ಬೆಂಗಳೂರು-ತುಮಕೂರು ನಡುವೆ BMTC 'ವಜ್ರ ವಿಸ್ತಾರ' ವೋಲ್ವೋ ಎಸಿ ಬಸ್ ಸೇವೆ ಆರಂಭ: ಇಲ್ಲಿದೆ ಟೈಮಿಂಗ್ಸ್
ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಕಲ್ಪತರು ನಾಡು ತುಮಕೂರು ನಡುವೆ ಪ್ರತಿದಿನ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಭರ್ಜರಿ ಸಿಹಿಸುದ್ದಿ ನೀಡಿದೆ. ನಗರಗಳ ನಡುವಿನ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ಹಾಗೂ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ನೀಡುವ ಉದ್ದೇಶದಿಂದ ಬಿಎಂಟಿಸಿ ನೂತನವಾಗಿ 'ವಜ್ರ ವಿಸ್ತಾರ' ಹೆಸರಿನ ಹವಾನಿಯಂತ್ರಿತ ವೋಲ್ವೋ ಬಸ್ ಸೇವೆಯನ್ನು ಆರಂಭಿಸಿದೆ. ಮೇ 19 ರಿಂದಲೇ ಈ ಅತ್ಯಾಧುನಿಕ ಬಸ್ ಸೇವೆ ಅಧಿಕೃತವಾಗಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ.
ಬಿಎಂಟಿಸಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಆರಂಭಿಕ ಹಂತದಲ್ಲಿ ಬೆಂಗಳೂರಿನ ಮೆಜೆಸ್ಟಿಕ್ನಲ್ಲಿರುವ ಕೆಂಪೇಗೌಡ ಬಸ್ ನಿಲ್ದಾಣ (KBS) ಮತ್ತು ತುಮಕೂರು ನಗರದ ನಡುವೆ ಪ್ರತಿದಿನ ಒಟ್ಟು 54 ಟ್ರಿಪ್ಗಳನ್ನು ಮಾಡಲಾಗುವುದು. ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್ನಿಂದ ಹೊರಟು ತುಮಕೂರು ತಲುಪುತ್ತದೆ. ಈ ಮಾರ್ಗದಲ್ಲಿ ಒಟ್ಟು 8 ಪ್ರಮುಖ ನಿಲ್ದಾಣಗಳನ್ನು ಹೊಂದಿದ್ದು, 25 ರಿಂದ 120ರವರೆಗೆ ಟಿಕೆಟ್ ದರವಿರುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿ 20 ನಿಮಿಷಗಳ ಅಂತರದಲ್ಲಿ ಬಸ್ ಸೌಲಭ್ಯ ಲಭ್ಯವಿರಲಿದೆ. ಇದರಿಂದಾಗಿ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವ ಕಿರಿಕಿರಿ ತಪ್ಪಲಿದ್ದು, ನಿಗದಿತ ಸಮಯಕ್ಕೆ ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಸಾಧ್ಯವಾಗಲಿದೆ.

ಬೆಂಗಳೂರಿಗೆ ಅತಿ ಸಮೀಪದಲ್ಲಿರುವ ಪ್ರಮುಖ ವಾಣಿಜ್ಯ ಮತ್ತು ಶೈಕ್ಷಣಿಕ ಕೇಂದ್ರವಾಗಿರುವ ತುಮಕೂರಿನಿಂದ ಪ್ರತಿನಿತ್ಯ ಸಾವಿರಾರು ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳು ರಾಜಧಾನಿಗೆ ಆಗಮಿಸುತ್ತಾರೆ. ಪ್ರಸ್ತುತ ಕೆಎಸ್ಆರ್ಟಿಸಿ ಬಸ್ಗಳು ಹಾಗೂ ರೈಲುಗಳೇ ಇವರಿಗೆ ಪ್ರಮುಖ ಆಸರೆಯಾಗಿವೆ. ಆದರೆ, ಪೀಕ್ ಅವರ್ಗಳಲ್ಲಿ ಉಂಟಾಗುವ ವಿಪರೀತ ನೂಕುನುಗ್ಗಲು ಮತ್ತು ಟ್ರಾಫಿಕ್ ದಟ್ಟಣೆಯಿಂದಾಗಿ ಪ್ರಯಾಣಿಕರು ಸುಸ್ತಾಗುತ್ತಿದ್ದರು.
ಇದೀಗ ಬಿಎಂಟಿಸಿ ಪರಿಚಯಿಸಿರುವ 'ವಜ್ರ ವಿಸ್ತಾರ' ವೋಲ್ವೋ ಎಸಿ ಬಸ್ಗಳು ಈ ಸಮಸ್ಯೆಗೆ ಬಹುಪಾಲು ಪರಿಹಾರ ಒದಗಿಸಲಿವೆ. ಬೇಸಿಗೆಯ ಬಿಸಿಲಿನ ಝಳದಿಂದ ಪಾರಾಗಿ ತಂಪಾದ ವಾತಾವರಣದಲ್ಲಿ, ಆರಾಮದಾಯಕ ಪುಷ್ಬ್ಯಾಕ್ ಸೀಟುಗಳಲ್ಲಿ ಕುಳಿತು ಪ್ರಯಾಣಿಸುವ ಅವಕಾಶ ಇದೀಗ ಪ್ರಯಾಣಿಕರಿಗೆ ಒದಗಿಬಂದಿದೆ.
ಬೆಂಗಳೂರು ನಗರ ಬೆಳೆಯುತ್ತಿರುವ ವೇಗಕ್ಕೆ ತಕ್ಕಂತೆ ಉಪನಗರಗಳಿಗೂ ಅತ್ಯುತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬಿಎಂಟಿಸಿ ಈ 'ವಜ್ರ ವಿಸ್ತಾರ' ಯೋಜನೆಯನ್ನು ರೂಪಿಸಿದೆ. ಖಾಸಗಿ ಕ್ಯಾಬ್ಗಳು ಅಥವಾ ಸ್ವಂತ ವಾಹನಗಳಲ್ಲಿ ಸಂಚರಿಸುವುದಕ್ಕಿಂತ ವೋಲ್ವೋ ಬಸ್ ಪ್ರಯಾಣವು ಆರ್ಥಿಕವಾಗಿಯೂ ಹೆಚ್ಚು ಮಿತವ್ಯಯಕಾರಿಯಾಗಿದೆ.
ಅಲ್ಲದೆ, ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಮತ್ತು ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಕೂಡ ಈ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಪ್ರಮುಖ ಪಾತ್ರ ವಹಿಸಲಿದೆ. ಮುಂಬರುವ ದಿನಗಳಲ್ಲಿ ಪ್ರಯಾಣಿಕರ ಪ್ರತಿಕ್ರಿಯೆ ಮತ್ತು ಬೇಡಿಕೆಯನ್ನು ಆಧರಿಸಿ ಬಸ್ಗಳ ಸಂಖ್ಯೆ ಹಾಗೂ ಟ್ರಿಪ್ಗಳನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸುಳಿವು ನೀಡಿದ್ದಾರೆ.












Click it and Unblock the Notifications