ಬೈಕ್ ಮುಖಾಮುಖಿ ಡಿಕ್ಕಿ: ಬಿಎಸ್ಎಫ್ ಉದ್ಯೋಗಿ & ಯೂಟ್ಯೂಬರ್ ಗಣಿ ಸಾವು
ಬೆಂಗಳೂರು, ಅಕ್ಟೋಬರ್ 29: ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ತಡರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಬಿಎಸ್ಎಫ್ ಉದ್ಯೋಗಿ ಸುಧಾಕರ್ ಮತ್ತು ಯೂಟ್ಯೂಬರ್ ಗಣಿ ಸಾವನ್ನಪ್ಪಿದ್ದಾರೆ.
ಬಿಎಸ್ಎಫ್ ಉದ್ಯೋಗಿ ಸುಧಾಕರ್ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ವೇಗವಾಗಿ ಕಚೇರಿಯ ಕಾಂಪೌಂಡ್ನಿಂದ ಹೊರಗೆ ಬರುತ್ತಿದ್ದ ವೇಳೆ ಎದುರಿಗೆ ಬರುತ್ತಿದ್ದ ಯೂಟ್ಯೂಬರ್ ಗಣಿ ಬೈಕ್ ಡಿಕ್ಕಿಯಾಗಿದೆ. ಅಪಘಾತದ ಭೀಕರತೆಗೆ ಸುಧಾಕರ್ ಸ್ಥಳದಲ್ಲೇ ಮೃಪಟ್ಟಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿದ್ದ ಗಣಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ಸುಧಾಕರ್ ನಿವೃತ್ತ ಯೋಧ ನಾಗಪ್ಪನ್ ಅವರ ಪುತ್ರರಾಗಿದ್ದು, ಬಿಎಸ್ಎಫ್ ಕಚೇರಿಯಲ್ಲಿ ಹೆಡ್ಕುಕ್ ಆಗಿ ಕಳೆದ 22 ವರ್ಷಗಳಿಂದ ಕರ್ತವ್ಯ ನಿರ್ವಹಿಸುತಿದ್ದರು ಎನ್ನಲಾಗಿದೆ.
ಸುಧಾಕರ್ ಮೂಲತಃ ತಮಿಳುನಾಡಿನ ವೆಲ್ಲೂರಿನವರಾಗಿದ್ದು, ಬೆಂಗಳೂರಿನ ವಿನಾಯಕ ನಗರದಲ್ಲಿ ವಾಸವಿದ್ದರು. ಸುಧಾಕರ್ ಅವರ ಪತ್ನಿ, ಮಕ್ಕಳು ಹಾಗೂ ತಂದೆ ವೆಲ್ಲೂರಿನಲ್ಲಿ ವಾಸವಾಗಿರು ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಇನ್ನು ಪ್ರಕರಣ ಸಂಬಂಧ ಗಣಿ ಅಲಿಯಾಸ್ ಗಿರೀಶ್ ವಿರುದ್ಧ ಯಲಹಂಕ ಸಂಚಾರಿ ಠಾಣೆಯಲ್ಲಿ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಎಫ್ಐಆರ್ ದಾಖಲಾಗಿದೆ. ಸದ್ಯ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕೆರೆಗೆ ಬಿದ್ದ ಕಾರು: ಒಂದೇ ಕುಟುಂಬದ ಮೂವರು ಸಾವು
ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದು, ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಶಿರಾ ತಾಲೂಕಿನ ಬುಕ್ಕಾಪಟ್ಟಣದ ರಾಮಲಿಂಗಾಪುರ ಬಳಿ ನಡೆದಿದೆ. ಯಮುನಾ, ದೊಡ್ಡಣ್ಣ, ಸಣ್ಣಮ್ಮ ಮೃತದುರ್ದೈವಿಗಳು ಎಂದು ಗುರುತಿಸಲಾಗಿದೆ.
ಮೃತರ ವೀರಾಪುರ ಗ್ರಾಮದವರಾಗಿದ್ದು, ಇಂದು ಮುಂಜಾನೆ ಮಾರುತಿ ಆಲ್ಟೋ ಕಾರಿನಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಬುಕ್ಕಾಪಟ್ಟಣದ ರಾಮಲಿಂಗಾಪುರ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಶಿರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications