Karnataka Cabinet expansion; ಅಮಿತ್ ಶಾ, ನಡ್ಡಾ ಭೇಟಿಯಾದ ಸಿಎಂ, ಸಂಪುಟ ವಿಸ್ತರಣೆ ಬಗ್ಗೆ ಶೀಘ್ರ ನಿರ್ಧಾರ
ಬೆಂಗಳೂರು, ಡಿ. 27: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಸೋಮವಾರ ನವದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆ ಇನ್ನು ವಿಳಂಬವಾಗುವ ಬಗ್ಗೆ ಸುಳಿವು ನೀಡಿದ್ದಾರೆ.
ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಮೀಸಲಾತಿ ಮತ್ತು ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
Karnataka Cabinet expansion; ದೆಹಲಿಗೆ ಹೊರಟ ಸಿಎಂಗೆ ಕಾಂಗ್ರೆಸ್ ಟ್ವೀಟ್ ಬಾಣ
ಹೆಚ್ಚಿನ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಲವು ಕಡೆಯಿಂದ ಒತ್ತಡವಿದೆ.
ಬಿಜೆಪಿಯ ವರಿಷ್ಠರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, 'ರಾಜ್ಯದಲ್ಲಿ ಮೀಸಲಾತಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಪಕ್ಷವು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುತ್ತದೆ' ಎಂದು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಕುರಿತು ಬಿಜೆಪಿಯ ಉನ್ನತ ನಾಯಕತ್ವದ ಜತೆಯೂ ಚರ್ಚಿಸಿದ್ದೇನೆ . ಇದೇ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಕುರಿತು ವಿಸ್ತೃತ ಚರ್ಚೆ ನಡೆಸಿದ್ದು, ಪಕ್ಷದ ಮುಖಂಡರು ಶೀಘ್ರವೇ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ಬೆಳಗಾವಿಯಲ್ಲಿ ಮಾತಾಡಿದ್ದ ಬಸವರಾಜ ಬೊಮ್ಮಾಯಿ, ರಾಜ್ಯ ಸಂಪುಟ ವಿಸ್ತರಣೆ ಮತ್ತು 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಕುರಿತು ರಾಷ್ಟ್ರೀಯ ನಾಯಕರ ಜೊತೆಗೆ ಚರ್ಚಿಸಲು ನವದೆಹಲಿಗೆ ತೆರಳುವುದಾಗಿ ತಿಳಿಸಿದ್ದರು.
ಖಾಲಿ ಇರುವ ಐದು ಸ್ಥಾನಗಳಳಿಗೆ ಹಲವು ಆಕಾಂಕ್ಷಿಗಳಿದ್ದು, ಕೆಲವನ್ನು ಕೈಬಿಟ್ಟು ಸಮಾನ ಸಂಖ್ಯೆಯ ಹೊಸ ಮುಖಗಳನ್ನು ಸೇರಿಸಿಕೊಳ್ಳುವ ಮೂಲಕ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ಬಂದಿವೆ.
ಇನ್ನು, ಸಂವಿಧಾನದ ಒಂಬತ್ತನೇ ಶೆಡ್ಯೂಲ್ ಅಡಿಯಲ್ಲಿ ಕರ್ನಾಟಕದಲ್ಲಿ ಎಸ್ಸಿ ಎಸ್ಟಿ ಒಟ್ಟು ಮೀಸಲಾತಿಯನ್ನು ಎಸ್ಸಿ ವರ್ಗಕ್ಕೆ ಪ್ರಸ್ತುತ ಶೇ.15 ಮೀಸಲಾತಿ ಇದ್ದು, ಅದನ್ನು ಶೇ.17ಕ್ಕೆ ಮತ್ತು ಎಸ್ಟಿ ವರ್ಗದ ಮೀಸಲಾತಿ ಶೇ.3 ಇದ್ದು, ಅದನ್ನು ಶೇ.7ಕ್ಕೆ ಹೆಚ್ಚಿಸುವ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ.
ಇದಲ್ಲದೆ, ಪಂಚಮಸಾಲಿ ಲಿಂಗಾಯತರು ಒಬಿಸಿಯ ಮೀಸಲಾತಿ ವರ್ಗ 3ಬಿ ಯಿಂದ ವರ್ಗ 2ಎ ಅಡಿಯಲ್ಲಿ ಸೇರಿಸಬೇಕು ಎಂದು ಒತ್ತಡವನ್ನು ಹೆಚ್ಚಿಸುತ್ತಿದ್ದಾರೆ. ಇತ್ತ, ಎಸ್ಸಿ/ಎಸ್ಟಿಗಳಿಗಳ ಒಳಗೆ ಒಳ ಮೀಸಲಾತಿ ಕೋರಿ ಸಂಘಟನೆಗಳು ತಿಂಗಳಿಣಿಮದ ಪ್ರತಿಭಟನೆ ನಡೆಸುತ್ತಿವೆ. ಇದಲ್ಲದೆ, ಒಕ್ಕಲಿಗರು ಕೂಡ ತಮ್ಮ ಕೋಟಾವನ್ನು ಶೇ.4ರಿಂದ 12ಕ್ಕೆ ಏರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹೇರುತ್ತಿದ್ದಾರೆ.