ಕೋಟ್ಯಧಿಪತಿಯಾಗಿದ್ದರೂ ಬಿಎಸ್ವೈ ಪುತ್ರನ ಬಳಿ ಸ್ವಂತ ಕಾರಿಲ್ಲ: ವಿಜಯೇಂದ್ರ ಆಸ್ತಿ ವಿವರ ಇಲ್ಲಿದೆ
ಬೆಂಗಳೂರು, ಏಪ್ರಿಲ್ 18: ಕರ್ನಾಟಕ ವಿಧಾನಸಭಾ ಚುನಾವಣೆ ಈ ಬಾರಿ ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ಹಿಂದೆ ಸರಿದ್ದಾರೆ. ಬದಲಾಗಿ ತಮ್ಮ ಪುತ್ರನನ್ನು ಈ ಬಾರಿಯ ಚುನಾವಣಾ ಕಣಕ್ಕಿಳಿಸಿದ್ದಾರೆ.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ತಮ್ಮ ಕ್ಷೇತ್ರ ಶಿಕಾರಿಪುರವನ್ನು ಪುತ್ರ ಬಿ.ವೈ ವಿಜಯೇಂದ್ರಗೆ ಬಿಟ್ಟು ಕೊಟ್ಟಿದ್ದಾರೆ. ಶಿಕಾರಿಪುರ ಸ್ಪರ್ಧಿಸುವ ಮೂಲಕ ಬಿ.ವೈ ವಿಜಯೇಂದ್ರ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಪಕ್ಷ ಸಂಘಟನೆಯ ಮೂಲಕ ತಮ್ಮ ಛಾಪು ಹೆಚ್ಚಿಸಿಕೊಂಡಿದ್ದ ವಿಜಯೇಂದ್ರ , ಇದೀಗ ವಿಧಾನಸೌಧ ಪ್ರವೇಶಿಸಲು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.

ತಂದೆ ದಿಗ್ವಿಜಯ ಸಾಧಿಸಿರುವ ಕ್ಷೇತ್ರದಿಂದಲೇ ಬಿ.ವೈ ವಿಜಯೇಂದ್ರ ತಮ್ಮ ಮೊದಲ ಚುನಾವಣೆ ಎದುರಿಸುತ್ತಿದ್ದು, ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ, 47 ವರ್ಷದ ವಿಜಯೇಂದ್ರ ಅವರ ಅವರ ಆಸ್ತಿ ವಿವರದ ಬಗ್ಗೆ ಎಲ್ಲರಲ್ಲೂ ಕುತೂಹಲವಿದ್ದು, ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ವಿಜಯೇಂದ್ರ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ.
ಸ್ವಂತ ಕಾರಿಲ್ಲದ ಬಿ.ವೈ ವಿಜಯೇಂದ್ರ ಆಸ್ತಿ ವಿವರ
ಬಿ.ವೈ ವಿಜಯೇಂದ್ರ ಅವರ ಅಫಿಡವಿಟ್ನಲ್ಲಿ ಅಚ್ಚರಿಯ ವಿಚಾರವೊಂದು ತಿಳಿದು ಬಂದಿದೆ. ಬಿ.ವೈ ವಿಜಯೇಂದ್ರ ಹಾಗೂ ಪತ್ನಿ ಪ್ರೇಮಾ ವಿಜಯೇಂದ್ರ ಕೋಟ್ಯಧಿಪತಿಗಳಾಗಿದ್ದರೂ ಸ್ವಂತ ಕಾರಿಲ್ಲ ಎನ್ನಲಾಗಿದೆ. ಬಿ.ವೈ ವಿಜಯೇಂದ್ರ ದಂಪತಿ ಒಟ್ಟು 126.18 ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ.

