ವಿಶೇಷ ಅಧಿವೇಶನ: ಬಿಜೆಪಿ ನಾಯಕರಿಗೆ ದೇವೇಗೌಡ್ರ ದೂರವಾಣಿ ಕರೆ
ಬೆಂಗಳೂರು, ಸೆ 23: ಕಾವೇರಿ ನದಿನೀರು ಹಂಚಿಕೆ ವಿಚಾರದಲ್ಲಿ ಮುತ್ಸದ್ದಿತನ ಪ್ರದರ್ಶಿಸುತ್ತಿರುವ ಮಾಜಿ ಪ್ರಧಾನಿ ದೇವೇಗೌಡ, ಬಿಜೆಪಿ ಹಿರಿಯ ಮುಖಂಡರಿಗೆ ತನ್ನದೇ ಶೈಲಿಯಲ್ಲಿ ಕಿವಿಹಿಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ (ಸೆ 21) ಕರೆದಿದ್ದ ಸರ್ವಪಕ್ಷ ಸಭೆಯನ್ನು ಬಿಜೆಪಿ ಬಹಿಷ್ಕರಿಸಿದ್ದ ಹಿನ್ನಲೆಯಲ್ಲಿ, ಜೆಡಿಎಸ್ ವರಿಷ್ಠ ದೇವೇಗೌಡ ಬಿಜೆಪಿಯ ಹಿರಿಯ ಮುಖಂಡರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಕಿವಿಮಾತಿನ ಜೊತೆಗೆ ಮನವಿಯನ್ನೂ ಮಾಡಿದ್ದಾರೆ. (ನೀರು ಬಿಡುವುದು ಭಾರಿ ಕಷ್ಟ, ದೆಹಲಿಯಲ್ಲಿ ಸಿಎಂ)
ಗುರುವಾರ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ವಿಧಾನಪರಿಷತ್ ನಲ್ಲಿ ಪ್ರತಿಪಕ್ಷದ ನಾಯಕ ಈಶ್ವರಪ್ಪ, ಸದನದ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿರುವ ಗೌಡ್ರು, ಶುಕ್ರವಾರ (ಸೆ 23) ನಡೆಯಲಿರುವ ನಿರ್ಣಾಯಕ ಅಸೆಂಬ್ಲಿ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸೋಣ ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ತಮ್ಮ ಪಕ್ಷದ ಸದಸ್ಯರಿಗೆ ಸದನದಲ್ಲಿ ಶುಕ್ರವಾರ ಹಾಜರಿರುವಂತೆ ವಿಪ್ ಜಾರಿ ಮಾಡಿರುವ ಗೌಡ್ರು, ಯಡಿಯೂರಪ್ಪನವರಿಗೂ ನಿಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿ ಎಂದು ಮನವಿ ಮಾಡಿದ್ದಾರೆ.
ದೇವೇಗೌಡರ ಕರೆಗೆ ಪೂರಕವಾಗಿ ಸ್ಪಂದಿಸಿರುವ ಬಿಜೆಪಿಯ ಮುಖಂಡರು, ರಾಜ್ಯ ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದರಾಗಿರುತ್ತೇವೆ. ಸಿಎಂಗೂ ನಮ್ಮ ನಿಲುವನ್ನು ತಿಳಿಸಿದ್ದೇವೆ ಎಂದು ಗೌಡರಿಗೆ ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. (ಕಾವೇರಿ, ನಾಲ್ಕು ಸಲಹೆ ನೀಡಿದ ಎಸ್ಸೆಂ ಕೃಷ್ಣ)

ಕೆ ಆರ್ ಪೇಟೆಯ ಬಿಎಸ್ವೈ
ಯಡಿಯೂರಪ್ಪನವರು ಕೆ ಆರ್ ಪೇಟೆಯ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಬಂದವರು, ಅವರಿಗೆ ಕಾವೇರಿ ಸಮಸ್ಯೆಯ ಬಗ್ಗೆ ಚೆನ್ನಾಗಿ ಅರಿವಿದೆ. ನಮ್ಮ ರಾಜ್ಯದ ಏಕತೆಯ ವಿಚಾರ ಬಂದಾಗ ನಾವು ಒಗ್ಗಟ್ಟಾಗಿರಬೇಕೆಂದು ಅವರಲ್ಲಿ ಮನವಿ ಮಾಡಿದ್ದೇನೆ - ದೇವೇಗೌಡ.

ನಮ್ಮ ಮನವಿಯನ್ನು ಕಡೆಗಣಿಸಿದ್ದಾರೆ
ನಾನೂ ರೈತಾಪಿ ಕುಟಂಬದಲ್ಲಿ ಬಂದವನು, ಕಳೆದ ಸರ್ವಪಕ್ಷದ ಸಭೆಯಲ್ಲಿ ನೀರು ಯಾವ ಕಾರಣಕ್ಕೂ ಬಿಡಬಾರದು. ನಿಮ್ಮ ಜೊತೆ ನಾವಿದ್ದೇವೆ ಎಂದು ನಮ್ಮ ಮುಖಂಡರು ಸಿಎಂ ಬಳಿ ಮನವಿ ಮಾಡಿದ್ದರು, ಆದರೂ ನೀರು ಬಿಡಲಾಯಿತು. ಆ ಕಾರಣಕ್ಕಾಗಿಯೇ ನಾವು ಮೊನ್ನೆಯ ಸಭೆಯನ್ನು ಬಹಿಷ್ಕರಿಸಿದ್ದೆವು. ಹಾಗಂತ, ನಾವು ಸರಕಾರದ ಪರವಾಗಿ ಇಲ್ಲ ಎಂದಲ್ಲಾ - ಗೌಡ್ರ ಜೊತೆ ದೂರವಾಣಿ ಮಾತುಕತೆಯಲ್ಲಿ ಯಡಿಯೂರಪ್ಪ.

ನನ್ನ ಮಾತಿಗೆ ಆಯ್ತು ಎಂದಿದ್ದಾರೆ, ದೇವೇಗೌಡ
ನೆಲ, ಜಲದ ವಿಚಾರದಲ್ಲಿ ನಾವು ಪಕ್ಷಾತೀತವಾಗಿ ಹೋರಾಡಬೇಕು. ಕಾವೇರಿ ವಿಚಾರದಲ್ಲಿ ಮನಸ್ತಾಪ ಬೇಡ ಎನ್ನುವ ನನ್ನ ಮನವಿಗೆ ಬಿಜೆಪಿ ಮುಖಂಡರು ಪೂರಕವಾಗಿ ಸ್ಪಂದಿಸಿದ್ದಾರೆ - ದೇವೇಗೌಡ.

ಜಗದೀಶ್ ಶೆಟ್ಟರ್
ಮೊನ್ನೆಯ ಸಭೆಯಲ್ಲಿ ನಾವು ಹಾಜರಿರದೇ ಇರಬಹುದು, ಆದರೆ ನಾನು ಸೇರಿದಂತೆ ನಮ್ಮ ಮುಖಂಡರು ಪ್ರಧಾನಿ ಮತ್ತು ಉಮಾ ಭಾರತಿಯವರ ಜೊತೆ ಮಾತುಕತೆ ನಡೆಸಿದ್ದೇವೆ. ಶುಕ್ರವಾರದ ವಿಶೇಷ ಅಧಿವೇಶನದಲ್ಲಿ ನಾವು ಭಾಗವಹಿಸುತ್ತೇವೆ, ಅದು ನಮ್ಮ ಕರ್ತವ್ಯ, ನೀರು ಬಿಡಬಾರದು ಎನ್ನುವುದು ನಮ್ಮ ಸ್ಪಷ್ಟ ನಿಲುವು - ಶೆಟ್ಟರ್ ಸ್ಪಷ್ಟನೆ.

ಕಾವೇರಿ ವಿವಾದ
ಶುಕ್ರವಾರದ ತುರ್ತು ಅಧಿವೇಶನದಲ್ಲಿ ನಾವು ಭಾಗವಹಿಸುತ್ತೇವೆ, ಮುಖ್ಯಮಂತ್ರಿಗಳು ತಮ್ಮ ನಿಲುವಿನ ಪರವಾಗಿ ನಿಲ್ಲಬೇಕು. ನಮಗೇ ನೀರಿನ ಸಮಸ್ಯೆಯಿದೆ. ನೀರು ಬಿಡುವುದು ಬೇಡ ಎಂದು ನಾವು ಹೇಳಿದ್ದೆವು. ನಾವು ಸರಕಾರದ ಪರವಾಗಿ ನಿಲ್ಲುತ್ತೇವೆ - ಈಶ್ವರಪ್ಪ.












Click it and Unblock the Notifications