ಟ್ ಅನುಮತಿ ನೀಡಿದ ಕೂಡಲೇ ಎರಡು ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸಂತ್ರಸ್ತ ಯುವತಿಗೆ ಸರ್ಕಾರಿ ಕೆಲಸ ಕೊಡಿಸುವ ಬಗ್ಗೆ ಆಸೆ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಸಾಕ್ಷ್ಯಾಧಾರ ಸಿಕ್ಕಿಲ್ಲ. ಸಂತ್ರಸ್ತ ಯುವತಿ ಇಂಜಿನಿಯರಿಂಗ್ ಪದವಿಯನ್ನೇ ಪೂರ್ಣಗೊಳಿಸಿಲ್ಲ. ಎರಡನೇ ವರ್ಷದಲ್ಲಿಯೇ ಇಂಜಿನಿಯರಿಂಗ್ ಪದವಿ ನಿಲ್ಲಿಸಿದ್ದಾಳೆ. ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿಯನ್ನು ಡ್ಯಾಮ್ ಶ್ಯೂಟ್ ಮಾಡುವ ವಿಚಾರವಾಗಿ ಭೇಟಿ ಮಾಡಿದ್ದಾರೆ. ಈ ಪ್ರಸ್ತಾಪ ಕುರಿತು ಪರಿಶೀಲನೆ ಮಾಡಲು ಜಾರಕಿಹೊಳಿ ತಮ್ಮ ಆಪ್ತ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಡ್ರೋನ್ ಹಾಗೂ ಡಾಕ್ಯುಮೆಂಟರಿ ಬಗ್ಗೆ ಯುವತಿಗೆ ಸಾಮಾನ್ಯ ಜ್ಞಾನ ಹೊಂದಿರಲಿಲ್ಲ.
ಹೀಗಾಗಿ ಜಾರಕಿಹೊಳಿಯನ್ನು ಟ್ರ್ಯಾಪ್ ಮಾಡುವ ಉದ್ದೇಶದಿಂದ ಡ್ರೋನ್ ಶೂಟ್ ಹೆಸರಿನಲ್ಲಿ ಭೇಟಿ ಮಾಡಿದ್ದಾರೆ. ಅಲ್ಲದೇ ಸಂತ್ರಸ್ತ ಯುವತಿ ಜತೆ ಸಂಪರ್ಕ ಬೆಳೆಸಿರುವುದನ್ನು ರಹಸ್ಯ ಕ್ಯಾಮರಾ ಇಟ್ಟು ರೆಕಾರ್ಡ್ ಮಾಡಲಾಗಿದೆ. ತನಿಖೆಯಲ್ಲಿ ಬೆಳಕಿಗೆ ಬಂದಿರುವ ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಜಾರಕಿಹೊಳಿ ದಾಖಲಿಸಿರುವ ದೂರಿಗೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ಸಲ್ಲಿಸಲು ಎಸ್ಐಟಿ ತಯಾರಿ ನಡೆಸಿದ್ದಾರೆ.
ರಮೇಶ್ ಜಾರಕಿಹೊಳಿಯನ್ನು ಸಂಪರ್ಕಿಸಲು ಪ್ರತ್ಯೇಕ ಮೊಬೈಲ್ ನಂಬರ್ನ್ನು ಸಂತ್ರಸ್ತ ಯುವತಿಗೆ ಶಂಕಿತ ಆರೋಪಿಗಳು ನೀಡಿದ್ದರು. ಮೂವರು ಆರ್.ಟಿ. ನಗರದ ಪಿಜಿಯಲ್ಲಿ ಮಾತುಕತೆ ನಡೆಸಿದ್ದಾರೆ. ಜಾರಕಿಹೊಳಿಯನ್ನು ಸಂಪರ್ಕಿಸಲು ಬಳಸಿದ್ದ ಮೊಬೈಲ್ ಕೂಡ ತನಿಖಾ ತಂಡಕ್ಕೆ ಸಿಕ್ಕಿದೆ. ರಮೇಶ್ ಜಾರಕಿಹೊಳಿಯನ್ನು ಸಂತ್ರಸ್ತ ಯುವತಿ ಭೇಟಿ ಮಾಡಿದಾಗಲೆಲ್ಲಾ ಆಕೆಯ ಸಂಪರ್ಕದಲ್ಲಿ ಶಂಕಿತ ಆರೋಪಿಗಳು ಇದ್ದರು.
ರಮೇಶ್ ಜಾರಕಿಹೊಳಿ ರಾಸಲೀಲೆ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾದ ಬಳಿಕ ಸಂತ್ರಸ್ತ ಯುವತಿ ಮತ್ತೊಬ್ಬ ಆರೋಪಿಗೆ ಕರೆ ಮಾಡಿ ಕೆಲಸ ಆಗಿದೆ ಎಂದು ಹೇಳಿದ್ದಾಳೆ ಎಂಬುದು ಎಸ್ಐಟಿ ತನಿಖೆಯಲ್ಲಿ ಬಯಲಾಗಿದೆ. ತನಿಖೆ ಪೂರ್ಣಗೊಂಡಿದ್ದು, ಹೈಕೋರ್ಟ್ ಗಮನಕ್ಕೆ ಎಸ್ಐಟಿ ತಂದಿದೆ. ನ್ಯಾಯಾಲಯ ಅನುಮತಿ ನೀಡಿದ ಕೂಡಲೇ ಎರಡು ಪ್ರತ್ಯೇಕ ಪ್ರಕರಣದಲ್ಲಿ ಅಂತಿಮ ವರದಿಯನ್ನು ಅಧೀನ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಎಸ್ಐಟಿ ಹೇಳಿದೆ. ಎಸ್ಐಟಿ ಅಂತಿಮ ವರದಿ ಸಲ್ಲಿಸಿ ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಹೊರ ಬಂದಲ್ಲಿ ಮತ್ತೆ ಸಚಿವ ಸ್ಥಾನ ಪಡೆಯುವ ಸಾಧ್ಯತೆಯಿದೆ.