ಸಂಪುಟ ವಿಸ್ತರಣೆ ಪ್ರಸವ ವೇದನೆಗೆ ಕೊನೆ ಎಂದು? ಕೂಡ ಬಾರದ ಮುಹೂರ್ತ
ಬೆಂಗಳೂರು, ನವೆಂಬರ್ 10: ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಗಾಗಿ ಕಾಂಗ್ರೆಸ್ ಜೆಡಿಎಸ್ ಮುಖಂಡರು ಕಾತುರದಿಂದ ಬಕ ಪಕ್ಷಿಯಂತೆ ಕಾಯುತ್ತಿದ್ದರೆ ಇನ್ನೊಂದೆಡೆ ಸಂಪುಟ ವಿಸ್ತರಣೆ ಆಗಬೇಕೆ? ಬೇಡವೇ ಎಂಬ ಜಿಜ್ಞಾಸೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಲ್ಲಿ ಮೂಡಿದೆ.
ಈಗಾಗೇ ಹಲವು ಬಾರಿ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕ ಪರಿಷತ್ ಅಧ್ಯಕ್ಷರ ನೇಮಕ ಸೇರಿದಂತೆ ಎಲ್ಲಾ ಪ್ರಕ್ರಿಯೆಯನ್ನು ಒಂದಲ್ಲಾ ಒಂದು ಕಾರಣ ಹೇಳಿ ಮುಂದೂಡಲಾಗುತ್ತಿದೆ.
ನಿಜವಾಗಿಯೂ ಸಮ್ಮಿಶ್ರ ಸರ್ಕಾರಕ್ಕೆ ಸಂಪುಟ ವಿಸ್ತರಣೆ ಮಾಡುವ ಆಲೋಚನೆ ಇದೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ನವೆಂಬರ್ 12ರ ನಂತರ ಕಾಂಗ್ರೆಸ್ ನ ಪ್ರಮುಖ ನಾಯಕರು ಸಭೆ ಸೇರಿ ಮುಂದಿನ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

ಸಮನ್ವಯ ಸಮಿತಿ ಸಭೆ ಇನ್ನೂ ನಿಶ್ಚಯವಾಗಿಲ್ಲ
ಶೀಘ್ರದಲ್ಲಿ ಸನ್ವಯ ಸಮಿತಿ ಸಭೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ತಿಳಿಸಿದ್ದರೂ ಕೂಡ ಅದಕ್ಕೂ ಇದುವರೆಗೆ ಮುಹೂರ್ತ ಕೂಡಿಬಂದಿಲ್ಲ, ಪ್ರಮುಖರ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಲಿದೆ. ಮಂತ್ರಿ ಮಂಡಲ ರಚನೆ, ನಿಗಮ-ಮಂಡಳಿಗಳಿಗೆ ನೇಮಕ ಮಾಡುವುದರಿಂದ ಉಂಟಾಗಬಹುದಾದ ಸನ್ನಿವೇಶಗಳ ಬಗ್ಗೆ ಚರ್ಚೆ ನಡೆಯಲಿದೆ.

ನವೆಂಬರ್ 12 ಅಥವಾ 13ರಂದು ಸಭೆ
ನವೆಂಬರ್ 12 ಅಥವಾ 13ರಂದು ಸಮ್ಮಿಶ್ರ ಸರ್ಕಾರದ ಸಭೆ ನಡೆಯುವ ಸಾಧ್ಯತೆ ಇದೆ. ಒಂದು ವೇಳೆ ಕಾರ್ಯಕ್ರಮಗಳಿದ್ದರೆ ಒಂದೆರೆಡು ದಿನ ತಡವಾಗಬಹುದು ಎಂದು ಕಾಂಗ್ರೆಸ್ನ ನಾಯಕರು ತಿಳಿಸಿದ್ದಾರೆ.

ಸಂಪುಟ ವಿಸ್ತರಣೆಗೆ ಜೆಡಿಎಸ್ ವರಿಷ್ಠರ ಪೂರ್ಣ ಸಹಮತವಿಲ್ಲ
ನವೆಂಬರ್ 21ರ ಬಳಿಕ ಸಮನ್ವಯ ಸಮಿತಿ ಸಭೆ ನಡೆಯಬಹುದೆಂದು ಅಂದಾಜಿಸಲಾಗಿದ್ದು, ಆ ಬಗ್ಗೆಯೂ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಯಾವೆಲ್ಲಾ ವಿಷಯಗಳ ಚರ್ಚೆ ನಡೆಸಬೇಕೆಂದು ಕುರಿತು ತೀರ್ಮಾನಿಸಲಾಗುತ್ತದೆ. ಸಂಪುಟ ವಿಸ್ತರಣೆಗೆ ಜೆಡಿಎಸ್ ವರಿಷ್ಠರ ಸಹಮತವಿಲ್ಲ ಎಂಬ ಮಾತು ಕಾಂಗ್ರೆಸ್ನಲ್ಲಿದೆ.

ನಾಯಕರು ದಂಗೆ ಎದ್ದರೆ ಲೋಕಸಭೆ ಚುನಾವಣೆಗೆ ಸಂಕಷ್ಟ
ಈ ಸಂಪುಟದಲ್ಲಿರುವ ಕೆಲವರು ಮತ್ತು ಪಕ್ಷ ಒಂದಿಬ್ಬರು ಹಿರಿಯ ನಾಯಕರು ಸಂಪುಟ ವಿಸ್ತರಣೆಗೆ ಸಹಮತ ವ್ಯಕ್ತಪಡಿಸುತ್ತಿಲ್ಲ ಎಂಬ ಮಾತಿದೆ, ಈಗ ಸಂಪುಟ ವಿಸ್ತರಣೆ ಮಾಡಿದರೆ ಅವಕಾಶ ಸಿಗದವರು ದಂಗೆ ಏಳುವ ಸಾಧ್ಯತೆ ಇದೆ ಇದು ಲೋಕಸಭಾ ಚುನಾವಣೆಗೆ ಸಂಕಷ್ಟವನ್ನು ತಂದೊಡ್ಡಲಿದೆ. ಹಾಗಾಗಿ ಲೋಕಸಭೆ ಚುನಾವಣೆವರೆಗೂ ಸಂಪುಟ ವಿಸ್ತರಣೆ ಮಾಡುವುದು ಅನುಮಾನ ಎನ್ನುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.












Click it and Unblock the Notifications