ಸಂಪುಟಕ್ಕೆ 10+10=20 : ಪ್ರಬಲ ಖಾತೆಗಳಿಗಾಗಿ ಸಿದ್ದರಾಮಯ್ಯ,ಡಿಕೆ ಶಿವಕುಮಾರ್ ಪಟ್ಟು!: ಯಾರಿಗೆ ಯಾವ ಖಾತೆ?
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಐದು ದಿನಗಳ ಕಾಲ ಜಟಾಪಟಿ ನಡೆದು, ಕೊನೆಗೂ ಸಿಎಂ ಮತ್ತು ಡಿಸಿಎಂ ಅನ್ನು ಆಯ್ಕೆ ಮಾಡಿದ ಹೈಕಮಾಂಡ್ಗೆ ಇದೀಗ ನೂತನ ಸಚಿವ ಸಂಪುಟ ರಚನೆಗೆ ಕಸರತ್ತು ನಡೆಸಿದ್ದಾರೆ.
ಗ್ಯಾರಂಟಿ ಘೋಷಣೆಯಿಂದಾಗಿ ಕಾಂಗ್ರೆಸ್ ಮೇಲೆ ರಾಜ್ಯದ ಜನತೆ ಒಲವು ತೋರಿದ್ದು, ಮೊದಲ ಕ್ಯಾಬಿನೆಟ್ ನಲ್ಲಿ ಗ್ಯಾರಂಟಿ ಘೋಷಣೆಯನ್ನ ಜಾರಿಗೊಳಿಸುವುದಾಗಿ ಕಾಂಗ್ರೆಸ್ ನಾಯಕರು ಭರವಸೆಯನ್ನ ನೀಡಿದ್ದು, ಇದೀಗ ಸಂಪುಟದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎನ್ನುವ ಲೆಕ್ಕಾಚಾರವನ್ನ ಹೈಕಮಾಂಡ್ ಹಾಕಿಕೊಂಡಿದೆ.

ಈಗಾಗಲೇ ಶನಿವಾರ ಪ್ರಮಾಣ ವಚನ ಸ್ವೀಕರಕ್ಕೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿ ಕೆ ಶಿವಕುಮಾರ್ ರೆಡಿಯಾಗಿದ್ದು, ಈ ವೇಳೆ ಹಲವು ಶಾಸಕರು ಪ್ರಮಾಣ ವಚನವನ್ನ ನಡೆಸಲಿದ್ದಾರೆ ಎನ್ನಲಾಗಿದ್ದು, ತಮ್ಮ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಪೈಪೋಟಿ ನಡೆಸಿದ್ದಾರೆ. ಅಲ್ಲದೇ ಈ ಇಬ್ಬರು ನಾಯಕರು ಪ್ರಬಲ ಖಾತೆಗಾಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಇನ್ನೂ ಹೈಕಮಾಂಡ್ ನಾಯಕರ ಭೇಟಿ ಶುಕ್ರವಾರ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಳಿದ್ದು, ಸಚಿವ ಸ್ಥಾನದ ವಿಚಾರವಾಗಿ ಹೈಕಮಾಂಡ್ ನಾಯಕರು ಚರ್ಚೆ ನಡೆಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರ ಬಣಕ್ಕೆ 10 ಶಾಸಕರಿಗೆ ಹಾಗೂ ಡಿ ಕೆ ಶಿವಕುಮಾರ್ ಅವರ ಬಣದ ಶಾಸಕರಿಗೆ 10 ಸಚಿವ ಸ್ಥಾನವನ್ನ ನೀಡಲು ಹೈಕಮಾಂಡ್ ಒಪ್ಪಿದೆ ಎಂದು ಹೇಳಲಾದ್ದು, ಉಳಿದ ಮಂತ್ರಿ ಸ್ಥಾನವನ್ನ ನಾವೇ ಆಯ್ಕೆ ಮಾಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಸಂಭಾವ್ಯ ಪಟ್ಟಿಯೊಂದಿಗೆ ದೆಹಲಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಸಂಪುಟಯ ವಿಚಾರವಾಗಿ ಚರ್ಚಿಸಲಿದ್ದಾರೆ. ಇನ್ನೂ ತಮ್ಮ ಬೆಂಬಲಿಗರಿಗೆ ಮಂತ್ರಿ ಸ್ಥಾನ ನೀಡುವಾಗ ಪ್ರಾದೇಶಿಕ, ಸಾಮಾಜಿಕ ನ್ಯಾಯ ಪಾಲನೆ ಕಡ್ಡಾಯ ಎಂದು ವರಿಷ್ಠರು ನಿರ್ದೇಶನ ನೀಡಿದ್ದಾರೆ. ಏಕೆಂದರೆ, ಮುಂಬರುವ ಸಾಲು ಸಾಲು ಚುನಾವಣೆ ಹಿನ್ನಲೆ ಹೈಕಮಾಂಡ್ ಹಲವು ಲೆಕ್ಕಾಚಾರವನ್ನ ವಿವರಿಸಿದೆ.

