ಕಂಪ್ಲಿಯಲ್ಲಿ ಗಾಂಧಾರಿ ವಿದ್ಯೆ ತರಬೇತಿ ಶಿಬಿರ : ಮಕ್ಕಳ ಅದ್ಭುತ ಪ್ರತಿಭೆ ನೋಡಿ ಜನರು ಬೆರಗು

ಕಂಪ್ಲಿ :ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಾವು ಒಂದು ಹೆಜ್ಜೆ ಕೂಡ ಮುಂದಿಡಲು ಪರದಾಡುತ್ತೇವೆ. ಆದರೆ ಇಲ್ಲೊಂದೆಡೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓದುವುದು, ಬರೆಯುವುದು, ಬಣ್ಣಗಳನ್ನು ಗುರುತಿಸುವುದು, ಚಿತ್ರಗಳಿಗೆ ಬಣ್ಣ ಹಚ್ಚುವುದು, ನೋಟಿನ ಮುಖಬೆಲೆ ಹೇಳುವುದು, ಸೈಕಲ್ ಓಡಿಸುವುದು... ಇಂತಹ ಅಚ್ಚರಿಯ ಸಾಧನೆಗಳನ್ನು ಮಾಡುತ್ತಿರುವ ಮಕ್ಕಳು ಇದೀಗ ಕಂಪ್ಲಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಮಹಾಭಾರತದ ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದರೂ ದಿವ್ಯ ಶಕ್ತಿಯಿಂದ ಎಲ್ಲವನ್ನೂ ಅರಿತುಕೊಳ್ಳುತ್ತಿದ್ದಳು ಎಂಬ ಕಥೆಯನ್ನು ನಾವು ಕೇಳಿದ್ದೇವೆ. ಅದೇ ರೀತಿಯಲ್ಲಿ ಕಂಪ್ಲಿಯ ಮಕ್ಕಳು 'ಗಾಂಧಾರಿ ವಿದ್ಯೆ' ತರಬೇತಿ ಪಡೆದು ತಮ್ಮ ಮೂರನೇ ಕಣ್ಣಿನ ಮೂಲಕ ಅಚ್ಚರಿಯ ಪ್ರದರ್ಶನ ನೀಡುತ್ತಿದ್ದಾರೆ.

Blindfolded Kids

ಗಣಿನಾಡು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ವಿನಾಯಕ ನಗರದ 2ನೇ ಕ್ರಾಸ್‌ನಲ್ಲಿ ತರಬೇತುದಾರೆ ನೀರಜಾ ಚಂದ್ರಶೇಖರ್ ಗೌಡ ಅವರು ತಾಲೂಕಿನ ಹಲವು ಗ್ರಾಮಗಳ ಮಕ್ಕಳಿಗೆ ಗಾಂಧಾರಿ ವಿದ್ಯೆಯ ತರಬೇತಿ ನೀಡುತ್ತಿದ್ದಾರೆ.

ಇಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಡ್ರಾಯಿಂಗ್, ಪೇಂಟಿಂಗ್, ಪೇಪರ್ ಓದುವುದು, ಬರೆಯುವುದು ಹಾಗೂ ಸೈಕಲ್ ಓಡಿಸುವಂತಹ ಕೌಶಲ್ಯಗಳನ್ನು ಸುಲಭವಾಗಿ ಪ್ರದರ್ಶಿಸುತ್ತಿದ್ದಾರೆ.

ಈ ಕುರಿತು ಮಾತನಾಡಿದ ತರಬೇತುದಾರೆ ನೀರಜಾ ಚಂದ್ರಶೇಖರ್ ಗೌಡ, "ಗಾಂಧಾರಿ ವಿದ್ಯೆಯಿಂದ ಮಕ್ಕಳಲ್ಲಿ ಏಕಾಗ್ರತೆ, ನೆನಪಿನ ಶಕ್ತಿ, ಆತ್ಮವಿಶ್ವಾಸ ಹೆಚ್ಚಳವಾಗುತ್ತದೆ. ಜೊತೆಗೆ ಭಯ ನಿವಾರಣೆಗೆ ಸಹ ಇದು ಸಹಕಾರಿಯಾಗುತ್ತದೆ. ಹಲವಾರು ಗ್ರಾಮಗಳಿಂದ ಮಕ್ಕಳು ನಮ್ಮ ತರಬೇತಿ ಕೇಂದ್ರಕ್ಕೆ ಬಂದು ತರಬೇತಿ ಪಡೆಯುತ್ತಿದ್ದಾರೆ" ಎಂದು ಹೇಳಿದರು.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ತರಬೇತುದಾರೆ ನೀರಜಾ ಚಂದ್ರಶೇಖರ್ ಗೌಡ, "ಗಾಂಧಾರಿ ವಿದ್ಯೆಯಿಂದ ಮಕ್ಕಳ ಭವಿಷ್ಯಕ್ಕೆ ಅತ್ಯಂತ ಹೆಚ್ಚಿನ ಅನುಕೂಲಗಳಿವೆ. ಇದು ಕೇವಲ ಒಂದು ಪ್ರದರ್ಶನದ ಕಲೆಯಲ್ಲ, ಬದಲಾಗಿ ಮಕ್ಕಳ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುವ ತಂತ್ರವಾಗಿದೆ. ಶೇಕಡಾ 100ರಷ್ಟು ನೆನಪಿನ ಶಕ್ತಿ ಹೆಚ್ಚಿಸಲು ಇದು ಸಹಕಾರಿಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಹಂತದವರೆಗೂ ಈ ವಿದ್ಯೆ ಮಕ್ಕಳಿಗೆ ನೆರವಾಗುತ್ತದೆ. ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಅಪಾರವಾಗಿ ಹೆಚ್ಚುತ್ತದೆ, ದೃಷ್ಟಿ ದೋಷ ನಿವಾರಣೆಯಾಗುತ್ತದೆ, ಆರೋಗ್ಯ ಸುಧಾರಿಸುತ್ತದೆ ಮತ್ತು ಐಕ್ಯೂ ಮಟ್ಟ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ" ಎಂದು ವಿವರಿಸಿದರು.

"ಕೆಲವು ಮಕ್ಕಳು ದಪ್ಪನೆಯ ಗ್ಲಾಸ್ ಇರುವ ಕನ್ನಡಕವನ್ನು ಧರಿಸುತ್ತಿರುತ್ತಾರೆ. ಅಂತಹ ಮಕ್ಕಳು ಈ ತರಬೇತಿಯನ್ನು ಪಡೆದ ನಂತರ ತಮ್ಮ ಕನ್ನಡಕವನ್ನು ತೆಗೆದಿಟ್ಟು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಓದುವ ಮತ್ತು ಬರೆಯುವ ಸಾಮರ್ಥ್ಯವನ್ನು ಪಡೆಯುತ್ತಾರೆ. ಇದು ಈ ವಿದ್ಯೆಯ ಬಹುದೊಡ್ಡ ಲಾಭವಾಗಿದೆ. ಸದ್ಯ 10 ದಿನಗಳ ಬೇಸಿಗೆ ವಿಶೇಷ ಶಿಬಿರ ಯಶಸ್ವಿಯಾಗಿ ನಡೆಯುತ್ತಿದ್ದು, ಮುಂಬರುವ 25ನೇ ತಾರೀಖಿನಿಂದ ಮುಂದಿನ ಬ್ಯಾಚ್ ಪ್ರಾರಂಭವಾಗಲಿದೆ" ಎಂದು ಅವರು ಮಾಹಿತಿ ನೀಡಿದರು.

ಒಟ್ಟಾರೆಯಾಗಿ, ಕಂಪ್ಲಿಯಲ್ಲಿ ನಡೆಯುತ್ತಿರುವ ಈ ಗಾಂಧಾರಿ ವಿದ್ಯೆ ತರಬೇತಿಯು ಪೋಷಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮೊಬೈಲ್ ಮತ್ತು ಟಿವಿ ಗೀಳಿಗೆ ಅಂಟಿಕೊಂಡು ತಮ್ಮ ಏಕಾಗ್ರತೆ ಕಳೆದುಕೊಳ್ಳುತ್ತಿರುವ ಇಂದಿನ ಡಿಜಿಟಲ್ ಯುಗದ ಮಕ್ಕಳಿಗೆ, ಇಂತಹ ತರಬೇತಿಗಳು ಅವರ ಮೆದುಳಿನ ವಿಕಾಸಕ್ಕೆ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ಸೂಕ್ತ ಮಾರ್ಗದರ್ಶನವಾಗಿ ಹೊರಹೊಮ್ಮಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+