ಅನರ್ಹ ಶಾಸಕರು ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಬಹುದು
ಬೆಂಗಳೂರು, ಸೆಪ್ಟೆಂಬರ್ 24 : "15 ಕ್ಷೇತ್ರಗಳ ಉಪ ಚುನಾವಣೆಗೆ ಅನರ್ಹ ಶಾಸಕರು ಸೇರಿದಂತೆ ಯಾರು ಬೇಕಾದರೂ ನಾಮಪತ್ರವನ್ನು ಸಲ್ಲಿಸಬಹುದು" ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, "ಅನರ್ಹ ಶಾಸಕರು ಸೇರಿದಂತೆ ಯಾರು ಬೇಕಾದರೂ ನಾಮಪತ್ರ ಸಲ್ಲಿಸಬಹುದು. ಆದರೆ, ಅದು ಅಂಗೀಕಾರಗೊಳ್ಳುವುದು ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿದೆ" ಎಂದರು.
"ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಸೋಮವಾರ ಆಯೋಗದ ಪರ ವಕೀಲರು ಸ್ವಯಂ ಪ್ರೇರಿತವಾಗಿ ಹಾಜರಾಗಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧೆ ಮಾಡಲು ಆಯೋಗದ ಆಕ್ಷೇಪಣೆ ಇಲ್ಲ ಎಂದು ಹೇಳಿದ್ದಾರೆ" ಎಂದು ಸಂಜೀವ್ ಕುಮಾರ್ ತಿಳಿಸಿದರು.

"ಶಾಸಕರು ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಮಾತನಾಡಿದರೆ ನ್ಯಾಯಾಂಗ ನಿಂದನೆಯಾಗುತ್ತದೆ. ಅನರ್ಹರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆ ಮಾಡುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
"ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಶೀಘ್ರವೇ ತೀರ್ಪು ಹೊರಬೀಳಬಹುದು. ಆನಂತರ ಎಲ್ಲದಕ್ಕೂ ಸ್ಪಷ್ಟತೆ ಸಿಗಲಿದೆ. ಆ ತನಕ ನಾವು ಹೆಚ್ಚು ಚರ್ಚೆ ಮಾಡುವುದು ಬೇಡ. ನಾಮಪತ್ರಗಳನ್ನು ಪರಿಶೀಲನೆ ಮಾಡುವಾಗ ಚುನಾವಣಾಧಿಕಾರಿಗಳು ಎಲ್ಲವನ್ನೂ ಗಮನಿಸುತ್ತಾರೆ" ಎಂದರು.
ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಉಪ ಚುನಾವಣೆ ನಡೆಯಲಿದೆ. ಅನರ್ಹ ಶಾಸಕರು ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬುಧವಾರ ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ.
ಚುನಾವಣೆ ನಡೆಯಲಿರುವ ಕ್ಷೇತ್ರ : 1.ಯಲ್ಲಾಪುರ (ಉತ್ತರ ಕನ್ನಡ), 2.ಯಶವಂತಪುರ (ಬೆಂಗಳೂರು), 3.ವಿಜಯನಗರ (ಬಳ್ಳಾರಿ), 4. ಶಿವಾಜಿನಗರ (ಬೆಂಗಳೂರು), 5. ಹೊಸಕೋಟೆ (ಬೆಂಗಳೂರು ಗ್ರಾಮಾಂತರ), 6. ಹುಣಸೂರು (ಮೈಸೂರು), 7.ಕೃಷ್ಣರಾಜಪೇಟೆ (ಮಂಡ್ಯ), 8. ಮಹಾಲಕ್ಷ್ಮೀ ಲೇಔಟ್ (ಬೆಂಗಳೂರು), 9. ಚಿಕ್ಕಬಳ್ಳಾಪುರ (ಚಿಕ್ಕಬಳ್ಳಾಪುರ), 10. ಗೋಕಾಕ್ (ಬೆಳಗಾವಿ), 11. ಅಥಣಿ (ಬೆಳಗಾವಿ), 12. ರಾಣೆಬೆನ್ನೂರು (ಹಾವೇರಿ), 13.ಕಾಗವಾಡ (ಬೆಳಗಾವಿ), 14. ಹಿರೇಕೆರೂರು (ಹಾವೇರಿ), 15. ಕೆ. ಆರ್. ಪುರ (ಬೆಂಗಳೂರು)












Click it and Unblock the Notifications