ಕಾವೇರಿ, ವಿಶೇಷ ಅಧಿವೇಶನ: ವಿಪಕ್ಷಗಳ ವಿರೋಧದ ನಡುವೆ ನಿರ್ಣಯ ಆಂಗೀಕಾರ
ಬೆಂಗಳೂರು, ಅ 3: ಸದನದಲ್ಲಿ ಮಂಡಿಸಿದ ನಿರ್ಣಯದ ಕೊನೆಯ ಸಾಲಿಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ಪಡಿಸಿದ ಮಧ್ಯೆಯೇ, ನಿರ್ಣಯವನ್ನು ಆಂಗೀಕರಿಸಿ, ವಿಶೇಷ ಅಧಿವೇಶನವನ್ನು (ಅ 3) ಅನಿರ್ದಿಷ್ಟಾವಧಿ ವರೆಗೆ ಸ್ಪೀಕರ್ ಕೋಳಿವಾಡ್ ಮುಂದೂಡಿದ್ದಾರೆ.
'ಮುಖ್ಯಮಂತ್ರಿಗಳು ಸೂಕ್ತ ನಿರ್ಣಯ ತೆಗೆದುಕೊಳ್ಳಬಹುದು' ಎನ್ನುವ ನಿರ್ಣಯದ ಕೊನೆಯ ಸಾಲಿಗೆ ಬಿಜೆಪಿ, ಜೆಡಿಎಸ್ ಶಾಸಕರು ಮತ್ತು ಸರ್ವೋದಯ ಪಕ್ಷದ ಪುಟ್ಟಣ್ಣಯ್ಯ ವಿರೋಧ ವ್ಯಕ್ತ ಪಡಿಸಿದ್ದರು. (ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿದ ಕೇಂದ್ರ)
ಇದು ತಮಿಳುನಾಡಿಗೆ ನೀರು ಬಿಡಬಹುದು ಎನ್ನುವ ಅರ್ಥ ಬರುತ್ತದೆ ಎನ್ನುವ ಆಕ್ಷೇಪದ ನಡುವೆ ನಿರ್ಣಯ ಆಂಗೀಕರಿಸಲಾಗಿದೆ. ಸದನದ ಇಂದಿನ ನಿರ್ಧಾರಕ್ಕೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕೂಡ ಕಿಡಿಕಾರಿದ್ದಾರೆ.
ಸೆ.23ರಂದು ಕರೆದಿದ್ದ ಕಾವೇರಿ ವಿಶೇಷ ಅಧಿವೇಶನದಲ್ಲಿ ತೆಗೆದುಕೊಂಡಿದ್ದ ನಿರ್ಣಯದಲ್ಲಿ ಬದಲಾವಣೆ ಮಾಡಲಾಗಿದ್ದು, ಕುಡಿಯುವುದಕ್ಕೆ ಮತ್ತು ಕಾವೇರಿ ಕೊಳ್ಳದ ಬೆಳೆಗಳಿಗೂ ನೀರು ಬಿಡುಗಡೆ ಮಾಡಲು ಸದನದಲ್ಲಿ ತೀರ್ಮಾನಿಸಲಾಗಿದೆ.
ಈ ನಡುವೆ, ಕನ್ನಂಬಾಡಿ ಕಟ್ಟೆಯಿಂದ 4500 ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಸೋಮವಾರ (ಅ 3) ರಾತ್ರಿ ಹರಿಯಲಿದೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ. (ಕಾವೇರಿ, ಕೋಟಿ ಕೋಟಿ ಸುರಿದಿದ್ದು ಇದೇ ವಕೀಲರಿಗೆ)
ರಾಜ್ಯಕ್ಕೆ ಬೇಕಾದ ನೀರನ್ನು ಕುಡಿಯಲು ಬಳಸಿಕೊಂಡು, ಹೆಚ್ಚುವರಿ ನೀರನ್ನು ರೈತರಿಗೆ ಮತ್ತು ತಮಿಳುನಾಡಿಗೆ ಬಿಡುಗಡೆ ಮಾಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಕೂಡಾ ಟ್ವೀಟ್ ಮಾಡಿದ್ದಾರೆ. ಸದನದಲ್ಲಿ ಸಿಎಂ ಭಾಷಣದ ಹೈಲೆಟ್ಸ್, ಮುಂದಕ್ಕೆ ಓದಿ..

ಸಿದ್ದರಾಮಯ್ಯ ಭಾಷಣ
ಸುಪ್ರೀಂ ಕೋರ್ಟ್ ಸೆ.30 ಆದೇಶದಲ್ಲಿ ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕೆಂದು ಆದೇಶ ಮಾಡಿದೆ. ರಾಜ್ಯದ ಹಿತವನ್ನು ಕಾಪಾಡಿಕೊಳ್ಳುತ್ತೇವೆ, ತಮಿಳುನಾಡಿಗೆ ತೊಂದರೆ ಮಾಡಬೇಕೆನ್ನುವ ಉದ್ದೇಶ ನಮಗಿಲ್ಲ - ಸಿದ್ದರಾಮಯ್ಯ
|
ಟ್ವಿಟ್ಟರ್ ನಲ್ಲಿ ತ.ನಾಡಿಗೆ ನೀರು ಎನ್ನುವ ಟ್ವೀಟ್
27.6 ಟಿಎಂಸಿ ನೀರನ್ನು ಶೇಖರಿಸಿಟ್ಟು ಅದನ್ನು ಕುಡಿಯಲು ಬಳಸಿಕೊಂಡು, ಮಿಕ್ಕ ನೀರನ್ನು ರೈತರಿಗೆ ಮತ್ತು ತಮಿಳುನಾಡಿಗೆ ಬಿಡಲು ನಿರ್ಧರಿಸಲಾಗಿದೆ -ದಿನೇಶ್ ಗುಂಡೂರಾವ್ಟ್ವೀಟ್.

ಫಾಲಿ ನಾರಿಮನ್
ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ಹಿರಿಯ ವಕೀಲ ಫಾಲಿ ನಾರಿಮನ್ ಅವರೇ ಮುಂದುವರಿಸಲಿದ್ದಾರೆ. ಕಾವೇರಿ ವಿಚಾರದ ಎಲ್ಲಾ ಮಾಹಿತಿಗಳು ಅವರಿಗೊಬ್ಬರಿಗೇ ಗೊತ್ತಿರುವುದು ಎನ್ನುವುದು ವಾಸ್ತವತೆ. ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ಅಗತ್ಯವಿಲ್ಲ, ಎಷ್ಟೋ ವರ್ಷಗಳಿಂದ ಅವರೇ ವಾದ ಮಾಡಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಯಾರೂ ವಿರೋಧ ವ್ಯಕ್ತಪಡಿಸಬಾರದು ಎನ್ನುವುದು ನಮ್ಮ ಮನವಿ - ಸಿದ್ದರಾಮಯ್ಯ.

ಸಂಘರ್ಷ ಮಾಡಬೇಕೆಂದಿಲ್ಲ
ಸುಪ್ರೀಂಕೋರ್ಟ್ ನಿಂದ 6 ಬಾರಿ ಆದೇಶ ಬಂದಿದೆ, ಕೋರ್ಟ್ ವಿಷಯದಲ್ಲಿ ಸಂಘರ್ಷ ಮಾಡಬೇಕೆನ್ನುವ ಇಚ್ಚೆ ನಮಗಿಲ್ಲ. ಈಗ ಇರುವ 34 ಟಿಎಂಸಿ ನೀರು ಜೂನ್ ತನಕ ಕುಡಿಯಲು ಸಾಲುತ್ತೆ. ಸುಪ್ರೀಂಕೋರ್ಟಿನ ಹಿಂದಿನ ಆದೇಶವನ್ನು ನಾವು ಪಾಲಿಸಿದ್ದೇವೆ - ಸಿದ್ದರಾಮಯ್ಯ.

ಕಾವೇರಿ ಐತೀರ್ಪು
ತಮಿಳುನಾಡಿಗೆ 53.2 ಟಿಎಂಸಿ ನೀರು ಬಿಟ್ಟಿದ್ದೇವೆ. ಕಾವೇರಿ ಐತೀರ್ಪಿನ ಪ್ರಕಾರ 192 ಟಿಎಂಸಿ ನೀರು ಬಿಡಬೇಕು. 2014 -15ನೇ ಸಾಲಿನಲ್ಲಿ 229 ಟಿಎಂಸಿ ನೀರು ಬಿಟ್ಟಿದ್ದೇವೆ. ಎಲ್ಲಾ ಮುಖ್ಯಮಂತ್ರಿಗಳ ಕಾಲದಲ್ಲೂ ತಮಿಳುನಾಡಿಗೆ ನೀರು ಬಿಡಲಾಗಿದೆ. ನಮ್ಮ ಜಲಾಶಯದಲ್ಲಿ ಕುಡಿಯಲು ಮಾತ್ರ ನೀರು ಇರುವಾಗ ಮೂರು ವರ್ಷ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿದ್ದೇವೆ. ಉಳಿದ ಎಲ್ಲಾ ವರ್ಷಗಳಲ್ಲೂ ಒಟ್ಟು 1,400 ಟಿಎಂಸಿ ನೀರು ಹೆಚ್ಚುವರಿಯಾಗಿ ತಮಿಳುನಾಡಿಗೆ ಹೋಗಿದೆ - ಸಿದ್ದರಾಮಯ್ಯ

ಕುಡಿಯಲು ಮತ್ತು ರೈತರಿಗೆ
23.36 ಟಿಎಂಸಿ ನೀರನ್ನು ಕುಡಿಯಲು, 11 ಟಿಎಂಸಿ ನೀರನ್ನು ಬೆಳೆಗಳಿಗೆ ಬಳಸಿಕೊಳ್ಳಲಾಗುವುದು. ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಸಿಎಂ ಸಿದ್ದರಾಮಯ್ಯ ತೆಗೆದುಕೊಳ್ಳಬಹುದು ಎನ್ನುವ ನಿರ್ಣಯಕ್ಕೆ ಸದನದಲ್ಲಿ ಬರಲಾಗಿದೆ. "ಸಿಎಂ ನಿರ್ಧಾರ ತೆಗೆದುಕೊಳ್ಳಬಹುದು" ಎನ್ನುವ ನಿರ್ಣಯದ ಕೊನೆಯ ವಾಖ್ಯಕ್ಕೆ ವಿಪಕ್ಷದವರು ವಿರೋಧ ವ್ಯಕ್ತ ಪಡಿಸುತ್ತಿರುವುದು.












Click it and Unblock the Notifications