ಹರಿಹರಪುರ ನದಿಯಲ್ಲಿ ಸಿಲುಕಿ ಒದ್ದಾಡಿದ ಎಮ್ಮೆ, ಮುಳುಗಿದ ಸೋಂಪುರ ಸೇತುವೆ
ಗೇಟ್ ನಿಂದ ನೀರು ಬಿಟ್ಟ ಕಾರಣ ಲಕ್ಕವಳ್ಳಿ ಹೋಬಳಿಯ ಸೋಂಪುರ ಗ್ರಾಮದ ಸೇತುವೆ ಮುಳುಗಡೆಯಾಗಿದೆ.
ಅನೇಕ ಮನೆಗಳು ಮುಳುಗುವ ಸಾಧ್ಯತೆಯಿದ್ದು, ಸ್ಥಳಕ್ಕೆ ಕ್ಷೇತ್ರದ ಶಾಸಕರಾದ ಡಿ.ಎಸ್.ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತರಿಗೆ ಗಂಜಿ ಕೇಂದ್ರವನ್ನು ತೆರೆಯಲು ವಿಭಾಗ ದಂಡಧಿಕಾರಿಗಳಿಗೆ ಮತ್ತು ತಹಸೀಲ್ದಾರ್ ರವರಿಗೆ ಶಾಸಕರು ಸೂಚನೆ ನೀಡಿದ್ದಾರೆ.
ರಂಗೇನಹಳ್ಳಿಯ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ಸಂತ್ರಸ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಗಂಜಿ ಕೇಂದ್ರದಲ್ಲಿ ಗ್ರಾಮಸ್ಥರು ವಾಸ್ತವ್ಯ ಹೂಡಿದ್ದಾರೆ.

ನದಿಯ ಸುಳಿಗೆ ಸಿಲುಕಿದ ಎಮ್ಮೆ
ಮಳೆ ನೀರಿನ ರಭಸಕ್ಕೆ ನದಿಯ ಸುಳಿಗೆ ಎಮ್ಮೆ ಸಿಲುಕಿರುವ ಘಟನೆ ಎನ್.ಆರ್.ಪುರ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ನಡೆದಿದೆ. ಎಮ್ಮೆಯ ಪರಿಸ್ಥಿತಿ ಕಂಡು ಮರುಗಿದ ಸ್ಥಳೀಯರು ದಡ ಸೇರಿಸಲು ಹರಸಾಹಸಪಟ್ಟಿದ್ದಾರೆ.

ಬಿರುಕು ಬಿಟ್ಟ ರಸ್ತೆ
ಮಲೆನಾಡಿನಲ್ಲಿ ಮುಂದುವರಿದ ಧಾರಾಕಾರ ಮಳೆಗೆ ರಸ್ತೆ ಬಿರುಕು ಬಿಟ್ಟು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ನಾಲ್ಕು ಗ್ರಾಮಗಳಿಗೆ ಸಂಚಾರ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಭೂ ಕುಸಿತಗೊಂಡ ಘಟನೆ ಕೊಪ್ಪ ತಾಲೂಕಿನ ಮೇಗುಂದಾ ಸಮೀಪದ ಗುಡ್ಡೆತೋಟದ ರಸ್ತೆಯಲ್ಲಿ ನಡೆದಿದೆ.
ರಸ್ತೆ ಮಾರ್ಗವಿಲ್ಲದೆ ನೂರಾರು ಗ್ರಾಮಸ್ಥರು ಪರದಾಡುತ್ತಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications