ಜಾರಕಿಹೊಳಿ 'ಮಂಚ'ವನ್ನು ಮತ್ತೆ ಎಳೆದು ತಂದ ಡಿ.ಕೆ.ಶಿವಕುಮಾರ್
ಉಪ ಚುನಾವಣೆಯ ಪ್ರಚಾರದ ಅಬ್ಬರ ಅಲ್ಲಲ್ಲಿ ಸಭ್ಯತೆಯನ್ನು ಕಳೆದುಕೊಳ್ಳುತ್ತಿದೆ. ಮೂರೂ ಪಕ್ಷದ ನಾಯಕರುಗಳು ತಮ್ಮ ಭಾಷಣದಲ್ಲಿ/ ಸಾಮಾಜಿಕ ತಾಣದ ಪೋಸ್ಟ್ ನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಮಾತನ್ನು ಆಡದೇ, ವೈಯಕ್ತಿಕ ವಿಚಾರಕ್ಕೆ ಇಳಿಯುತ್ತಿದ್ದಾರೆ.
ಎರಡು ದಿನಗಳ ಕೆಳಗೆ ಪ್ರಧಾನಮಂತ್ರಿಯವರನ್ನು ಹೆಬ್ಬೆಟ್ಟು ಎಂದು ಕರೆದು ಕೆಪಿಸಿಸಿಯ ಸಾಮಾಜಿಕ ಘಟಕ ಅವಾಂತರ ಸೃಷ್ಟಿಸಿತ್ತು. ಇದಕ್ಕೆ ಕೂಡಲೇ ಸ್ಪಂದಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ಷಮೆಯಾಚಿಸಿ, ಟ್ವೀಟ್ ಅನ್ನು ಡಿಲಿಟ್ ಮಾಡಿಸಿದ್ದರು.
ಇದಾದ ನಂತರ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ಡ್ರಗ್ ಪೆಡ್ಲರ್ ಎಂದು ಹೇಳಿದ್ದರು. ಇದಕ್ಕೆ, ವ್ಯಾಪಕ ಆಕ್ರೋಶ ವ್ಯಕ್ತವಾದರೂ, ಬಿಜೆಪಿಯ ಕೆಲವು ಪ್ರಮುಖರು ಇದನ್ನು ಸಮರ್ಥಿಸಿಕೊಂಡಿದ್ದರು. ಆದರೆ, ಮಾಜಿ ಸಿಎಂ ಯಡಿಯೂರಪ್ಪ ಅವರು ಕಟೀಲ್ ಹೇಳಿಕೆ ತಪ್ಪು ಎಂದಿದ್ದರು.
ಈ ರಗಳೆ ಇಷ್ಟಕ್ಕೂ ಮುಗಿಯಲಿಲ್ಲ. ಬಿಜೆಪಿಯ ಐಟಿ ಸೆಲ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ದ್ವಿಪತ್ನಿತ್ವದ ಬಗ್ಗೆ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿತ್ತು. ಈಗ, ಮತ್ತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರ ಸರದಿ. ಮಾತಿನ ಭರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯ ವಿಚಾರವನ್ನು ಚುನಾವಣಾ ಸಭೆಯಲ್ಲಿ ಪ್ರಸ್ತಾವಿಸಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಜಾರಕಿಹೊಳಿಯವರ ಸಿಡಿ ಪ್ರಕರಣ
ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಅಶ್ಲೀಲ ಸಿಡಿ ಪ್ರಕರಣದ ಹಿಂದಿನ ರೂವಾರಿ ಯಾರು ಎನ್ನುವ ಪ್ರಶ್ನೆ ಎದುರಾದಾಗ, ಜಾರಕಿಹೊಳಿಯವರು ಕೆಪಿಸಿಸಿ ಅಧ್ಯಕ್ಷರತ್ತ ಪರೋಕ್ಷವಾಗಿ ಬೊಟ್ಟು ಮಾಡುತ್ತಿದ್ದದ್ದು ಗೊತ್ತಿರುವ ಹಳೆಯ ವಿಚಾರ. ಇದಾದ ನಂತರ, ರಮೇಶ್ ಜಾರಕಿಹೊಳಿಯವರ ಆಪ್ತರು ಸಂದೇಶವೊಂದನ್ನು ಹೊತ್ತು ಡಿಕೆಶಿಯವರನ್ನು ಭೇಟಿಯಾಗಿದ್ದರು. "ಚರ್ಚೆ ನಡೆದಿರುವುದು ಹೌದು, ಕೆಲವೊಂದು ವಿಚಾರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಲು ಆಗುವುದಿಲ್ಲ, ಗೌಪ್ಯವಾಗಿ ಇಟ್ಟುಕೊಳ್ಳಬೇಕಾಗುತ್ತದೆ"ಎಂದು ಡಿಕೆಶಿ ಕೂಡಾ ಹೇಳಿದ್ದರು.