ವಿಜಯೇಂದ್ರ ಅವರ ಹೆಸರಿನಲ್ಲಿ 46.82 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ ಅವರ ಪತ್ನಿ ಪ್ರೇಮಾ ವಿಜಯೇಂದ್ರ ಅವರ ಹೆಸರಿನಲ್ಲಿ 7.85 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಇದೆ. ಇನ್ನು ಈ ದಂಪತಿ ಪ್ರಸ್ತುತ 70.11 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಶಿಕಾರಿಪುರದಲ್ಲಿ ಕೃಷಿ ಭೂಮಿ, ದೊಡ್ಡಬಳ್ಳಾಪುರ, ರಾಮನಗರ, ಶಿಕಾರಿಪುರ, ಶಿವಮೊಗ್ಗ, ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಕೃಷಿಯೇತರ ಭೂಮಿ ಜೊತೆಗೆ ಏಳು ಮನೆಗಳಿದ್ದು, ಒಟ್ಟು 1.75 ಲಕ್ಷ ರೂಪಾಯಿ ಮೌಲ್ಯದ ಟ್ರ್ಯಾಕ್ಟರ್ ಹೊಂದಿದ್ದಾರೆ. ವಿಜಯೇಂದ್ರ ಅವರ ಬಳಿ 1.34 ಕೆಜಿ ಚಿನ್ನ ಹಾಗೂ ಅವರ ಪತ್ನಿ ಬಳಿಕ 1.25 ಕೆಜಿ ಚಿನ್ನಾಭರಣ ಸೇರಿದಂತೆ ಒಟ್ಟು ದಂಪತಿ ಬಳಿ 2.29 ಕೋಟಿ ರೂಪಾಯಿ ಮೌಲ್ಯದ ಚಿನ್ನ, ವಜ್ರ, ಬೆಳ್ಳಿ ವಸ್ತುಗಳು ಇದೆ ಎಂದು ನಾಮಪತ್ರದಲ್ಲಿ ಸಲ್ಲಿಸಿದ್ದಾರೆ.
ಇನ್ನು ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣ ಸೇರಿದಂತೆ ಒಟ್ಟು ಬಿ.ವೈ ವಿಜಯೇಂದ್ರ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದೆ ಎನ್ನುವುದನ್ನು ನಾಮಪತ್ರ ಸಲ್ಲಿಕೆಯಲ್ಲಿ ವಿವರಿಸಿದ್ದಾರೆ.
ಶಿಕಾರಿಪುರ ಬಿಜೆಪಿ ಭದ್ರಕೋಟೆಯಾಗಿದ್ದು, ಮಾಜಿ ಸಿ.ಎಂ ಯಡಿಯೂರಪ್ಪ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಎಂಟು ಬಾರಿ ಗೆಲುವು ಸಾಧಿಸಿದ್ದರು. ಹೀಗಾಗಿ ಕ್ಷೇತ್ರ ಉಳಿಸಿಕೊಳ್ಳಲು ಯಡಿಯೂರಪ್ಪ ಪುತ್ರ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದ್ದು, ಬಿ.ವೈ ವಿಜಯೇಂದ್ರ ತಮ್ಮ ಗೆಲುವಿಗಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಮತದಾರರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.
ಇನ್ನು ಕರ್ನಾಟಕ ವಿಧಾನಸಭಾ ಚುನಾವಣೆಗೆ ಶಿಕಾರಿಪುರದಿಂದ ಸ್ಪರ್ಧಿಸಲು ಬಹುತೇಕ ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ಘೋಷಣೆಯಾಗಿದೆ. ಬಿ.ವೈ ವಿಜಯೇಂದ್ರ ಬಿಜೆಪಿಯಿಂದ ಸ್ಫರ್ಧಿಸುತ್ತಿದ್ದರೆ, ಜಿ.ಬಿ ಮಾಲತೇಶ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದಾರೆ. ಇನ್ನು ಸುಧಾಕರ್ ಶೆಟ್ಟಿ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಚಂದ್ರಕಾಂತ್ ರೇವಣ್ಣಕರ ಎಎಪಿಯ ಅಭ್ಯರ್ಥಿಯಾಗಿದ್ದಾರೆ.












Click it and Unblock the Notifications