ಉಪ ಚುನಾವಣೆ; ಟಿಕೆಟ್ ಹಂಚಿಕೆಗೆ ಬಿಜೆಪಿಗೆ ಕಗ್ಗಂಟಾದ ಕ್ಷೇತ್ರಗಳು
ಬೆಂಗಳೂರು, ಸೆಪ್ಟೆಂಬರ್ 24 : 15 ಅನರ್ಹ ಶಾಸಕರು ಚುನಾವಣಾ ಕಣಕ್ಕಿಳಿಯಲು ಸುಪ್ರೀಂಕೋರ್ಟ್ನಲ್ಲಿ ಒಪ್ಪಿಗೆ ಸಿಗಬಹುದು. ಆದರೆ, ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಬಿಜೆಪಿಗೆ ಸೇರಿಸಿಕೊಳ್ಳಲು ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಟಿಕೆಟ್ಗೆ ಅಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಸ್ಥಳೀಯ ಬಿಜೆಪಿ ನಾಯಕರು, ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಸೋಲು ಕಂಡವರು ಉಪ ಚುನಾವಣೆ ಟಿಕೆಟ್ ನಮಗೆ ಕೊಡಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕರ ವಿರೋಧ ಕಟ್ಟಿಕೊಂಡು ಅನರ್ಹ ಶಾಸಕರಿಗೆ ಟಿಕೆಟ್ ನೀಡಿದರೆ ಕಾರ್ಯಕರ್ತರು ಉತ್ಸಾಹದಿಂದ ಚುನಾವಣೆಯಲ್ಲಿ ಕೆಲಸ ಮಾಡಲಿದ್ದಾರೆಯೇ? ಎಂಬುದು ಪಕ್ಷದ ನಾಯಕರ ಆತಂಕವಾಗಿದೆ. ಬಿಜೆಪಿ ಸರ್ಕಾರ ಉಳಿಯಬೇಕಾದರೆ ಉಪ ಚುನಾವಣೆಯಲ್ಲಿ 8 ಸ್ಥಾನಗಳಲ್ಲಿ ಜಯಗಳಿಸಲೇಬೇಕಾಗಿದೆ.
ಹೊಸಕೋಟೆ, ಕೆ. ಆರ್. ಪುರ, ಮಹಾಲಕ್ಷ್ಮೀ ಲೇಔಟ್, ಹಾವೇರಿ, ಯಶವಂತಪುರದಲ್ಲಿ ಅನರ್ಹ ಶಾಸಕರು ಬಿಜೆಪಿ ಸೇರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಆದ್ದರಿಂದ, ಸ್ಥಳೀಯ ನಾಯಕರನ್ನು ಸಮಾಧಾನಪಡಿಸಿ ಟಿಕೆಟ್ ಹಂಚಿಕೆ ಮಾಡುವ ಸವಾಲು ಬಿಜೆಪಿ ನಾಯಕರ ಮುಂದಿದೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರ
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ಗೆ ಬಿಜೆಪಿ ಟಿಕೆಟ್ ಕೊಡಲು ತೀವ್ರ ವಿರೋಧ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ಸಂಸದ ಬಿ. ಎನ್. ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್ ನಡುವೆ ರಾಜಕೀಯ ವಿರೋಧವಿದೆ. ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಟಿಕೆಟ್ ತಮಗೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಬಿಜೆಪಿಗೆ ಇದು ತಲೆನೋವು ತಂದಿದೆ.

ಕೆ. ಆರ್. ಪುರ ಕ್ಷೇತ್ರ
ಬೆಂಗಳೂರಿನ ಕೆ. ಆರ್. ಪುರ ಕ್ಷೇತ್ರದಲ್ಲಿ ಅನರ್ಹ ಶಾಸಕ ಬೈರತಿ ಬಸವರಾಜ ಮತ್ತು ನಂದೀಶ್ ರೆಡ್ಡಿ ಪರಸ್ಪರ ವಿರೋಧಿಗಳು. ದಶಕಗಳಿಂದ ವಿರೋಧಿ ರಾಜಕೀಯ ಮಾಡಿಕೊಂಡು ಬಂದವರು. ಬೈರತಿ ಬಸವರಾಜ ಬಿಜೆಪಿಗೆ ಬರಲು, ಟಿಕೆಟ್ ನೀಡಲು ನಂದೀಶ್ ರೆಡ್ಡಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ಬೈರತಿಗೆ ಟಿಕೆಟ್ ಸಿಕ್ಕರೆ ನಂದೀಶ್ ರೆಡ್ಡಿ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.

ಮಹಾಲಕ್ಷ್ಮೀ ಲೇಔಟ್
ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಅನರ್ಹ ಶಾಸಕ ಕೆ. ಗೋಪಾಲಯ್ಯಗೆ ಬಿಜೆಪಿ ಟಿಕೆಟ್ ನೀಡುವುದಕ್ಕೆ ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ನೆ. ಲ. ನರೇಂದ್ರ ಬಾಬು, ಮಾಜಿ ಉಪ ಮೇಯರ್ ಹರೀಶ್ ಗೋಪಾಲಯ್ಯಗೆ ಟಿಕೆಟ್ ನೀಡುವುದು ಬೇಡ ಎಂದು ಬಿಜೆಪಿ ನಾಯಕರನ್ನು ಒತ್ತಾಯಿಸಿದ್ದಾರೆ.

ಹಾವೇರಿ ವಿಧಾನಸಭಾ ಕ್ಷೇತ್ರ
ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಅನರ್ಹ ಶಾಸಕ ಬಿ. ಸಿ. ಪಾಟೀಲ್ಗೆ ಟಿಕೆಟ್ ನೀಡಲು ಅವರ ವಿರುದ್ಧ ಸೋತಿದ್ದ ಯು. ಬಿ. ಬಣಕಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಬಿ. ಸಿ. ಪಾಟೀಲ್ ಬಿಜೆಪಿಗೆ ಬರುವುದು ಬೇಡ ಎಂಬ ಸ್ಥಳೀಯ ನಾಯಕರ ಒತ್ತಾಯ ಪಕ್ಷಕ್ಕೆ ಕಗ್ಗಂಟಾಗಿದೆ.

ವಿವಿಧ ಕ್ಷೇತ್ರಗಳು
ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್ ಬಿಜೆಪಿಗೆ ಬರುವುದು ಬೇಡ ಎಂದು ಎ. ಬಿ. ಪಾಟೀಲ ವಿರೋಧಿಸಿದ್ದಾರೆ. ಯಶವಂತಪುರದಲ್ಲಿ ಎಸ್. ಬಿ. ಸೋಮಶೇಖರ್ ಬಿಜೆಪಿಗೆ ಬರುವುದಕ್ಕೆ ನಟ ಜಗ್ಗೇಶ್ ವಿರೋಧವಿದೆ. ಶಿವಾಜಿನಗರದಲ್ಲಿ ರೋಷನ್ ಬೇಗ್ಗೆ ಟಿಕೆಟ್ ನೀಡಲು ಕಟ್ಟಾ ಸುಬ್ರಮಣ್ಯ ನಾಯ್ಡು ಒಪ್ಪುತ್ತಿಲ್ಲ.












Click it and Unblock the Notifications