ಕರ್ನಾಟಕ ಬಜೆಟ್ 2021: ಯಾವ ಕ್ಷೇತ್ರಕ್ಕೆ ಯಾವ ಕೊಡುಗೆ? ಮುಖ್ಯಾಂಶಗಳು
ಬೆಂಗಳೂರು, ಮಾರ್ಚ್ 8: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 2021-22ನೇ ಸಾಲಿನ 2.46 ಲಕ್ಷ ಕೋಟಿ ರೂ ಮೊತ್ತದ ರಾಜ್ಯ ಬಜೆಟ್ ಅನ್ನು ಸೋಮವಾರ ಮಂಡಿಸಿದರು. ಈ ಬಾರಿ ಈಗಾಗಲೇ ಕೋವಿಡ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರ ಮೇಲೆ ಯಾವುದೇ ಹೆಚ್ಚಿನ ತೆರಿಗೆ ವಿಧಿಸುವುದಿಲ್ಲ. ಜತೆಗೆ ಪೆಟ್ರೋಲ್ ಹಾಗೂ ಡೀಸಲ್ ಮೇಲಿನ ಅಬಕಾರಿ ಸುಂಕದಲ್ಲಿ ಬದಲಾವಣೆ ಇಲ್ಲ ಎನ್ನುವ ಮೂಲಕ ಕೊಂಚ ನಿರಾಳತೆ ನೀಡಿದ್ದಾರೆ.
2,46,207 ಕೋಟಿ ರೂ ಒಟ್ಟು ವೆಚ್ಚದ ಬಜೆಟ್ ಇದಾಗಿದೆ. 1.87 ಲಕ್ಷ ಕೋಟಿ ರಾಜಸ್ವ ವೆಚ್ಚ, 44,237 ಕೋಟಿ ರೂ ಬಂಡವಾಳ ವೆಚ್ಚ ಹಾಗೂ 14,565 ಕೋಟಿ ರೂ ಸಾಲ ಮರುಪಾವತಿಯನ್ನು ಇದು ಒಳಗೊಂಡಿದೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಬಜೆಟ್ ಮಂಡಿಸಿರುವ ಯಡಿಯೂರಪ್ಪ, ಮಹಿಳೆಯರಿಗಾಗಿ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ಕೃಷಿ, ಕೈಗಾರಿಕೆ, ಆರೋಗ್ಯ, ಶಿಕ್ಷಣ, ಸಾರಿಗೆ, ಉದ್ಯಮ, ಧಾರ್ಮಿಕ, ಮೀನುಗಾರಿಕೆ, ವಿಜ್ಞಾನ ಸೇರಿದಂತೆ ಬಹುತೇಕ ಕ್ಷೇತ್ರಗಳಿಗೆ ಅನುದಾನ ಮತ್ತು ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಕರ್ನಾಟಕ ಬಜೆಟ್ 2021: ಆರೋಗ್ಯ ಕ್ಷೇತ್ರಕ್ಕೆ ಯಡಿಯೂರಪ್ಪ ಘೋಷಿಸಿದ ಕೊಡುಗೆಗಳು
ವಿವಿಧ ಜಿಲ್ಲೆಗಳಿಗೆ ಹೆಚ್ಚಿನ ಕೊಡುಗೆಗಳು ಲಭ್ಯವಾಗಿವೆ. ಮುಖ್ಯವಾಗಿ ಮಠ ಮಾನ್ಯಗಳಿಗೆ ಮತ್ತೊಮ್ಮೆ ಅನುದಾನಗಳನ್ನು ಘೋಷಿಸಲಾಗಿದೆ. ಈ ಬಾರಿಯ ಬಜೆಟ್ನಲ್ಲಿನ ಮುಖ್ಯಾಂಶಗಳು ಏನೇನು? ಇಲ್ಲಿವೆ ವಿವರ.
