ಸಚಿವ ಸಂಪುಟ ಸಭೆ: ಆದಿಚುಂಚನಗಿರಿ ಮಠಕ್ಕೆ 22 ಎಕರೆ, ಅಂಬರೀಶ್ ಸ್ಮಾರಕಕ್ಕೆ 12 ಕೋಟಿ ರೂ
ಬೆಂಗಳೂರು, ಜನವರಿ 6: ಶಾಲೆ ವಿದ್ಯಾರ್ಥಿ ನಿಲಯ, ಆಧ್ಯಾತ್ಮ ಮಂದಿರ, ಕಲ್ಯಾಣ ಭವನ ನಿರ್ಮಾಣಕ್ಕೆ ಹಾಸನ ಜಿಲ್ಲೆ ಹಿರಿಸಾವೆ ಬಳಿ ಆದಿ ಚುಂಚನಗಿರಿ ಮಠಕ್ಕೆ 22 ಎಕರೆ ಜಮೀನು ಹಾಗೂ ನಟ ದಿ. ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ರೂ. ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಗುರುವಾರದಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾಹಿತಿ ನೀಡಿದರು.
ಆಯುಷ್ ಇಲಾಖೆಯಲ್ಲಿ 80 ಶುಶ್ರೂಶಕರ ಹುದ್ದೆಗಳಿಗೆ ನೇರ ನೇಮಕ ಮಾಡುವುದು, ಈಗಾಗಲೇ ಗುತ್ತಿಗೆ ಆಧಾರದಲ್ಲಿ ಸೇವೆ ಮಾಡಿದವರಿಗೆ ಶೇ.2 ಮಾರ್ಕ್ಸ್ ನೀಡಲು ತೀರ್ಮಾನಿಸಲಾಗಿದೆ. ಅದೇ ರೀತಿ ಒಂದು ವರ್ಷ ಸೇವೆ ಮಾಡಿದವರಿಗೆ 10 ವರ್ಷ ಅವಧಿ ವಿಸ್ತರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಗಳೂರು ಪೂರ್ವ ತಾಲೂಕಿನಲ್ಲಿ 93 ಕೋಟಿ ರೂ. ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ, ಕಾರ್ಕಳದಲ್ಲಿ ನ್ಯಾಯಾಲಯ ಕಟ್ಟಡಕ್ಕೆ 19 ಕೋಟಿ ರೂ., ಮುಳಬಾಗಿಲು ನ್ಯಾಯಾಲಯ ಕಟ್ಟಡಕ್ಕೆ 13 ಕೋಟಿ ರೂ., ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ 10 ಸೇಂಟ್, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮಾರುತಿ ಎಜುಕೇಶನ್ ಸೊಸೈಟಿಗೆ 2 ಎಕರೆ ಜಮೀನು ಮಂಜೂರು, ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗರ ಸಂಘಕ್ಕೆ ಜಮೀನು ನೀಡಲು ತೀರ್ಮಾನಿಸಲಾಗಿದೆ.
ಬಾಗಲಕೋಟೆಯ ಸಿಗೇಗಿರಿ ಹಳ್ಳಿಯಲ್ಲಿ 5 ಎಕರೆ ಜಮೀನು ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಐಟಿ ಸೇವೆಗಳನ್ನು ಒದಗಿಸಲು 406 ಕೋಟಿ ರೂ. ಅನುದಾನ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೇರಣಾ ಸೇವಾ ಕೇಂದ್ರಕ್ಕೆ 25 ಸೇಂಟ್ ಜಾಗ, ತಿಕೋಟಾ ತಾಲೂಕಿನಲ್ಲಿ 5 ಜಮೀನು ಮಂಜೂರು ಮಾಡಲಾಗಿದೆ.
ಜಲ ಜೀವನ್ ಮಿಷನ್ಗೆ ರಾಜ್ಯದ ಪಾಲು 9152 ಕೋಟಿ ರೂ., 3890 ಕೋಟಿ ಬಳಸಿಕೊಂಡು ಉಳಿದಿದ್ದನ್ನು ವಿಶ್ವಬ್ಯಾಂಕ್ನಿಂದ ಸಾಲ ಪಡೆಯಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಜಲ ಜೀವನ ಮಷಿನ್ 3 ಹಂತದ ಯೋಜನೆ. ಈಗಾಗಲೇ ಓವರ್ ಹೆಡ್ ಟ್ಯಾಂಕ್ ಇರುವ ಕಡೆ ಅವರ ಬಳಿ ಇರುವ ಅನುದಾನ ಬಳಕೆಗೆ ಸೂಚನೆ.
ಎರಡನೇ ಹಂತದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ಕೊಡಬೇಕು. ಮೂರನೇ ಹಂತದಲ್ಲಿ ನೀರಿನ ಮೂಲ ಹುಡುಕಿ ಸಂಪರ್ಕ ಕಲ್ಪಿಸುವುದು.
ಮೈಸೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಡಿಮೆಯಾಗಿರುವ ಹಣ 16.5. ಕೋಟಿ ರೂ. ಬಿಡುಗಡೆಗೆ ತೀರ್ಮಾನಿಸಲಾಗಿದೆ. ಬಿಎಂಟಿಸಿಗೆ ಏರ್ ಕಂಡಿಷನ್ ಬಸ್ ಬದಲು 100 ಎಲೆಕ್ಟ್ರಿಕ್ ಬಸ್ ಖರೀದಿಗೆ ತೀರ್ಮಾನಿಸಿದೆ.

