Breaking; ಸಂಪುಟ ವಿಸ್ತರಣೆ ಕಸರತ್ತು, ದೆಹಲಿಗೆ ಹೊರಟ ಸಿಎಂ
ಬೆಂಗಳೂರು, ಮೇ 07; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪಕ್ಷದ ಹಿರಿಯ ನಾಯಕ ಅಮಿತ್ ಶಾ ಬೆಂಗಳೂರು ಭೇಟಿ ಬಳಿಕ ಈ ಕುರಿತ ಚರ್ಚೆಗಳು ಮತ್ತಷ್ಟು ಕಾವು ಪಡೆದಿವೆ.
ಬಸವರಾಜ ಬೊಮ್ಮಾಯಿ ಒಂದು ದಿನದ ಭೇಟಿಗಾಗಿ ನವದೆಹಲಿಗೆ ಹೊರಟಿದ್ದು, ಸಂಪುಟ ವಿಸ್ತರಣೆ ನಿರೀಕ್ಷೆಯಲ್ಲಿರುವ ಶಾಸಕರಲ್ಲಿ ಹೊಸ ಚೈತನ್ಯ ತುಂಬಿದೆ. ಮೇ 10ರಂದು ದೆಹಲಿಗೆ ಭೇಟಿ ನೀಡಲಿರುವ ಸಿಎಂ ಮೇ 11ರಂದು ವಾಪಸ್ ಆಗಲಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, "ಅಮಿತ್ ಶಾ ಮಾತನಾಡಿ ಹೇಳುತ್ತೇವೆ ಎಂದು ಹೇಳಿದ್ದಾರೆ. ಕರೆ ಬಂದರೆ ಹೋಗುತ್ತೇನೆ" ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಸೇರ್ಪಡೆ; ಇಂದು ಮಂಡ್ಯ, ಕೋಲಾರದ ನಾಯಕರು ಬಿಜೆಪಿ ಸೇರುವ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, "ಬಿಜೆಪಿಯಲ್ಲಿ ಬಹಳ ಬದಲಾವಣೆ ಆಗುತ್ತಿದೆ. ನಮ್ಮ ಸಿದ್ಧಾಂತ ನಂಬಿ ಯಾರು ಬರುತ್ತಾರೋ ಅವರನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ" ಎಂದರು.
ಮಾಲೂರು ಮಂಜುನಾಥ್ ಗೌಡ ಬಿಜೆಪಿ ಸೇರ್ಪಡೆಗೆ ಸ್ಥಳೀಯ ಬಿಜೆಪಿಗರ ವಿರೋಧದ ಕುರಿತು ಮಾತನಾಡಿದ ಸಿಎಂ, "ಈ ವಿಚಾರದ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಜಿಲ್ಲಾ ಘಟಕದ ಸ್ಥಳೀಯ ಮುಖಂಡರು ತೀರ್ಮಾನ ಮಾಡುತ್ತಾರೆ" ಎಂದು ಹೇಳಿದರು.
ನಾವು ಗೆಲ್ಲುವ ಅವಕಾಶಗಳು ಬರುತ್ತಿವೆ; "ಬಿಜೆಪಿ ಪರವಾದ ಬದಲಾವಣೆಗಳು ಆಗುತ್ತಿವೆ. ಅದರ ಪ್ರಭಾವದಿಂದ ಹಲವು ಕ್ಷೇತ್ರಗಳಲ್ಲಿ ನಾವು ಗೆಲ್ಲುವ ಅವಕಾಶಗಳು ಬರುತ್ತಿವೆ. ನಮ್ಮ ಪಕ್ಷದ ಸಿದ್ಧಾಂತಗಳನ್ನು ನಂಬಿ ಬರುವವರ ಸೇರ್ಪಡೆ ಪ್ರಕ್ರಿಯೆ ನಡೆಯುತ್ತಿದೆ. ಇವತ್ತು ಕೆಲವರ ಸೇರ್ಪಡೆ ಕಾರ್ಯ ನಡೆಯಲಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನ ಪಕ್ಷ ಸೇರುವವರಿದ್ದಾರೆ" ಎಂದರು.
ದಾಖಲೆ ಕೊಡಿ; ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಪ್ರಭಾವಿಗಳ ಕೈವಾಡ ಬಗ್ಗೆ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, "ಯಾರು-ಯಾರು ಏನೇನು ಹೇಳಿಕೆ ಕೊಡುತ್ತಾರೋ ಕೊಡಲಿ. ಅದಕ್ಕೆ ಬದ್ಧವಾಗಿ ದಾಖಲೆ ಕೊಡಲಿ. ದಾಖಲೆ ಕೊಟ್ಟರೆ ತನಿಖೆಯಲ್ಲಿ ಸೇರಿಸಿಕೊಳ್ಳುತ್ತೇವೆ" ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
'ವಿಧಾನಸೌಧ ವ್ಯಾಪಾರ ಸೌಧ ಆಗಿದೆ' ಎಂಬ ಪ್ರಿಯಾಂಕ್ ಖರ್ಗೆ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿ, "ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಪ್ರಿಯಾಂಕ್ ಖರ್ಗೆ ಮೂಲ ಕಾಂಗ್ರೆಸಿಗರು ಹಾಗಾಗಿ ಅವರಿಗೆ ಭ್ರಷ್ಟಾಚಾರ ಕರಗತ ಆಗಿದೆ. ನಾವು ಪ್ರಿಯಾಂಕ್ ಖರ್ಗೆಯಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ" ಎಂದು ತಿರುಗೇಟು ನೀಡಿದರು.












Click it and Unblock the Notifications