ಉಪಚುನಾವಣೆ: 50.80 ಲಕ್ಷ ಹಣ, 60 ಸಾವಿರ ಲೀಟರ್ ಮದ್ಯ ವಶ
ಬೆಂಗಳೂರು, ಅಕ್ಟೋಬರ್ 31: ಐದು ಕ್ಷೇತ್ರಗಳ ಉಪಚುನಾವಣೆಗೆ ನಾಳೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಚುನಾವಣೆ ಘೋಷಣೆ ಆದಾಗಿನಿಂದ ಇಂದಿನವರೆಗೆ ಎಷ್ಟು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಇಂದು ಮಾಹಿತಿ ಹಂಚಿಕೊಂಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಚುನಾವಣಾ ಮುಖ್ಯಾಧಿಕಾರಿ ಸಂಜಯ್ ಕುಮಾರ್ ಅವರು, ಈ ವರೆಗೆ 50.80 ಲಕ್ಷ ಹಣ ಹಾಗೂ 60000 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ನವೆಂಬರ್ 3 ರಂದು ಬಳ್ಳಾರಿ, ಮಂಡ್ಯ, ಶಿವಮೊಗ್ಗ ಕ್ಷೇತ್ರದ ಲೋಕಸಭೆ ಉಪಚುನಾವಣೆ ಹಾಗೂ ಜಮಖಂಡಿ, ರಾಮನಗರ ಕ್ಷೇತ್ರದ ವಿಧಾನಸಭೆ ಉಪ ಚುನಾವಣೆ ನಡೆಯಲಿದೆ. ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ.
ನವೆಂಬರ್ 3 ರಂದು ಮತದಾನ ನಡೆಯಲಿದ್ದು, ನವೆಂಬರ್ 6 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಮತದಾನ ಮತ್ತು ಫಲಿತಾಂಶಕ್ಕೆ ಸರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

1502 ಸೂಕ್ಷ್ಮ ಮತಗಟ್ಟೆಗಳು
6,453 ಮತಗಟ್ಟೆಗಳಲ್ಲಿ 1502 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಚುನಾವಣೆ ಕಾರ್ಯಕ್ಕೆ 49 ವಿಡಿಯೋಗ್ರಾಫರ್ಗಳನ್ನು ನೇಮಿಸಲಾಗಿದೆ. 1312 ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ.

57 ಪಿಂಕ್ ಮತಗಟ್ಟೆ
ಐದು ಕ್ಷೇತ್ರಗಳಲ್ಲಿ ಮತದಾನಕ್ಕಾಗಿ 6,453 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 57 ಪಿಂಕ್ ಮತಗಟ್ಟೆ (ಮಹಿಳಾ ಮತಗಟ್ಟೆ)ಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಗಳು ಮಾತ್ರವೇ ಇರಲಿದ್ದಾರೆ.

60,508 ಲೀಟರ್ ಮದ್ಯ ವಶ
ಚುನಾವಣೆ ಇರುವ ಕ್ಷೇತ್ರ ವ್ಯಾಪ್ತಿಯಲ್ಲಿ 60,508 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. 1.4 ಕೆ.ಜೆ.ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. 54.80 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ. 392 ಗೋಡೆ ಬರಹ, 2156 ಪೋಸ್ಟರ್ಸ್, 2283 ಬ್ಯಾನರ್ ತೆರವು ಮಾಡಲಾಗಿದೆ.

ಒಟ್ಟು 54,54,275 ಮತದಾರು
27,21,085 ಪುರುಷ, 27,30,949 ಮಹಿಳೆ, 462 ಇತರೆ ಒಟ್ಟು 54,54,275 ಮತದಾರರಿದ್ದಾರೆ. ಒಟ್ಟು 31 ಅಭ್ಯರ್ಥಿಗಳು ಕಣದಲ್ಲಿದ್ದು 29 ಪುರುಷ ಮತ್ತು 2 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.












Click it and Unblock the Notifications