ತಮಿಳುನಾಡಿಗೆ ನೀರು ಹರಿಸಲು ಸೂಚನೆ ನೀಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ
ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ಕರ್ನಾಟಕಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬರದ ನಡುವೆಯೂ ಮತ್ತೆ 15 ದಿನ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಸೂಚನೆ ನೀಡಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಅಂತ್ಯವಾಗಿದ್ದು ಸಭೆಯಲ್ಲಿ ಈ ತಿರ್ಮಾನ ಮಾಡಲಾಗಿದೆ. ಕರ್ನಾಟಕದಿಂದ ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ಸ್ ಹರಿಸಲು ಸೂಚನೆ ನೀಡಲಾಗಿದೆ. ಮುಂದಿನ ಹದಿನೈದು ದಿನ ಪ್ರತೀದಿನ ಐದು ಸಾವಿರ ಕ್ಯೂಸೆಕ್ಸ್ ಹರಿಸಲು ಸೂಚನೆ ನೀಡಿದ್ದು, ರಾಜ್ಯಕ್ಕೆ ಮತ್ತಷ್ಟು ಸಂಕಷ್ಟ ತಂದಿದೆ.

ಈಗಾಗಲೇ ರಾಜ್ಯದಿಂದ ತಮಿಳುನಾಡಿಗೆ 1900 ಕ್ಯೂಸೆಕ್ ನೀರು ಬಿಡುತ್ತಿದೆ. ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯ ಸೂಚನೆ ಮೇರೆಗೆ ಇನ್ನೂ 3,100 ಕ್ಯೂಸೆಕ್ ನೀರು ಹರಿಸಬೇಕಾಗಿದೆ. ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ 5000 ಕ್ಯೂಸೆಕ್ ದಾಖಲಾಗಬೇಕಾದ ಕಾರಣ, 3100 ಕ್ಯೂಸೆಕ್ ನೀರು ಬಿಡಗಡೆ ಮಾಡಲೇಬೇಕಾಗಿದೆ.
ತೀವ್ರ ಸಂಕಷ್ಟದ ನಡುವೆಯೂ ಈಗಾಗಲೇ ತಮಿಳುನಾಡಿಗೆ ಪ್ರತಿ ದಿನ 15 ಸಾವಿರ ಕ್ಯೂಸೆಕ್ನಂತೆ 10 ದಿನ ನೀರು ಹರಿಸಲಾಗಿದೆ. ಆಗಸ್ಟ್ನಲ್ಲಿ ಮಳೆ ಕೈಕೊಟ್ಟ ಕಾರಣ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಬೆಳೆ ನಾಟಿ ಮಾಡದಂತೆ ರಾಜ್ಯ ಸರ್ಕಾರ ಮನವಿ ಮಾಡಿತ್ತು, ರಾಜ್ಯದ ರೈತರ ಆಕ್ರೋಶದ ನಡುವೆಯೂ ಈಗ ತಮಿಳುನಾಡಿಗೆ ಮತ್ತೆ ಕಾವೇರಿ ಹರಿಯಲಿದೆ.
ಸಭೆಯ ಆರಂಭದಲ್ಲಿ ತಮಿಳುನಾಡು ಮಳೆಯ ಕೊರತೆಯನ್ನು ಪರಿಗಣಿಸಿ ಶೇಕಡಾ 22 ರಷ್ಟು ಸಂಕಷ್ಟದ ಅಂಶವನ್ನು ಅನುಸರಿಸಲು ಒತ್ತಾಯ ಮಾಡಿತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಾಧಿಕಾರದ ಅಧ್ಯಕ್ಷರು, ಮಳೆಯ ಪ್ರಮಾಣವು ಫಲಿತಾಂಶದ ಹರಿವಿನ ಜೊತೆ ಪರಸ್ಪರ ಸಂಬಂಧ ಹೊಂದಿಲ್ಲ ಎಂದು ಹೇಳಿದರು. ಇದಕ್ಕೆ ಪೂರಕವಾಗಿ ಕರ್ನಾಟಕದ ಸದಸ್ಯರು ಕೂಡ ಸಂಕಷ್ಟದ ಲೆಕ್ಕಾಚಾರ ಜಲಾಶಯಗಳ ಒಳಹರಿವನ್ನು ಅವಲಂಬಿಸಿರುತ್ತೆ ಎಂದು ಹೇಳಿದರು.
ತಮಿಳುನಾಡು ನೀರಾವರಿ ಬಳಕೆಗಾಗಿ ಹೆಚ್ಚಿನ ನೀರು ಹರಿಸುವ ಮೂಲಕ ಸಂಗ್ರಹವನ್ನು ಖಾಲಿ ಮಾಡಿದೆ. ಆದರೆ ಕರ್ನಾಟಕ ಕೃಷಿಗಾಗಿ ನೀರು ಹರಿಸದೆ ಸಂಗ್ರಹವನ್ನು ಹೆಚ್ಚಿಸಿಕೊಂಡಿದೆ ಎಂದ ಕರ್ನಾಟಕ ಕುಡಿಯುವ ನೀರಿಗೆ ಆದ್ಯತೆ ನೀಡುವಂತೆ ಸಮಿತಿಯನ್ನು ಒತ್ತಾಯಿಸಿತ್ತು.
ಅಂತಿಮವಾಗಿ ಸಮಿತಿ ಮುಂದಿನ 15 ದಿನಗಳವರೆಗೆ ಪ್ರತಿದಿನ 5000 ಕ್ಯೂಸೆಕ್ ನೀರು ಹರಿಸಲು ಸೂಚನೆ ನೀಡಿದೆ.
ಮಂಗಳವಾರ ದೆಹಲಿಯಲ್ಲಿ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದ್ದು, ಸಭೆಯಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂದು ವಾದಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಮಂಗಳವಾರ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.












Click it and Unblock the Notifications