ಸಿದ್ದರಾಮಯ್ಯ, ಡಿಕೆಶಿ ಜಾತಿಪ್ರೇಮ ನೋಡಿ ಈಡಿಗ ಸಮುದಾಯದ ಮುಖಂಡರು ಕಲಿಯಬೇಕು: ಪ್ರಣವಾನಂದ ಸ್ವಾಮೀಜಿ
ಉತ್ತರ ಕನ್ನಡ, ಜೂನ್ 01: ಸಿದ್ದರಾಮಯ್ಯ, ಡಿಕೆಶಿ ಜಾತಿಪ್ರೇಮ ನೋಡಿ ಈಡಿಗ ಸಮುದಾಯದ ಮುಖಂಡರು ಕಲಿಯಬೇಕು. ನಿಮ್ಮ ರಾಜಕೀಯ ಜೀವನದಲ್ಲಿ ಸಮುದಾಯವನ್ನ ಜೊತೆಯಾಗಿ ಸೇರಿಸಿಕೊಂಡು ಹೋಗದಿದ್ದಲ್ಲಿ ಮುಂದೆ ಸೋಲು ಕಾಣುತ್ತೀರಿ ಎಂದು ಈಡಿಗ- ಬಿಲ್ಲವ- ನಾಮಧಾರಿ ಸಮುದಾಯದ ಮುಖಂಡರಿಗೆ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಗುರುವಾರ ಕಾರವಾರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಈ ಹಿಂದೆ 5 ವರ್ಷ ಮುಖ್ಯಮಂತ್ರಿಯಿದ್ದಾಗ ಕುರುಬ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಸಮುದಾಯಕ್ಕೆ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ, ಕಾಗಿನೆಲೆ ಅಭಿವೃದ್ಧಿ ಪೀಠ, ರಾಜ್ಯದಾದ್ಯಂತ 800ಕ್ಕೂ ಹೆಚ್ಚು ಕನಕ ಭವನಗಳು, ಕುರುಬ ಸಮುದಾಯದ ಯುವಕರು ಕಲಿಯಲು ಸರಕಾರದಿಂದ ಐಎಎಸ್ ತರಬೇತಿ ಕೇಂದ್ರಗಳನ್ನು ನೀಡಿದ್ದರು. ಆದರೆ ನಮ್ಮ ನಾಯಕರು ಸಮುದಾಯಕ್ಕೆ ಏನೂ ಮಾಡಲಿಲ್ಲ. ಡಿಕೆ ಶಿವಕುಮಾರ್ ಸಹ ಒಕ್ಕಲಿಗ ಸಮುದಾಯಕ್ಕೆ ಸ್ಥಾನಮಾನ ದೊರಕಿಸಿಕೊಟ್ಟಿದ್ದಾರೆ. ಆದರೆ ಈಡಿಗ ಸಮುದಾಯದ ಮುಖಂಡರಿಗೆ ಸಮುದಾಯದ ಮೇಲೆ ಪ್ರೀತಿ ಇಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ನಾಲ್ಕು ದಶಕಗಳಿಂದ ಕಾಂಗ್ರೆಸ್ನಲ್ಲಿ ಬಿ ಕೆ ಹರಿಪ್ರಸಾದ್ ನಿಷ್ಠಾವಂತರಾಗಿ ದುಡಿಯುತ್ತಿದ್ದಾರೆ. ಹರಿಪ್ರಸಾದ್ಗೆ ಸರ್ಕಾರದಲ್ಲಿ ಸ್ಥಾನ ಸಿಗದಿರುವುದು ದುರಂತ. ಬಿ.ಕೆ.ಹರಿಪ್ರಸಾದ್ ಅವರಿಗೆ ಸರ್ಕಾರದಲ್ಲಿ ಸ್ಥಾನ ಸಿಗಬೇಕಿತ್ತು. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಮುದಾಯಕ್ಕೆ ಒಂದೇ ಸೀಟು ನೀಡಲಾಗಿದೆ. ಇದು ಸಮುದಾಯಕ್ಕೆ ಮಾಡಿರುವ ಅನ್ಯಾಯ. ಇದೇ ಕಾರಣಕ್ಕೆ, ಈಡಿಗ, ನಾಮಧಾರಿ, ಬಿಲ್ಲವ ಸಮುದಾಯದವರಲ್ಲಿ ರಾಜಕೀಯ, ಸಾಮಾಜಿಕ ಜಾಗೃತಿ ಮೂಡಿಸಲು ಚಿಂತನ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.
ಇನ್ನೂ ಜೂನ್ 3, 4ರಂದು ಕುಮಟಾದಲ್ಲಿ ಬೃಹತ್ ಚಿಂತನ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಸಮುದಾಯಕ್ಕೆ ಆದ ಅನ್ಯಾಯದ ಬಗ್ಗೆ ಚರ್ಚಿಸಲಾಗುವುದು. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 7 ಕ್ಷೇತ್ರದಲ್ಲಿ ಮಾತ್ರ ಈಡಿಗ ಸಮಾಜದವರಿಗೆ ಟಿಕೆಟ್ ನೀಡಿತ್ತು. ಅದರಲ್ಲಿ 4 ಸ್ಥಾನದಲ್ಲಿ ನಮ್ಮವರು ಗೆಲುವು ಸಾಧಿಸಿದ್ದಾರೆ. ಇದು ನಮ್ಮದೇ ವೈಫಲ್ಯ. ಹೀಗಾಗಿ ನಾವು ನಮ್ಮವರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಕೇಳಲು ಅನರ್ಹರಾಗಿದ್ದೇವೆ.

ನಮ್ಮ ಸಮುದಾಯದವರಿಗೆ ರಾಜಕೀಯವಾಗಿ ಜಾಗೃತಿ ಕಡಿಮೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಗ್ರಾಮ ಪಂಚಾಯಿತಿಗಳ ಚುನಾವಣೆಗಳಲ್ಲಿ ಈಡಿಗ ