ಸುಗಮ ಉದ್ದಿಮೆ ನೀತಿ: ರಾಜ್ಯಕ್ಕೆ 13ನೇ ಸ್ಥಾನ
ಬೆಂಗಳೂರು, ನವೆಂಬರ್, 3: ಸುಗಮ ಉದ್ದಿಮೆ ನೀತಿ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 13ನೇ ಸ್ಥಾನವನ್ನ ನೀಡಿದೆ. ಮತ್ತು ಬಂಡವಾಳ ಆಕರ್ಷಣೆಯಲ್ಲಿ ಹಿಂದೆ ಬಿದ್ದಿರುವ ಆಂಧ್ರಪ್ರದೇಶಕ್ಕೆ ಪ್ರಥಮ ಸ್ಥಾನ ನೀಡಲಾಗಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯ ವಿರುದ್ಧ ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಂಡವಾಲ ಹೂಡಿಕೆಯಲ್ಲಿ ಹಿಂದೆ ಬಿದ್ದಿರುವ ರಾಜ್ಯಗಳಿಗೆ ಉತ್ತಮ ಅಂಕವನ್ನು ನೀಡಲಾಗಿದೆ ಸರ್ಕಾರದ ಮಾನದಂಡವೇ ಅರ್ಥವಾಗುತ್ತಿಲ್ಲ ಎಂದು ಆಕ್ಷೇಪಿಸಿದರು.

ಈ ಕುರಿತು ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಹಿಂದೆ ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಸಚಿವಾಲಯ ಜುಲೈನಲ್ಲಿ ಪ್ರಕಟಿಸಿದ್ದ ವರದಿಯು 2016ರ ಜನವರಿ-ಜುಲೈ ಅವಧಿಯಲ್ಲಿ ರೂ.1.09ಲಕ್ಷಕೋಟಿ ಮೊತ್ತದ ಬಂಡವಾಳ ಆಕರ್ಷಿಸಿ ಮೊದಲ ಸ್ಥಾನದಲ್ಲಿದೆ ಎಂದು ಸೂಚಿಸಿತ್ತು.
ಸುಗಮ ವ್ಯಾಪಾರ ನೀತಿಯನ್ನು ಸಮರ್ಪಕವಾವಿ ಅನುದಾನ ಮಾಡದೇ ಇದ್ದರೆ ಬಂಡವಾಳ ಹೇಗೆ ಹರಿದು ಬರುತ್ತಿತ್ತು. ಉದ್ದಿಮೆ ನೀತಿ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರ ಅನುಸರಿಸಿರುವ ಮಾನದಂಡವೇ ಸರಿಯಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
2015ರಲ್ಲಿ ರಾಜ್ಯ ಶೇ.48.50 ಅಂಕ ಪಡೆದು 9ನೇ ಸ್ಥಾನದಲ್ಲಿತ್ತು. ಈ ವರ್ಷ 88.39 ಅಂಕ ಪಡೆದರೂ 13ನೇ ಸ್ಥಾನ ನೀಡಲಾಗಿದೆ ಎಂದು ದೇಶಪಾಂಡೆ ಅವರು ತಿಳಿಸಿದರು.
ಈ ಪಟ್ಟಿಯಿಂದ ರಾಜ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ "ಮುಂದೆಯೂ ಬಂಡವಾಳ ಆಕರ್ಷಣೆಯಲ್ಲಿ ರಾಜ್ಯವೇ ಪ್ರಥಮ ಸ್ಥಾನದಲ್ಲಿ ನಿಲ್ಲಲಿದೆ" ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಂಡವಾಳ ಆಕರ್ಷಣೆ, ಒಪ್ಪಂದ, ಹೂಡಿಕೆ, ಹೂಡಿಕೆದಾರರಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ನೀಡಿದ ಆದ್ಯತೆ ಇವೆಲ್ಲವನ್ನೂ ಮಾನದಂಡವಾಗಿ ಪರಿಗಣಿಸಿ ಕರ್ನಾಟಕಕ್ಕೆ ಮೊದಲ ಸ್ಥಾನ ನೀಡಬೇಕಿತ್ತು ಎಂದು ಅವರು ಪ್ರತಿಪಾದಿಸಿದರು.
ಉದ್ದಿಮೆ ವಹಿವಾಟು ಸುಧಾರಣೆ ಕ್ರಿಯಾ ಯೋಜನೆಯಲ್ಲಿ 340 ಅಂಶಗಳನ್ನು ಪರಿಗಣಿಸಲಾಗಿತ್ತು. ಈ ಪೈಕಿ 301 ಸಮರ್ಪಕವಾಗಿದ್ದು, ಕೇವಲ 39 ಅಂಶಗಳಲ್ಲಿ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಿಗೆ ಕೇಂದ್ರ ಸಮ್ಮತಿಸಿಲ್ಲ.
ಅಷ್ಟೇ ಅಲ್ಲದೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಎಂಟು ವಿವಿಧ ಹಂತಗಳಲ್ಲಿ ಒಪ್ಪಿಗೆ ಪಡೆಯಬೇಕಿದೆ ಈ ಕಾರಣಗಳಿಂದ ರಾಜ್ಯಕ್ಕೆ ಉತ್ತಮ ಅಂಕ ದೊರೆತಿಲ್ಲ ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications