ಮುರುಘಾ ಶ್ರೀ ವಿರುದ್ಧ ಪೋಕ್ಸೋ ಕೇಸ್: ಕೋರ್ಟ್ ನಿಗಾದಲ್ಲಿ ತನಿಖೆಗೆ ಆಗ್ರಹ
ಬೆಂಗಳೂರು,ಸೆ.1- ತೀವ್ರ ಕುತೂಹಲ ಕೆರಳಿಸಿರುವ ಈ ಪ್ರಕರಣದಲ್ಲಿ ಸ್ವಾಮೀಜಿ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಪೊಲೀಸ್ ತನಿಖೆಯು ಕೋರ್ಟ್ ನಿಗಾದಲ್ಲಿ ನಡೆಯುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಗೆ ವಕೀಲರು ಮನವಿ ಮಾಡಿದ್ದಾರೆ.
ಈ ಸಂಬಂಧ ರಿಜಿಸ್ಟ್ರಾರ್ ಜನರಲ್ ಗೆ ಬೆಂಗಳೂರಿನ ವೃತ್ತಿಪರ ವಕೀಲರಾದ ಸಿದ್ಧಾರ್ಥ ಭೂಪತಿ, ಶ್ರೀರಾಮ್ ಟಿ. ನಾಯಕ್, ಬಿ.ಎಸ್.ಗಣೇಶ ಪ್ರಸಾದ್, ವಿ.ಗಣೇಶ್ ಹಾಗೂ ಕೆ.ಎ.ಪೊನ್ನಣ್ಣ ಲಿಖಿತ ಮನವಿ ಸಲ್ಲಿಸಿದ್ದಾರೆ.
ವಕೀಲರ ತಂಡ 'ಮುರುಘಾ ಶರಣರು ಇಬ್ಬರು ಹೈಸ್ಕೂಲ್ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. 16 ವರ್ಷದ ಬಾಲಕಿಯ ಮೇಲೆ ಕಳೆದ ಮೂರೂವರೆ ವರ್ಷಗಳಿಂದ ಹಾಗೂ 15ರ ಬಾಲಕಿಯ ಮೇಲೆ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಾಗಿದ್ದರೂ ಪೊಲೀಸರ ತನಿಖೆ ಸಂಪೂರ್ಣ ಲೋಪಗಳಿಂದ ಕೂಡಿದೆ' ಎಂದು ಮನವಿಯಲ್ಲಿ ಮಾಡಿದ್ದಾರೆ.

'ಮುರುಘಾ ಶರಣರು ನಾಡಿನ ಪ್ರಭಾವಿ ಮಠಾಧೀಶರಾಗಿದ್ದಾರೆ. ಹಾಗಾಗಿ, ಈ ಪ್ರಕರಣದಲ್ಲಿ ತನಿಖೆ ನಡೆಸಬೇಕಾದ ಪೊಲಿಸರು ಇನ್ನೂ ಅವರನ್ನು ವಿಚಾರಣೆಗೆ ಕರೆಸಿಕೊಂಡಿಲ್ಲ, ನೋಟಿಸ್ ಕೂಡ ಜಾರಿಗೊಳಿಸಿಲ್ಲ, ಅವರನ್ನು ದಸ್ತಗಿರಿ ಮಾಡಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ಸರ್ಕಾರದಿಂದ ಸ್ವಾಮೀಜಿ ರಕ್ಷಣೆ:
ಈ ಮಧ್ಯೆ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಆರೋಪಿ ಮುರುಘಾ ಶರಣರನ್ನು ಅವರಿದ್ದ ಮುರುಘಾ ಮಠಕ್ಕೆ ಹೋಗಿ ಭೇಟಿ ಮಾಡಿ ಬಂದಿದ್ದಾರೆ. ಅವರನ್ನು ಬೆಂಬಲಿಸುವ ಮಾತುಗಳನ್ನಾಡಿ ಅವರ ರಕ್ಷಣೆಗೆ ನಿಂತಿದ್ದಾರೆ. ಅಂತೆಯೇ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರೂ ಹೇಳಿಕೆಯೊಂದನ್ನು ನೀಡಿ, ಈ ಪ್ರಕರಣದಲ್ಲಿ ಮಠದ ನೌಕರನ ಪಿತೂರಿ ಇದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಸರ್ಕಾರ ಆರೋಪಿಯ ಹಿತ ಕಾಪಾಡುವಲ್ಲಿ ಸಜ್ಜಾಗಿ ನಿಂತಿರುವುದು ಕಂಡು ಬರುತ್ತಿದೆ' ಎಂದು ವಕೀಲರು ಆರೋಪಿಸಿದ್ದರು.
ಆದ್ದರಿಂದ, ಈ ಪ್ರಕರಣದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯುವ ಸಾಧ್ಯತೆ ಇಲ್ಲದಿರುವ ಕಾರಣ ಕೂಡಲೇ ಕೋರ್ಟ್ ನಿಗಾದಲ್ಲಿ ಇದರ ತನಿಖೆ ನಡೆಯುವಂತೆ ನಿರ್ದೇಶಿಸಬೇಕು' ಎಂದು ಕೋರಿದ್ದಾರೆ.












Click it and Unblock the Notifications