ಮಹಿಳೆಯರಿಗೆ ವಿಶೇಷ ಕೊಡುಗೆ
* ಮಹಿಳಾ ಸ್ವಸಹಾಯ ಸಂಘಗಳು, ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಇ-ಮಾರುಕಟ್ಟೆ ಸೌಲಭ್ಯ. ಬೆಂಗಳೂರಿನಲ್ಲಿ ಗಾರ್ಮೆಂಟ್ ಉದ್ಯಮದ ಮಹಿಳಾ ಕಾರ್ಮಿಕರಿಗೆ 'ವನಿತಾ ಸಂಗಾತಿ' ಯೋಜನೆಯಲ್ಲಿ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್ ಪಾಸ್. ಬೆಂಗಳೂರಿನಲ್ಲಿ ಸೇಫ್ ಸಿಟಿ ಯೋಜನೆಯಡಿ 7,500 ಸಿಸಿಟಿವಿ ಕ್ಯಾಮೆರಾ ಅಳವಡಿಕೆ. ಮಹಿಳಾ ಉದ್ಯಮಿಗಳಿಗೆ ಶೇ 4ರ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ. ಮಹಿಳೆಯರ ಸಣ್ಣ ಉದ್ಯಮಗಳಿಗೆ ನೆರವು. ಸ್ವಸಹಾಯ ಗುಂಪುಗಳ ನೀತಿ-ಎಲ್ಲ ಸ್ವಸಹಾಯ ಗುಂಪುಗಳು ಜೀವನೋಪಾಯ ಅಭಿಯಾನದ ವ್ಯಾಪ್ತಿಗೆ. ಮಹಿಳಾ ಉದ್ದೇಶಿತ ಯೋಜನೆಗಳಿಗೆ 37,188 ಕೋಟಿ ರೂ ಅನುದಾನ.
ಕರ್ನಾಟಕ ಬಜೆಟ್ 2021: ಶಿಕ್ಷಣ ಕ್ಷೇತ್ರಕ್ಕೆ ಯಡಿಯೂರಪ್ಪ ಘೋಷಿಸಿದ್ದೇನು?
ಆಹಾರ ಪಾರ್ಕ್ ಸ್ಥಾಪನೆ
* ಸಾವಯವ ಕೃಷಿ ಉತ್ತೇಜನಕ್ಕೆ 500 ಕೋಟಿ ವೆಚ್ಚದ ಯೋಜನೆ. ವಿಜಯಪುರ ಜಿಲ್ಲೆ ಇಟ್ಟಂಗಿಹಾಳದಲ್ಲಿ ಆಹಾರ ಪಾರ್ಕ್ ಸ್ಥಾಪನೆ. ಕೃಷಿ ವಿವಿಗಳಲ್ಲಿ ರೈತರ ಮಕ್ಕಳಿಗೆ ಶೇ 50ರವರೆಗೆ ಮೀಸಲಾತಿ ಹೆಚ್ಚಳ. 75 ಕೋಟಿ ವೆಚ್ಚದಲ್ಲಿ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ. ಕೊಪ್ಪಳ ಜಿಲ್ಲೆಯ ಸಿರಿವಾರ ಗ್ರಾಮದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಅಭಿವೃದ್ಧಿ. ಅಡಿಕೆ ಹಳದಿ ಎಲೆ ರೋಗದ ಕುರಿತ ಸಂಶೋಧನೆ ಮತ್ತು ಪರ್ಯಾಯ ಬೆಳೆ ಪ್ರೊತ್ಸಾಹಕ್ಕೆ 25 ಕೋಟಿ ರೂ. ಹೊಸ ಹೈಬ್ರಿಡ್ ನೀತಿ ಜಾರಿ.
ಗೋ ಅಭಿವೃದ್ಧಿ ಕೊಡುಗೆ
* 150 ಕೋಟಿ ರೂ ವೆಚ್ಚದಲ್ಲಿ ರೇಷ್ಮೆ ಭವನ ನಿರ್ಮಾಣ. ರಾಮನಗರದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ. ಪ್ರತಿ ಜಿಲ್ಲೆಯಲ್ಲಿಯೂ ಗೋಶಾಲೆ. ದೇಶಿ ಪಶುಸಂಪತ್ತಿನ ಶಾಶ್ವತ ಪ್ರದರ್ಶನ, ಮಾಹಿತಿ ಮತ್ತು ತರಬೇತಿಗೆ ಹೆಸರಘಟ್ಟದಲ್ಲಿ ಥೀಮ್ ಪಾರ್ಕ್ ಸ್ಥಾಪನೆ. ನಂದಿದುರ್ಗ ಮೇಕೆ ತಳಿ ಅಭಿವೃದ್ಧಿಗೆ ಅನುದಾನ. ಹೊರ ರಾಜ್ಯದ ದೇಶಿ ತಳಿಗಳನ್ನು ಪರಿಚಯಿಸಲು ಸಮಗ್ರ ಗೋಸಂಕುಲ ಸಮೃದ್ಧಿ ಯೋಜನೆ. ಪಶುವೈದ್ಯಕೀಯ ವಿಜ್ಞಾನದಲ್ಲಿ ಆಯುರ್ವೇದ ಔಷಧಿಗಳ ಅಳವಡಿಕೆ ಉತ್ತೇಜನಕ್ಕೆ ಶಿವಮೊಗ್ಗದ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರ.
ಮೀನುಗಾರಿಕೆಗೆ ಕೊಡುಗೆ
* ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಕಾರ್ಯಕ್ರಮದ ಅನುಷ್ಠಾನಕ್ಕೆ 62 ಕೋಟಿ ರೂ. ರಾಜ್ಯಾದ್ಯಂತ ಮೀನು ಮಾರಾಟ ಘಟಕ ಮತ್ತು ಮತ್ಸ್ಯದರ್ಶಿನಿ ಸ್ಥಾಪನೆ. ಮೀನು ಉತ್ಪನ್ನಗಳ ಸಂಸ್ಕರಣೆಗೆ ಆಧುನಿಕ ಸಂಸ್ಕರಣಾ ಮತ್ತು ಮೌಲ್ಯವರ್ಧನಾ ಕೇಂದ್ರ ಸ್ಥಾಪನೆ.
ಬಜೆಟ್; ತವರು ಜಿಲ್ಲೆ ಶಿವಮೊಗ್ಗಕ್ಕೆ ಯಡಿಯೂರಪ್ಪ ಕೊಡುಗೆಗಳು
ಕೃಷಿ ಮಾರುಕಟ್ಟೆಗಳು
* ಬೈಯಪ್ಪನಹಳ್ಳಿಯಲ್ಲಿ ಹೂವಿನ ಮಾರುಕಟ್ಟೆ, ಸಿಂಗೇನ ಅಗ್ರಹಾರ ಸಮೀಪದ ಗುಳಿಮಂಗಳ ಗ್ರಾಮದಲ್ಲಿ ತರಕಾರಿ ಮಾರುಕಟ್ಟೆ, ಬಳ್ಳಾರಿಯ ಆಲದಹಳ್ಳಿ ಗ್ರಾಮದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ, ಚಾಮರಾಜನಗರದಲ್ಲಿ ಅರಿಶಿನ ಮಾರುಕಟ್ಟೆ ಅಭಿವೃದ್ಧಿ. ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆಧುನಿಕ ಗುಣವಿಶ್ಲೇಷಣಾ ಘಟಕ ಸ್ಥಾಪನೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅನುದಾನ, ಅಭಿವೃದ್ಧಿ.
ಅಣೆಕಟ್ಟುಗಳ ಪುನಶ್ಚೇತನ
* ಕೃಷ್ಣಾ ಮೇಲ್ದಂಡೆ ಯೋಜನೆ, ಮಹಾದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳ ತ್ವರಿತ ಅನುಷ್ಠಾನ. ಕೊಪ್ಪಳದ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ. ರಾಜ್ಯದ 58 ಅಣೆಕಟ್ಟುಗಳ ಪುನಶ್ಚೇತನ ಮತ್ತು ಅಭಿವೃದ್ಧಿಗೆ ವಿಶ್ವ ಬ್ಯಾಂಕ್ ನೆರವಿನ ಡ್ರಿಪ್ ಯೋಜನೆಯಡಿ ಪ್ರಸ್ತಾವನೆ. 234 ಕೆರೆಗಳಿಗೆ ವೃಷಭಾವತಿ ಕಣಿವೆಯಿಂದ ಸಂಸ್ಕರಿಸಿದ ನೀರು ತುಂಬುವ ಎರಡನೆಯ ಹಂತಕ್ಕೆ 500 ಕೋಟಿ ವೆಚ್ಚ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನದಿಗಳಲ್ಲಿ ಪ್ರವಾಹದಿಂದ ಉಪ್ಪುನೀರು ಹಿಮ್ಮುಖವಾಗಿ ನುಗ್ಗುವುದನ್ನು ತಡೆಯಲು 300 ಕೋಟಿ ವೆಚ್ಚದಲ್ಲಿ ಖಾರ್ಲ್ಯಾಂಡ್ ಯೋಜನೆ. ಕೃಷಿ ಮತ್ತು ಪೂರಕ ವಲಯಗಳಿಗೆ ಒಟ್ಟು 31,028 ಕೋಟಿ ರೂ. ಅನುದಾನ.
ಶಾಲಾ ಸೌಕರ್ಯ ಅಭಿವೃದ್ಧಿ
* 50 ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂ. ಶಾಲಾ ಶೌಚಾಲಯಗಳ ಉನ್ನತೀಕರಣ. ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ಮೂಲಸೌಕರ್ಯಕ್ಕೆ 150 ಕೋಟಿ. ಎಲ್ಲ ಸರ್ಕಾರಿ ಪ್ರೌಢಶಾಲೆಗಳಲ್ಲಿಯೂ ಕಂಪ್ಯೂಟರ್ ಲ್ಯಾಬ್ ಸೌಲಭ್ಯ. ಜ್ಞಾನಪೀಠ ಪುರಸ್ಕೃತರು ಕಲಿತ ಶಾಲೆಗಳ ಅಭಿವೃದ್ಧಿ. ಪ್ರಥಮ ದರ್ಜೆ, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಡಿಜಿಟಲ್ ಕಲಿಕೆಗೆ ಅನುಕೂಲವಾಗುವಂತೆ ಸ್ಮಾರ್ಟ್ ರೂಂ. ಕೇಂದ್ರದ ವಿಭಾಗಗಳಲ್ಲಿ ಕನ್ನಡಿಗರ ಸೇರ್ಪಡೆ ಉತ್ತೇಜಿಸಲು 'ಸಾಮರ್ಥ್ಯ-ಸಾರಥ್ಯ' ಕಾರ್ಯಕ್ರಮ.
ಎದೆಹಾಲಿನ ಬ್ಯಾಂಕ್
* 19 ಜಿಲ್ಲಾ ಆಸ್ಪತ್ರೆಗಳಲ್ಲಿ 25 ಹಾಗೂ 100 ತಾಲ್ಲೂಕು ಆಸ್ಪತ್ರೆಗಳಲ್ಲಿ 6 ಹಾಸಿಗೆ ಸಾಮರ್ಥ್ಯದ ಐಸಿಯು ಘಟಕ ಸ್ಥಾಪನೆ. 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ. ನಾಲ್ಕು ಪ್ರಾದೇಶಿಕ ಆಹಾರ ಸುರಕ್ಷತಾ ಪ್ರಯೋಗಾಲಯ ಸ್ಥಾಪನೆ. ನಾಲ್ಕು ವಿಭಾಗಗಳಲ್ಲಿ 'ತಾಯಂದಿರ ಎದೆಹಾಲಿನ ಬ್ಯಾಂಕ್' ಸ್ಥಾಪನೆ. ಶಿವಮೊಗ್ಗದ ಆಯುರ್ವೇದ ಕಾಲೇಜು ಆಯುಷ್ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೆ, ತಾಯಿ-ಮಗುವಿನ ಅಪೌಷ್ಟಿಕತೆ ನಿವಾರಣೆಗೆ 'ಪೋಷಣೆ ಮತ್ತು ಜೀವನೋಪಾಯ ಕಾರ್ಯಕ್ರಮ.
ಪಾದರಕ್ಷೆ ಕ್ಲಸ್ಟರ್
* 50 ಹೊಸ ಮೆಟ್ರಿಕ್ ನಂತರದ ಹಾಸ್ಟೆಲ್ಗಳ ಸ್ಥಾಪನೆ. ಮಕ್ಕಳ ಯೋಜನೆಗಳಿಗಾಗಿ 37,527 ಕೋಟಿ ರೂ. ನಿಪ್ಪಾಣಿಯಲ್ಲಿ ಕೊಲ್ಹಾಪುರಿ ಪಾದರಕ್ಷೆ ಕ್ಲಸ್ಟರ್, ಚಿತ್ರದುರ್ಗದಲ್ಲಿ ಕೇಂದ್ರ ಪಾದರಕ್ಷೆ ತರಬೇತಿ ಸಂಸ್ಥೆ ವಿಸ್ತರಣಾ ಕೇಂದ್ರ ಪ್ರಾರಂಭ. ಪರಿಶಿಷ್ಟ ಪಂಗಡದ ಆಶ್ರಮ ಶಾಲೆಗಳಿಗೆ 'ವಾಲ್ಮೀಕಿ ಆಶ್ರಮ ಶಾಲೆ' ಎಂದು ಮರುನಾಮಕರಣ. ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳ ಪುನರ್ವಸತಿಗೆ ಸಂಘಗಳ ರಚನೆ.
ಅಭಿವೃದ್ಧಿ ನಿಗಮಗಳಿಗೆ ಕೊಡುಗೆ
* ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಅನುದಾನ ನಿಗದಿ. ಎಸ್ಸಿ, ಎಸ್ಟಿ ಮತ್ತು ಒಬಿಸಿ ಅಭಿವೃದ್ಧಿ ನಿಗಮಗಳಿಗೆ 500ಕೋಟಿ ಅನುದಾನ. ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು 500 ಕೋಟಿ ರೂ ವೆಚ್ಚದಲ್ಲಿ ಕಾರ್ಯಕ್ರಮಗಳ ಅನುಷ್ಠಾನ. ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಅಲ್ಪಸಮಖ್ಯಾತರ ಏಳಿಗೆಗೆ 1500 ಕೋಟಿ ರೂ. ಕ್ರೈಸ್ತ ಸಮುದಾಯ ಕಾರ್ಯಕ್ರಮಗಳಿಗೆ 200 ಕೋಟಿ ರೂ.
ಮಲೆನಾಡು, ಕರಾವಳಿಯಲ್ಲಿ ಕಾಲುಸಂಕ
* ಮನೆ ಮನೆಗೆ ಗಂಗೆ ಯೋಜನೆಯಡಿ 22 ಲಕ್ಷ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸಂಪರ್ಕ. ಪ್ರತಿ ತಾಲ್ಲೂಕಿನಲ್ಲೂ ಬ್ರೈಲ್ ಮತ್ತು ಶ್ರವ್ಯ ಪುಸ್ತಕಗಳನ್ನು ಒಳಗೊಂಡ ಬೀಕನ್ ಗ್ರಂಥಾಲಯ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1500 ಕೋಟಿ ರೂ. ಹಿಂದುಳಿದ ತಾಲ್ಲೂಕುಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ 3,000 ಕೋಟಿ ರೂ. ಅನುದಾನ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕಾಲುಸಂಕ ನಿರ್ಮಿಸುವ 'ಗ್ರಾಮಬಂಧ ಸೇತುವೆ' ಯೋಜನೆ.
ಹೊಸ ರೈಲು ಮಾರ್ಗ
* ಬೆಳಗಾವಿಯಲ್ಲಿ ವರ್ತುಲ ರಸ್ತೆ ನಿರ್ಮಾಣ. ರೈಲ್ವೆ ಮಂತ್ರಾಲಯದೊಂದಿಗೆ ವೆಚ್ಚ ಹಂಚಿಕೆ ಆಧಾರದಲ್ಲಿ ಏಳು ಹೊಸ ಯೋಜನೆ. ರಾಜ್ಯಕ್ಕೆ 1173 ಕಿಮೀ ರೈಲು ಮಾರ್ಗ ಸೇರ್ಪಡೆ. ಧಾರವಾಡ-ಕಿತ್ತೂರು-ಬೆಳಗಾವಿ ನಡುವೆ ರೈಲು ಮಾರ್ಗಕ್ಕೆ ಅನುದಾನ.
ಮಂಗಳೂರಲ್ಲಿ ಪ್ಲಾಸ್ಟಿಕ್ ಪಾರ್ಕ್
* ಪೀಣ್ಯ ಕೈಗಾರಿಕಾ ಟೌನ್ಶಿಪ್ ಸ್ಥಾಪನೆ. ಯಾದಗಿರಿ ಜಿಲ್ಲೆಯ ಕಡೆಚೂರಿನಲ್ಲಿ 'ಬಲ್ಕ್ ಡ್ರಗ್ ಪಾರ್ಕ್', ಮಂಗಳೂರಿನ ಗಂಜಿಮಠದಲ್ಲಿ 'ಪ್ಲಾಸ್ಟಿಕ್ ಪಾರ್ಕ್' ಸ್ಥಾಪನೆ. ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್ ಸ್ಥಾಪನೆ. ಸ್ಮಾರ್ಟ್ ಹ್ಯಾಂಡ್ಲೂಮ್ ಡಿಸೈನ್ ಸ್ಟುಡಿಯೋ ಸ್ಥಾಪನೆ.
ವಿದ್ಯುತ್ ವಾಹನ ಚಾರ್ಜಿಂಗ್
* ರಾಜ್ಯದಲ್ಲಿ 1000 ವಿದ್ಯುತ್ ಚಾಲಿತ ವಾಹನ ಚಾರ್ಜಿಂಗ್ ಕೇಂದ್ರ ಸ್ಥಾಪನೆ. ಪಂಪಡ್ ಹೈಡ್ರೋ ಸ್ಟೋರೇಜ್ ಸ್ಥಾವರ ಯೋಜನೆ. ಫಿರೋಜಾಬಾದ್ನಲ್ಲಿ ಸೌರಶಕ್ತಿ ಪಾರ್ಕ್. ಡಾ. ಎಚ್ ನರಸಿಂಹಯ್ಯ ಗೌರವಾರ್ಥ ಗೌರಿಬಿದನೂರಿನ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರನಿರ್ಮಾಣ. ಶಿರಸಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ.
ಬೆಂಗಳೂರಿಗೆ ಪ್ರಮುಖ ಕೊಡುಗೆ
* ಬೆಂಗಳೂರಿನ ಮೂರು ಕಡೆ ವೃಕ್ಷೋದ್ಯಾನ. ಮಲ್ಲೇಶ್ವರದಲ್ಲಿ ಎಕ್ಸ್ಪೀರಿಯನ್ಸ್ ಬೆಂಗಳೂರು ಕೇಂದ್ರ ಸ್ಥಾಪನೆ. ಹೊರ ವರ್ತುಲ ರಸ್ತೆ-ಏರ್ಪೋರ್ಟ್ ಮೆಟ್ರೋ ಹಂತಗಳ ಅನುಷ್ಠಾನ. ಕೋರಮಂಗಲ ಕಣಿವೆ ರಾಜಕಾಲುವೆ ಅಭಿವೃದ್ಧಿ ಮತ್ತು ನಿರ್ವಹಣೆ ಯೋಜನೆ. ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪ ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕ್. ಒಂದು ರಾಷ್ಟ್ರ ಒಂದು ಕಾರ್ಡ್ ವ್ಯವಸ್ಥೆಯಡಿ ಮೆಟ್ರೋ, ಬಿಎಂಟಿಸಿ ಬಸ್ಗಳಲ್ಲಿ ಕಾರ್ಡ್ ಬಳಕೆ.
ಪರ್ವ ನಾಟಕ ಪ್ರದರ್ಶನ
* ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ. ಬಸವಕಲ್ಯಾಣದಲ್ಲಿ 500 ಕೋಟಿ ವೆಚ್ಚದ ಹೊಸ ಅನುಭವ ಮಂಟಪ. ಇಂಗಳೇಶ್ವರ ಗ್ರಾಮದ ಅಭಿವೃದ್ಧಿಗೆ 5 ಕೋಟಿ ರೂ. ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರಕ್ಕೆ ಸಹಾಯಾನುದಾನ. ಅಯೋಧ್ಯೆಯಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ 10 ಕೋಟಿ. ರಂಗಾಯಣ ಸಂಸ್ಥೆ ಮೂಲಕ ಡಾ. ಎಸ್ಎಲ್ ಭೈರಪ್ಪ ಅವರ 'ಪರ್ವ' ನಾಟಕಗಳ ಪ್ರದರ್ಶನ. ಆದಿಕವಿ ಪಂಪನಿಂದ ಮುದ್ದಣನ ಕಾಲಘಟ್ಟದ ಎಲ್ಲ ಕೃತಿಗಳ ಡಿಜಿಟಲೀಕರಣ.
ಮನೆ ಬಾಗಿಲಿಗೇ ಮಾಸಾಶನ
* ವಂಚನೆ ತಡೆಯಲು ಬ್ಲಾಕ್ಚೈನ್ ತಂತ್ರಜ್ಞಾನದ ಮೂಲಕ ಆಸ್ತಿ ನೋಂದಣಿ ಪ್ರಾಯೋಗಿಕ ಯೋಜನೆ. ಸೈಬರ್ ಸುರಕ್ಷತೆಗೆ ಭದ್ರತಾ ಕಾರ್ಯಾಚರಣೆ ಕೇಂದ್ರ. ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಹಕ್ಕು ದಾಖಲೆ ವಿತರಿಸುವ ಸ್ವಾಮಿತ್ವ ಯೋಜನೆ ಅನುಷ್ಠಾನ. 'ಮನೆ ಬಾಗಿಲಿಗೇ ಮಾಸಾಶನ' ಅಭಿಯಾನ.
ಸ್ಮೃತಿವನಗಳ ನಿರ್ಮಾಣ
* ಉಡುಪಿಯ ಕಡಲತೀರಗಳನ್ನು ಅಂತಾರಾಷ್ಟ್ರೀಯ ಮೇಲ್ದರ್ಜೆಗೇರಿಸಲು 10 ಕೋಟಿ ರೂ. ಶ್ರೀ ಡಾ. ಶಿವಕುಮಾರ್ ಸ್ವಾಮೀಜಿ ಮತ್ತು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳ ಗೌರವಾರ್ಥ ಸ್ಮೃತಿವನ ನಿರ್ಮಾಣ. 'ಅರಣ್ಯ ಇ- ಪರಿಹಾರ ಯೋನೆ' ಜಾರಿ. ಗೋಪಿನಾಥಂ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ. 100 ಹೊಸ ಪೊಲೀಸ್ ಠಾಣೆ ನಿರ್ಮಾಣ. ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಗಳ ಪ್ರಾದೇಶಿಕ ಕೇಂದ್ರ. 52 ಹೊಸ ಬಸ್ ನಿಲ್ದಾಣ ಮತ್ತು 16 ಬಸ್ ಘಟಕಗಳ ನಿರ್ಮಾಣ.
Recommended Video