ಕಾವೇರಿ ವಿವಾದ: ಅ.17ಕ್ಕೆ ಸುಪ್ರೀಂ ಗೆ ತಜ್ಞರ ತಂಡದ ವರದಿ
ನವದೆಹಲಿ, ಅಕ್ಟೋಬರ್ 6: ಕೇಂದ್ರ ಸರಕಾರವು ಬುಧವಾರ ಉನ್ನತ ಮಟ್ಟದ ತಾಂತ್ರಿಕ ತಂಡವೊಂದನ್ನು ರಚಿಸಿದ್ದು, ಕಾವೇರಿ ಕೊಳ್ಳದ ಪ್ರದೇಶಗಳಿಗೆ ಭೇಟಿ ನೀಡುವ ತಂಡವು ವಾಸ್ತಪ ಪರಿಸ್ಥಿತಿಯನ್ನು ಅವಲೋಕಿಸಲಿದೆ. ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ತಂಡವನ್ನು ನದಿ ಅಭಿವೃದ್ಧಿ ಹಾಗೂ ಗಂಗಾ ಪುನರುಜ್ಜೀವನ, ಜಲ ಸಂಪನ್ಮೂಲ ಸಚಿವಾಲಯವು ರೂಪಿಸಿದೆ.
ಅಕ್ಟೋಬರ್ 4ರಂದು ಸುಪ್ರೀಂ ಕೋರ್ಟ್ ಸೂಚಿಸಿದ ಪ್ರಕಾರ ತಂಡವನ್ನು ರಚಿಸಲಾಗಿದೆ. ಈ ತಜ್ಞರ ಸಮಿತಿಯು ಕರ್ನಾಟಕ ಹಾಗೂ ತಮಿಳುನಾಡಿನ ಕಾವೇರಿ ಕೊಳ್ಳದ ಪ್ರದೇಶಗಳಿಗೆ ಭೇಟಿ ನೀಡಿ, ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಅಕ್ಟೋಬರ್ 17ರೊಳಗೆ ವರದಿ ಸಲ್ಲಿಸುತ್ತದೆ.[32 ವರ್ಷ ನೀವು ಕೊಟ್ಟ ಫೀ ವಾಪಸ್ ಮಾಡ್ತೀನಿ: ನಾರಿಮನ್]
ತಂಡದ ಸದಸ್ಯರು ಅಕ್ಟೋಬರ್ 7ರಂದು ಬೆಂಗಳೂರಿನಲ್ಲಿ ಪ್ರಾಥಮಿಕ ಸಭೆಯನ್ನು ನಡೆಸಲಿದ್ದಾರೆ. ವಾಸ್ತವ ಸ್ಥಿತಿಯ ಬಗ್ಗೆ ಅಕ್ಟೋಬರ್ 17ರಂದು ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸುತ್ತದೆ. ಮೂಲಗಳ ಪ್ರಕಾರ, ಅಕ್ಟೋಬರ್ 6 ಹಾಗೂ 15ರ ಮಧ್ಯೆ ತಜ್ಞರ ತಂಡವು ಕರ್ನಾಟಕದ ಹೇಮಾವತಿ, ಹರಂಗಿ, ಕೆಆರ್ ಎಸ್, ಕಬಿನಿ ಜಲಾಶಯಗಳಿಗೆ, ತಮಿಳುನಾಡಿನ ಮೆಟ್ಟೂರು, ಭವಾನಿ ಸೇತುವೆ ಕೆಳ ಭಾಗದ ಪ್ರದೇಶ ಹಾಗೂ ಅಮರಾವತಿ ಜಲಾಶಯಗಳಿಗೆ ಭೇಟಿ ನೀಡಿ, ಪರಿಶೀಲಿಸಲಿದೆ.[ಅ.18ರ ತನಕ ಕಾವೇರಿ ನಿರ್ವಹಣಾ ಮಂಡಳಿ ರಚನೆ ಇಲ್ಲ]
ತಜ್ಞರ ಸಮಿತಿ ನೀಡುವ ವರದಿ ಆಧಾರದಲ್ಲಿ, ಅಕ್ಟೋಬರ್ 18ರ ನಂತರ ಕರ್ನಾಟಕವು ಬಿಡುಗಡೆ ಮಾಡಬೇಕಾದ ನೀರಿನ ಪ್ರಮಾಣವನ್ನು ಸುಪ್ರೀಂ ಕೋರ್ಟ್ ಸೂಚಿಸುವುದಕ್ಕೆ ಸಹಾಯವಾಗುತ್ತದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿಶೇಖರ್ ಹೇಳಿದ್ದಾರೆ.