ಬಿಜೆಪಿಯವರಿಂದ ದುಡ್ಡು ತೆಗೆದುಕೊಂಡು ಕಾಂಗ್ರೆಸ್ಸಿಗೆ ಮತ ಹಾಕಿದರು
ಈಗ, ಹಾನಗಲ್ ನಡೆದ ಚುನಾವಣಾ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ರಮೇಶ್ ಜಾರಕಿಹೊಳಿಯವರ ಮಂಚದ ವಿಚಾರವನ್ನು ಮತ್ತೆ ಪ್ರಸ್ತಾವಿಸಿ, ಸೇರಿದ್ದ ಜನಸ್ತೋಮದ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಅವರು ಹೇಳಿದ್ದು ಇಷ್ಟು,"ಮಸ್ಕಿಯ ಉಪ ಚುನಾವಣೆ ಏನಾಗಿದೆ ಎನ್ನುವುದು ನಿಮಗೆಲ್ಲಾ ಗೊತ್ತಿದೆ. ಬಿಜೆಪಿಯವರು ವೋಟಿಗೆ ಇಷ್ಟೂಂತಾ ದುಡ್ಡು ಹಂಚಿದರು. ಅಲ್ಲಿಯ ಮತದಾರ ಬಿಜೆಪಿಯವರಿಂದ ದುಡ್ಡು ತೆಗೆದುಕೊಂಡು ಕಾಂಗ್ರೆಸ್ಸಿಗೆ ಮತ ಹಾಕಿದರು. ಇಲ್ಲೂ, ನೀವು ಹಾಗೇ ಮಾಡಬೇಕು"ಎಂದು ಡಿಕೆಶಿ ಹೇಳಿದರು.

ರಮೇಶ್ ಜಾರಕಿಹೊಳಿ ಅಂತ ಒಬ್ಬ ಇದ್ದಲ್ವಾ, ಅದೇ ಮಂಚದ ಜಾರಕಿಹೊಳಿ
"ಬಿಜೆಪಿಯ ನೋಟು, ಕಾಂಗ್ರೆಸ್ಸಿಗೆ ವೋಟು. ನಮ್ಮ ಬೊಮ್ಮಾಯಿ ಅಣ್ಣ ರೋಷಾವೇಶದಿಂದ ಭಾಷಣ ಮಾಡುತ್ತಾರೆ. ಚೀಲದಲ್ಲಿ ದುಡ್ಡು ತುಂಬಿಸಿಕೊಂಡು ಬಂದು ಹಂಚಲು ಬಂದಿದ್ದಾರೆ. ಬಿಜೆಪಿಯ ಎಲ್ಲಾ ಸಚಿವರು/ಮುಖಂಡರು ಭ್ರಷ್ಟರು. ಆ ರಮೇಶಾ.. ರಮೇಶ್ ಜಾರಕಿಹೊಳಿ ಅಂತ ಒಬ್ಬ ಇದ್ದಲ್ವಾ, ಗೊತ್ತಲ್ವಾ.. ಅದೇ ಮಂಚದ ಜಾರಕಿಹೊಳಿ"ಎಂದು ರಮೇಶ್ ಜಾರಕಿಹೊಳಿಯವರನ್ನು ಏಕವಚನದಲ್ಲಿ ಸಂಭೋದಿಸಿದ ಡಿ.ಕೆ.ಶಿವಕುಮಾರ್, ಸಿಡಿ ವಿಚಾರವನ್ನು ಮತ್ತೆ ಕೆದಕಿದ್ದಾರೆ. (ಸಾಂದರ್ಭಿಕ ಚಿತ್ರ)

ಯೋಗೇಶ್ವರ್ ಮನೆ ಮಾರಿ ಸರಕಾರವನ್ನು ತಂದಿದ್ದೇನೆ ಎಂದು ಹೇಳುತ್ತಾನೆ
"ಯಾವ ಮಟ್ಟಿಗೆ ಬಿಜೆಪಿಯವರು ಅಕ್ರಮದಲ್ಲಿ ತೊಡಗಿದ್ದಾರೆ ಅಂದರೆ, ಆ ಯೋಗೇಶ್ವರ್ ಮನೆ ಮಾರಿ ಸರಕಾರವನ್ನು ತಂದಿದ್ದೇನೆ ಎಂದು ಬಹಿರಂಗವಾಗಿಯೇ ಹೇಳುತ್ತಾನೆ. ಈಗ, ಉಪ ಚುನಾವಣೆಯಲ್ಲಿ ವೋಟ್ ಒಂದಕ್ಕೆ ಎರಡರಿಂದ ಮೂರು ಸಾವಿರ ಕೊಡುವುದಕ್ಕೆ ರೆಡಿಯಾಗಿದ್ದಾರೆ. ನೀವು ಆ ದುಡ್ಡನ್ನು ಬಿಡಬೇಡಿ, ತೆಗೆದುಕೊಂಡು ಕಾಂಗ್ರೆಸ್ಸಿಗೆ ಮತ ನೀಡಿ, ನಮ್ಮನ್ನು ಹರಸಿ"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತದಾರರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications