'ಪುರುಷ' ಶಕ್ತಿ ಕೊಲ್ಲುವ ಬ್ರೂಸೆಲ್ಲೋಸಿಸ್ ಕೋಲಾರಕ್ಕೆ ಬಂತು
ಕೋಲಾರ, ಸೆಪ್ಟೆಂಬರ್, 05: ಡೆಂಗ್ಯೂ, ಚಿಕೂನ್ ಗುನ್ಯ, ಇಲಿ ಜ್ವರದ ಸಾಲಿಗೆ ಮತ್ತೊಂದು ಸೇರ್ಪಡೆ ಬ್ರೂಸೆಲ್ಲೋಸಿಸ್. ಕರ್ನಾಟಕದ ಕೋಲಾರಕ್ಕೂ ಕಾಯಿಲೆ ಕಾಲಿಟ್ಟಿದೆ. ಹಸುಗಳಿಂದ ಮನುಷ್ಯನಿಗೆ ಹರಡುವ ಕಾಯಿಲೆ ಪುರುಷನ ಸಂತಾನ ಶಕ್ತಿಯನ್ನೇ ಬಲಿ ಪಡೆಯಬಹುದು.
ಕೋಲಾರ ತಾಲೂಕಿನ ಜಂಗಾನಹಳ್ಳಿಯಲ್ಲಿರುವ ಶಾಸಕ ವರ್ತೂರು ಪ್ರಕಾಶ್ ಅವರ ಫಾರ್ಮ್ ನಲ್ಲಿರುವ ಸುಮಾರು 998 ಹಸುಗಳ ಪೈಕಿ 49 ಹಸುಗಳಿಗೆ ಸೋಂಕು ತಗುಲಿದ್ದು ಅವುಗಳ ದಯಾಮರಣಕ್ಕೆ ಪಶುಸಂಗೋಪನಾ ಸಚಿವ ಎ.ಮಂಜು ಅವರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೆ ಹಾಲು ಮಾರಾಟಕ್ಕೂ ನಿಷೇಧ ಹೇರಲಾಗಿದೆ.[ಹಕ್ಕಿ ಜ್ವರದ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ]
ಈ ಬ್ಯಾಕ್ಟೀರಿಯಾ ಹಸುವಿನಿಂದ ಮನುಷ್ಯರಿಗೂ ಹರಡುತ್ತದೆ. ಹಾಗಾಗಿ ಫಾರ್ಮ್ ಹೌಸ್ ನಲ್ಲಿರುವ ಇತರೆ ಹಸುಗಳ ಹಾಲು ಮಾರಾಟ ಸಹ ನಿಷೇಧಿಸಲಾಗಿದೆ. ಅಲ್ಲದೇ ಬ್ಯಾಕ್ಟೀರಿಯಾ ಪತ್ತೆಯಾಗಿರುವ ಹಸುಗಳಿಗೆ ದಯಾಮರಣ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಂಜು ತಿಳಿಸಿದ್ದಾರೆ. ಹಾಗಾದರೆ ಈ ಮಾರಕ ಕಾಯಿಲೆಯ ಇನ್ನಷ್ಟು ವಿವರಗಳನ್ನು ತಿಳಿದುಕೊಂಡು ಬನ್ನಿ...
ಬ್ಯಾಕ್ಟೀರಿಯಾ ಕಾರಣ
ಬ್ರೂಸೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಪಶುಗಳಿಗೆ ಬರುವ ಕಾಯಿಲೆಯೇ ಬ್ರೂಸೆಲ್ಲೋಸಿಸ್. 1914ರಲ್ಲಿ ಈ ಬ್ಯಾಕ್ಟೀರಿಯಾ ಭಾರತದಲ್ಲಿ ಕಾಣಿಸಿಕೊಂಡಿತು. ಇದೀಗ ಕರ್ನಾಟಕದ ಕೋಲಾರದಲ್ಲಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಹೇಗೆ ಹರಡುತ್ತದೆ?
ಬ್ಯಾಕ್ಟೀರಿಯಾ ತಗುಲಿರುವ ಹಸು, ಹಂದಿ, ನಾಯಿ, ಕುರಿ, ಮೇಕೆಗಳಿಂದ ಈ ಕಾಯಿಲೆ ಮನುಷ್ಯನಿಗೆ ಹರಡುತ್ತದೆ. ಕಚ್ಚಾ ಮಾಂಸ ಅಥವಾ ಸರಿಯಾಗಿ ಬೇಯಿಸದೇ ಇರುವ ಮಾಂಸ ಸೇವನೆ, ಪಾಶ್ಚರೀಕರಿಸದ ಡೇರಿ ಉತ್ಪನ್ನ, ಅದರಲ್ಲೂ ಹಾಲು, ಬೆಣ್ಣೆ ಸೇವನೆಯಿಂದ ಈ ರೋಗ ಹರಡುವ ಸಾಧ್ಯತೆ ಹೆಚ್ಚಿದೆ.
ಯಾರು ಬಲಿಪಶು
ಪ್ರಯೋಗಾಲಯದಲ್ಲಿ ಕೆಲಸ ಮಾಡುವವರು, ಈ ಕಾಯಿಲೆಗೆ ಚಿಕಿತ್ಸೆ ಕೊಡುವವರು, ಮಾಂಸ ಕತ್ತರಿಸುವವರು, ಪ್ರಾಣಿ ಸಾಕಣೆಯಲ್ಲಿ ತೊಡಗಿರುವವರು ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ.
ರೋಗದ ಲಕ್ಷಣಗಳು
ತೀವ್ರ ಜ್ವರ, ಬಿಟ್ಟು ಬಿಟ್ಟು ಜ್ವರ ಬರುವುದು, ಜ್ವರದ ಜತೆಗೆ ಬೆವರುವುದು, ಸುಸ್ತು, ಮಾಂಸಖಂಡ, ಕೀಲು ಮತ್ತು ಬೆನ್ನು ನೋವು, ತಲೆನೋವು, ತಿಂಗಳುಗಟ್ಟಲೆ ಕೀಲು ನೋವು, ನರಗಳ ನೋವು, ಜನನೇಂದ್ರಿಯ ನೋವು, ಊತ ರೋಗದ ಪ್ರಮುಖ ಲಕ್ಷಣ.
ರಕ್ತಪರೀಕ್ಷೆ ಮಾಡಿಸಿಕೊಳ್ಳಿ
ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ರಕ್ತ ಪರೀಕ್ಷೆಗೆ ಒಳಗಾಗುವುದು ಒಳಿತು. ಮರಣ ಸಂಭವಿಸುವ ಸಾಧ್ಯತೆ ಕಡಿಮೆ ಇದ್ದರೂ ಪುರುಷನ ಸಂತಾನ ಶಕ್ತಿಯನ್ನು ನಾಶ ಮಾಡಲು ಕಾಯಿಲೆ ಸಾಕು.
ಮುಂಜಾಗೃತಾ ಕ್ರಮ
ಕಚ್ಚಾ ಮಾಂಸ, ಪಾಶ್ಚರೀಕರಿಸದ ಡೇರಿ ಉತ್ಪನ್ನ ಬಳಕೆ ಬಂದ್ ಮಾಡಬೇಕು. ಮಾಂಸ ಕತ್ತರಿಸುವವರು ಮತ್ತು ಪ್ಯಾಕ್ ಮಾಡುವವರು ಸುರಕ್ಷಾ ಸಾಧನ ಅಂದರೆ ಕೈ ಚೀಲ, ಕನ್ನಡಕ ಬಳಕೆ ಮಾಡುವುದು ಒಳಿತು. ಹಾಲನ್ನು ಬಳಸುವಾಗ ನಿಗಾ ಇರಲಿ.