'ಹೊಸ ಕಾರಿನ ಮೇಲೆ ಇನ್ನೈದು ಕಾಗೆಗೆ ಕೂರಲು ಹೇಳಿದ್ದೇನೆ'
ಬೆಂಗಳೂರು, ಜೂನ್, 20: "ಇನ್ನು ಒಂದು ಐದು ಕಾಗೆ ಹಿಡಿದುಕೊಂಡು ಬಂದು ವಾಹನದ ಮೇಲೆ ಕುಳ್ಳಿರಿಸಲು ಹೇಳುತ್ತೇನೆ, ಕಾಗೆ ಕೂತಿದ್ದಕ್ಕೆ ವಾಹನ ಬದಲಾವಣೆ ಮಾಡಿಲ್ಲ. ಫಾರ್ಚೂನರ್ ಹಳೆಯದಾಗಿತ್ತು, ಮೂರು ವರ್ಷ ಹಳೆ ವಾಹನ ಬದಲಾಯಿಸಿ ಹೊಸದನ್ನು ತೆಗೆದುಕೊಂಡಿದ್ದೇನೆ"
ಕಾಗೆ ಪ್ರಹಸನ ನಡೆದು, ವಾಹನ ಬದಲಾವಣೆ ಮಾಡಿ ಸರಿಯಾಗಿ ಎರಡು ವಾರಗಳ ನಂತರ ಸಿಎಂ ಸಿದ್ದರಾಮಯ್ಯ ಜನರೆದುರು ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪ್ರಗತಿಪರ ಮಠಾಧೀಶರ ವೇದಿಕೆ ವತಿಯಿಂದ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.[ಸಿಎಂ ಕಾರಿನ ಮೇಲೆ ಕುಳಿತ ಕಾಗೆಗೆ ಮಾಧ್ಯಮಗಳ ರೆಕ್ಕೆ ಪುಕ್ಕ!]

ಸುಮ್ಮನೆ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದ ಸಿದ್ದರಾಮಯ್ಯ ಪರೋಕ್ಷವಾಗಿ ಮಾಧ್ಯಮಗಳಿಗೆ ಟಾಂಗ್ ನೀಡಿದರು. ಕಾಗೆ ಕೂತಿದ್ದಕ್ಕೂ ತಮ್ಮ ವಾಹನ ಬದಲಾವಣೆ ಮಾಡಿದ್ದಕ್ಕೂ ಯಾವ ಸಂಬಂಧವಿಲ್ಲ. ಕಾಗೆ ಕೂರುವುದಕ್ಕೂ ಮುನ್ನವೇ ಹೊಸ ವಾಹನ ಬುಕ್ ಮಾಡಲಾಗಿತ್ತು ಎಂದು ಹೇಳಿದರು.
ಜೂನ್ 2 ರಂದು ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕುಳಿತ ಕಾಗೆ ಮರಿ ಒಂದು ಐದು ನಿಮಿಷ ಅಲ್ಲೇ ವಿಶ್ರಾಂತಿ ತೆಗೆದುಕೊಂಡಿತ್ತು. ಸಿಬ್ಬಂದಿ ಓಡಿಸಲು ಯತ್ನಿಸಿದರು ಕದಲದೆ ಬಿಸಿಲಿಗೆ ಮೈಯೊಡ್ಡಿ ಕುಳಿತುಕೊಂಡಿತ್ತು. ಇದಾದ ಮೇಲೆ ಮಾಧ್ಯಮಗಳಲ್ಲಿ ವಿವಿಧ ಭವಿಷ್ಯವಾಣಿಗಳ ಚರ್ಚೆ ಆರಂಭವಾಗಿತ್ತು. ಇದೀಗ ಸಿದ್ದರಾಮಯ್ಯ ಎಲ್ಲ ಮಾತುಗಳಿಗೆ, ಆರೋಪಗಳಿಗೆ ತೆರೆ ಎಳೆಯುವ ಯತ್ನ ಮಾಡಿದ್ದಾರೆ.[ಕಾಗೆ ಕೂರೋದಕ್ಕೂ, ಕಾರು ಬದಲಾಯಿಸೋದಕ್ಕೂ ಸರಿ ಹೋಯ್ತು!]
ಸಿಎಂ ಸ್ಪಷ್ಟನೆ
ತಮ್ಮ ಸರ್ಕಾರಿ ಕಾರು ಬದಲಿಸುವ ವಿಚಾರ ಎರಡು ತಿಂಗಳು ಹಿಂದಿನಿಂದ ನಡೆಯುತ್ತಿದೆ. ಈಗ ಕಾರಿಗೂ ಕಾಗೆಗೂ ಸಂಬಂಧ ಕಲ್ಪಿಸಲಾಗುತ್ತಿದೆ. ಕಾಗೆ ಕುಳಿತುಕೊಂಡಿತು ಎಂಬ ಕಾರಣಕ್ಕೆ ಕಾರು ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ತಾವು ಬಳಸುವ ಸರ್ಕಾರಿ ಕಾರು ಎರಡು ಲಕ್ಷ ಕಿ.ಮೀ.ಗೂ ಹೆಚ್ಚು ಸಂಚರಿಸಿದೆ. ಜೊತೆಗೆ ತಾಂತ್ರಿಕ ಸಮಸ್ಯೆ ಇದ್ದುದರಿಂದ ಕಾರು ಬದಲಾವಣೆ ಮಾಡಬೇಕಾಯಿತು ಎಂದು ಹೇಳಿದರು.[ಕಾಗೆ ಹಾರಿಸೋದು ಅಂದ್ರೆ ಏನು, ನಿಮಗೇನಾದ್ರೂ ಗೊತ್ತಾ?]
ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬ ಕಾರಣಕ್ಕೆ ಚಾಮರಾಜನಗರಕ್ಕೆ ಆರು ಬಾರಿ ಹೋಗುತ್ತಿರಲಿಲ್ಲ. ರಾಹುಕಾಲದಲ್ಲಿ ಬಜೆಟ್ ಮಂಡನೆಗೆ ಮುಂದಾಗುತ್ತಿರಲಿಲ್ಲ. ಅಷ್ಟೇ ಏಕೆ ? ಅಮಾವಾಸ್ಯೆ ದಿನದಂದು (ಜುಲೈ 4) ವಿಧಾನ ಮಂಡಲ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ವಾರ್ತಾ ಸಚಿವ ಆರ್. ರೋಷನ್ ಬೇಗ್, ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ, ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications