ರಾಜ್ಯಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಎಂ.ಫಾರೂಕ್ ನಾಮಪತ್ರ
ಬೆಂಗಳೂರು, ಮಾರ್ಚ್ 09 : ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಉದ್ಯಮಿ ಬಿ.ಎಂ.ಫಾರೂಕ್ ನಾಮಪತ್ರ ಸಲ್ಲಿಸಿದರು. ಮಾರ್ಚ್ 23ರಂದು ಕರ್ನಾಟಕ ವಿಧಾನಸಭೆಯಿಂದ 4 ಸದಸ್ಯರನ್ನು ಆಯ್ಕೆ ಮಾಡಲು ಮತದಾನ ನಡೆಯಲಿದ್ದು, ಅಂದೇ ಚುನಾವಣಾ ಫಲಿತಾಂಶ ಪ್ರಕಟಿಸಲಾಗುತ್ತದೆ.
ಶುಕ್ರವಾರ ಬಿ.ಎಂ.ಫಾರೂಕ್ ಅವರು ವಿಧಾನಸೌಧಕ್ಕೆ ತೆರಳಿ, ಚುನಾವಣಾಧಿಕಾರಿ ಎಸ್.ಮೂರ್ತಿ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು. ಪರಿಷತ್ ಸದಸ್ಯ ಟಿ.ಎ.ಶರವಣ, ಹಿರಿಯ ನಾಯಕ ಪಿ.ಜಿ.ಆರ್.ಸಿಂಧ್ಯಾ, ಶಾಸಕ ಮಧು ಬಂಗಾರಪ್ಪ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಧಾನಸಭೆಯಿಂದ ರಾಜ್ಯಸಭೆಗೆ ಅಭ್ಯರ್ಥಿ ಆಯ್ಕೆಯಾಗಲು 45 ಮತಗಳು ಬೇಕು. ಆದರೆ, ಜೆಡಿಎಸ್ 40ಕ್ಕಿಂತ ಕಡಿಮೆ ಶಾಸಕರನ್ನು ಹೊಂದಿದೆ. ಬಿ.ಎಂ.ಫಾರೂಕ್ ಅವರು ಆಯ್ಕೆಯಾಗಲು ಬೇರೆ ಪಕ್ಷದ ಶಾಸಕರು ಬೆಂಬಲ ನೀಡುವುದು ಅಗತ್ಯವಾಗಿದೆ.
ವಿಧಾನಸಭೆಯ ಬಲಾಬಲದ ಆಧಾರದ ಮೇಲೆ ಬಿಜೆಪಿ ಒಬ್ಬರು, ಕಾಂಗ್ರೆಸ್ ಮೂವರು ಸದಸ್ಯರನ್ನು ಆಯ್ಕೆ ಮಾಡಿ ರಾಜ್ಯಸಭೆಗೆ ಕಳಿಸಬಹುದಾಗಿದೆ. ಒಂದು ವೇಳೆ ಕಾಂಗ್ರೆಸ್ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿದೆಯೇ? ಕಾದು ನೋಡಬೇಕು.
ಬಿ.ಎಂ.ಫಾರೂಕ್ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮೊಯೀದ್ದಿನ್ ಬಾವ ಅವರ ಸಹೋದರ. ಜೆಡಿಎಸ್ ಪಕ್ಷದಲ್ಲಿ ಅವರು ಗುರುತಿಸಿಕೊಂಡಿದ್ದು, ಪಕ್ಷದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
2012ರಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಕೆ.ರೆಹಮಾನ್ ಖಾನ್ (ಕಾಂಗ್ರೆಸ್), ಎಂ.ರಾಜೀವ್ ಚಂದ್ರಶೇಖರ್ (ಪಕ್ಷೇತರ), ಬಸವರಾಜ ಪಾಟೀಲ್ ಸೇಡಂ (ಬಿಜೆಪಿ), ಆರ್.ರಾಮಕೃಷ್ಣ (ಬಿಜೆಪಿ) ಅವರ ಅವಧಿ ಏಪ್ರಿಲ್ 2ಕ್ಕೆ ಅಂತ್ಯಗೊಳ್ಳಲಿದೆ. ತೆರವಾಗು ಸ್ಥಾನಗಳನ್ನು ಭರ್ತಿ ಮಾಡಲು ಮಾರ್ಚ್ 23ರಂದು ಚುನಾವಣೆ ನಡೆಯಲಿದೆ.












Click it and Unblock the Notifications