ಜೋಗ ಜಲಪಾತ ಅಭಿವೃದ್ಧಿ
ಕರ್ನಾಟಕ ಮೋಟಾರ್ ವಾಹನ ತೆರಿಗೆ ಶೇ.6ರಷ್ಟು ಮಾಡಲಾಗಿತ್ತು. ಕಬ್ಬು ಕಟಾವಿಗೆ ಶೇ.3ರಷ್ಟು ಮಾಡಲಾಗಿದೆ. ಜೋಗ ಜಲಪಾತವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲು, 116 ಕೋಟಿಯಲ್ಲಿ ರೋಪ್ ವೇ ಮತ್ತು ಕಾಫಿ ಬಾರ್, ಫೈವ್ ಸ್ಟಾರ್ ವಸತಿ ನಿಲಯ ಸ್ಥಾಪನೆ, ಅಂತಾರಾಷ್ಟ್ರೀಯ ಪ್ರವಾಸಿ ತಾಣ ಮಾಡಲು ಒಪ್ಪಿಗೆ ಸೂಚನೆ.
ಬಿಬಿಎಂಪಿ ವಲಯದಲ್ಲಿ 78,254 ಜನ ಕೊರೊನಾ ಲಾಕ್ಡೌನ್ನಿಂದ ಕಡಿಮೆ ತೆರಿಗೆ ಕಟ್ಟಿದ್ದರು. ಅವರಿಗೆ ನೋಟಿಸ್ ನೀಡಿ ಶೇ.2ರಷ್ಟು ತೆರಿಗೆ ಕಟ್ಟಲು ಸೂಚಿಸಲಾಗಿತ್ತು. ಈಗ ಬದಲಾಯಿಸಿ ಮೊದಲು ಕಟ್ಟಿದವರ ಹಣ ಸರಿ ಹೊಂದಿಸಲಾಗುವುದು. ಉಳಿದವರು ಬ್ಯಾಂಕ್ ದರ ಕಟ್ಟಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಸೆಸ್ ಸಂಗ್ರಹಕ್ಕೆ ಸೂಚಿಸಿದರೂ ಬಿಬಿಎಂಪಿ ಮಾಡಿರಲಿಲ್ಲ, ಅದನ್ನು ಮನ್ನಾ ಮಾಡಲು ತೀರ್ಮಾನಿಸಿದೆ.
ತುಮಕೂರು ಜಿಲ್ಲೆಗಳ ಕೆರೆ ತುಂಬಿಸಲು 230 ಕೋಟಿ ರೂ., ಪುರಸಭೆ, ಪಟ್ಟಣ ಪಂಚಾಯತಿಗಳಿಗೆ ನಗರೋತ್ಥಾನ ಯೋಜನೆ ಅಡಿಯಲ್ಲಿ ಹಣ ಮಂಜೂರು, ನಗರಸಭೆಗೆ 40, ಪುರಸಭೆಗೆ 30 ಕೋಟಿ, ಪಟ್ಟಣ ಪಂಚಾಯತಿಗಳಿಗೆ 10 ಕೋಟಿ ರೂ. ನೀಡಲು ತೀರ್ಮಾನ.
ಬೆಂಗಳೂರು ಅಭಿವೃದ್ಧಿಗೆ 6000 ಕೋಟಿ ರೂ. ಮೀಸಲಿರಿಸಲಿದ್ದು, ಅಮೃತ್ ನಗರೋತ್ಥಾನ ಯೋಜನೆ ಅಡಿಯಲ್ಲಿ ಪ್ರತಿ ವರ್ಷ 2 ಸಾವಿರ ಕೋಟಿ ರೂ. ವೆಚ್ಚ ಮಾಡುವುದು, ಬನಶಂಕರಿ ಮೆಟ್ರೋ ನಿಲ್ದಾಣ ಬಳಿ, ಹೆಬ್ಬಾಳ್ ಜಂಕ್ಷನ್ ಸಾಮರ್ಥ್ಯ ಹೆಚ್ಚಳ ಮಾಡಲು ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದೆ.
ಕೊವಿಡ್-19 ನಿಯಮ ಜಾರಿ ಮಾಡಿದ್ದೇವೆ. ಕೆಲವು ಜಿಲ್ಲೆಗಳಲ್ಲಿ ಅಗತ್ಯವಿಲ್ಲ ಎಂಬ ಅಭಿಪ್ರಾಯ ಬಂದಿದೆ. ಹೀಗಾಗಿ 15ಕ್ಕೆ ಮತ್ತೊಂದು ಬಾರಿ ಪರಾಮರ್ಶೆ ಮಾಡಿ ತೀರ್ಮಾನ ಮಾಡಲಾಗುವುದು ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಕಾಂಗ್ರೆಸ್ ಪಾದಯಾತ್ರೆಗೂ, ಕೊರೊನಾ ನಿಯಮ ಜಾರಿಗೂ ಸಂಬಂಧ ಇಲ್ಲ. ಬೆಳಗಾವಿ, ಬಾಗಲಕೋಟೆಗೂ ಪಾದಯಾತ್ರೆಗೂ ಸಂಬಂಧವಿಲ್ಲ. ಆದರೂ ಎಲ್ಲ ಕಡೆಗಳಲ್ಲಿ ಒಂದೇ ಸಾರಿ ನಿಯಮ ಜಾರಿ ಮಾಡಲಾಗುವುದು ಎಂದು ತೀರ್ಮಾನಿಸಿದ್ದೇವೆ. ಕೋವಿಡ್ ನಿಯಮ ಎಲ್ಲ ಕಡೆ ಪಾಲನೆ ಮಾಡಲಾಗುತ್ತಿದೆ. ಕಾಂಗ್ರೆಸ್ ಪಾದಯಾತ್ರೆ ಮಾಡಲಿ ಅವರಿಗೆ ಯಾವುದೇ ಅಡ್ಡಿಯಿಲ್ಲ ಎಂದರು.












Click it and Unblock the Notifications