ಸಿದ್ದು ಸಚಿವ ಸಂಪುಟದ ನಿರ್ಣಯ: ಯಡಿಯೂರಪ್ಪ ಪತ್ರಿಕಾಗೋಷ್ಠಿ
ಬೆಂಗಳೂರು, ಸೆ 13: ಕಾವೇರಿ ನದಿನೀರು ಹಂಚಿಕೆಯ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ನಂತರ ಸಿದ್ದರಾಮಯ್ಯ ಸರಕಾರದ ತುರ್ತು ಸಚಿವ ಸಂಪುಟ ಸಭೆಯ ನಿರ್ಧಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ, ಸರ್ವಪಕ್ಷದ ಸಭೆಯಲ್ಲಿ ನಿರ್ಧರಿಸಿದ ಯಾವುದೇ ನಿರ್ಣಯವನ್ನು ಸರಕಾರ ಪಾಲಿಸಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. (ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ವಿವರ)

ಯಡಿಯೂರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಪ್ರಮುಖಾಂಶ:
> 27.08.16ರಂದು ನಡೆದ ಸರ್ವಪಕ್ಷ ಸಭೆಯಲ್ಲಿ ನಮ್ಮಲ್ಲಿ ಕುಡಿಯಲು ಮಾತ್ರ ನೀರಿದೆ, ಕೃಷಿ ಕೆಲಸಕ್ಕೆ ನೀರಿಲ್ಲ ಎಂದು ಸಿಎಂ ಮತ್ತು ನೀರಾವರಿ ಸಚಿವರು ಸಭೆಗೆ ಮನವರಿಕೆ ಮಾಡಿದ್ದರು.
> ಅಂತರ್ಜಾಲ ಕುಸೀತಿದೆ, ಬೋರ್ವೆಲ್ ನಲ್ಲಿ ನೀರು ಬರುತ್ತಿಲ್ಲ, ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ನಮ್ಮ ಜಲಾಶಯದಲ್ಲಿ ನೀರಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವರಿಕೆ ಮಾಡುವ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಗಿತ್ತು.
> ವಾಸ್ತವ ಪರಿಸ್ಥಿತಿಯನ್ನು ಅರಿಯಲು ತಮಿಳುನಾಡಿಗೆ ನಿಯೋಗವೊಂದನ್ನು ಕಳುಹಿಸಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಸರ್ವಪಕ್ಷ ಸಭೆಯಲ್ಲಿ ಕೈಗೊಂಡ ಯಾವುದೇ ನಿರ್ಣಯವನ್ನು ಸರಕಾರ ಪಾಲಿಸಿಲ್ಲ.
> ತಮಿಳುನಾಡಿಗೆ ನೀರು ಹರಿಸಬಾರದು ಎಂದು ಸಿದ್ದರಾಮಯ್ಯನವರಿಗೆ ನಮ್ಮ ಪಕ್ಷದ ನಿರ್ಧಾರವನ್ನು ತಿಳಿಸಿದ್ದೆವು. ನಮ್ಮ ನಿರ್ಧಾರದಲ್ಲಿ ಈಗಲೂ ಯಾವುದೇ ಬದಲಾವಣೆಯಿಲ್ಲ.
> ತಜ್ಞರ ತಂಡವನ್ನು ಕರ್ನಾಟಕ ಮತ್ತು ತಮಿಳುನಾಡಿಗೆ ಕಳುಹಿಸಿ ವಸ್ತುಸ್ಥಿತಿಯನ್ನು ಅವಲೋಕಿಸಬೇಕೆಂದು, ಸುಪ್ರೀಂಕೋರ್ಟಿಗೆ ಯಡಿಯೂರಪ್ಪ ಮನವಿ.
> ಇಂದಿನ ಪರಿಸ್ಥಿತಿಗೆ ರಾಜ್ಯ ಸರಕಾರವೇ ಕಾರಣ. ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎನ್ನುವುದು ಈ ಹಂತದಲ್ಲಿ ತಪ್ಪು. ಸಿದ್ದರಾಮಯ್ಯ ಸರಕಾರದ ಸಚಿವ ಸಂಪುಟ ಸಭೆಯ ನಿರ್ಣಯಕ್ಕೆ ನಮ್ಮ ಸಹಮತವಿಲ್ಲ.
> ಸುಪ್ರೀಂಕೋರ್ಟ್ ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿ, ಅಲ್ಲಿಯವರೆಗೆ ತಮಿಳುನಾಡಿಗೆ ನೀರು ಬಿಡಬಾರದು.
> ಗೋಲೀಬಾರ್ ನಲ್ಲಿ ಮೃತ ಪಟ್ಟ ಯುವಕರ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಯಡಿಯೂರಪ್ಪ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.












Click it and Unblock the Notifications