ಸಂಪುಟ ವಿಸ್ತರಣೆಗೆ ದೆಹಲಿಗೆ ಹೊರಟು ನಿಂತ ಸಿಎಂ ಬಿಎಸ್ವೈ: ಮತ್ತೆ 'ನಾಳೆ ಬಾ' ಎಂದ ಹೈಕಮಾಂಡ್
ಬೆಂಗಳೂರು, ನ 14: ಅದೇನೋ ಸಂಪುಟ ಸೇರಲು ಬಯಸುತ್ತಿರುವವರ ಗ್ರಹಗತಿ ಸರಿಯಿಲ್ಲವೇನೋ ಏನೋ, ಮುಖ್ಯಮಂತ್ರಿ ಯಡಿಯೂರಪ್ಪನವರ ದೆಹಲಿ ಪ್ರವಾಸಕ್ಕೆ ಒಂದಲ್ಲಾ ಒಂದು ವಿಘ್ನಗಳು ಎದುರಾಗುತ್ತಲೇ ಇದೆ.
ಉಪಚುನಾವಣೆಗೆ ಮುನ್ನ ಸಂಪುಟ ವಿಸ್ತರಣೆ ಮಾಡಲು ಬಯಸಿದ್ದ ಯಡಿಯೂರಪ್ಪನವರಿಗೆ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಈಗ, ಉಪಚುನಾವಣೆ ಗೆದ್ದ ನಂತರವೂ, ವರಿಷ್ಠರ ಭೇಟಿಗೆ ಸಮಯ ಸಿಗುತ್ತಿಲ್ಲ. ಈ ಬಾರಿ, ಬಿಹಾರ ಸರಕಾರ ರಚನೆಯ ಕಾರಣ.
ಈ ಬಗ್ಗೆ ಮಾತನಾಡಿರುವ ಸಿಎಂ ಬಿಎಸ್ವೈ, "ಇಂದು (ನ 14) ದೆಹಲಿಗೆ ಹೋಗಿ ನಮ್ಮ ನಾಯಕರನ್ನು ಭೇಟಿ ಮಾಡಲು ಬಯಸಿದ್ದೆ. ಆದರೆ, ಹೈಕಮಾಂಡ್ ಬಿಹಾರ ರಚನೆಯ ವಿಚಾರದಲ್ಲಿ ಬ್ಯೂಸಿಯಾಗಿದ್ದಾರೆ"ಎಂದು ಹೇಳಿದರು.

"ಬಿಹಾರದಲ್ಲಿ ಸರಕಾರ ರಚನೆಯಾದ ನಂತರ ನೀವು ದೆಹಲಿಗೆ ಬರಬೇಕು ಎನ್ನುವುದು ನಮ್ಮ ಅಪೇಕ್ಷೆ. ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ, ನಾವೇ ನಿಮಗೆ ಫೋನ್ ಮಾಡುತ್ತೇವೆ. ಇದಾದ ನಂತರ ದೆಹಲಿಗೆ ಬನ್ನಿ ಎನ್ನುವ ಉತ್ತರ ನಮ್ಮ ಹೈಕಮಾಂಡ್ ನಿಂದ ಬಂದಿದೆ"ಎಂದು ಯಡಿಯೂರಪ್ಪ ಹೇಳಿದರು.
ಉಪಚುನಾವಣೆಯ ಗೆಲುವಿನ ನಂತರ, "ದೊಡ್ಡ ಮಟ್ಟದಲ್ಲಿ ಸಂಪುಟ ವಿಸ್ತರಣೆ ಮಾಡಬೇಕೆಂದು ಇದ್ದೇನೆ. ಸಂಪುಟ ಪುನರ್ ರಚನೆಯೋ ಅಥವಾ ಸಂಪುಟ ವಿಸ್ತರಣೆಯೋ ಎನ್ನುವುದು ವರಿಷ್ಠರಿಗೆ ಬಿಟ್ಟ ವಿಚಾರ"ಎಂದು ಯಡಿಯೂರಪ್ಪ ಹೇಳಿದ್ದರು.
ಉಪಚುನಾವಣಾ ಫಲಿತಾಂಶದ ನಂತರ, ರಾಜ್ಯ ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ, ಸಚಿವ ಸ್ಥಾನದ ಆಕಾಂಕ್ಷಿಗಳ ಸಭೆ ನಡೆದಿತ್ತು. ಇದು, ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.












Click it and Unblock the Notifications