ಇನ್ನೂ ಸಂಪುಟಕ್ಕೆ 28 ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆಯಾಗುತ್ತಿದ್ದು, ಮೂರು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಬಣಗಳಿಗೆ 20 ಸ್ಥಾನಗಳನ್ನ ಬಿಟ್ಟು ಉಳಿದ 8 ಸ್ಥಾನಗನ್ನ ಯಾವ ನಾಯಕರಿಗೆ ನೀಡಬೇಕು ಎಂಬುದನ್ನ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಲಿದ್ದಾರೆ ಎನ್ನಲಾಗಿದೆ.
ಇತ್ತ ಆರಂಭದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಇದೀಗ ಪ್ರಬಲ ಖಾತೆಗಾಗಿ ಪೈಪೋಟಿ ನಡೆಸಿದ್ದು, ಇದು ಮತ್ತೆ ಹೈಕಮಾಂಡ್ ನಾಯಕರಿಗೆ ತಲೆನೋವಾಗಿದೆ. ಇತ್ತ ಹಿರಿಯ ನಾಯಕರ ಜೊತೆಗೆ ಕಿರಿಯರ ಜೊತೆಗೆ ಕಿರಿಯರಿಗೂ ಸಚಿವ ಸ್ಥಾನವನ್ನ ನೀಡಲು ಹೈಕಮಾಂಡ್ ತಿರ್ಮಾನ ನಡೆಸಿದೆ. ಸಿದ್ದರಾಮಯ್ಯ ಅವರ ಬಳಿ ಮೂರು ಖಾತೆ, ಡಿ ಕೆ ಶಿವಕುಮಾರ್ ಎರಡು ಖಾತೆಗಳ ಉಳಿಸಿಕೊಳ್ಳಲಿದ್ದಾರೆ, ಇನ್ನೂ ಉಳಿದ 28 ಖಾತೆಗಳಲ್ಲಿ ಯಾರಿಗೆ ಯಾವ ಖಾತೆಯನ್ನ ನೀಡಬೇಕು ಎಂಬ ಲೆಕ್ಕಾಚಾರವನ್ನ ಹೈಕಮಾಂಡ್ ಹಾಕಿಕೊಂಡಿದೆ.
ಇನ್ನು ಹೈಕಮಾಂಡ್ ನಾಯಕರ ಸಂಧಾನದಿಂದಾಗಿ ಸಿಎಂ ಸ್ಥಾನದಿಂದ ಹಿಂದೆ ಸರಿದಿರುವ ಡಿ ಕೆ ಶಿವಕುಮಾರ್ ಮೊದಲು ಹಣಕಾಸು ಖಾತೆ ತಮಗೆ ಬೇಕು ಎಂದು ಕೇಳಿದ್ದಾರೆ. ಇದಕ್ಕೆ ಒಪ್ಪದ ಸಿದ್ದರಾಮಯ್ಯ ಹಣಕಾಸು ಖಾತೆ ನನ್ನ ಬಳಿಯೇ ಇರಲಿ ಎಂದು ಹೇಳಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಇಂಧನ, ಜಲ ಸಂಪನ್ಮೂಲ ಖಾತೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.












Click it and Unblock the Notifications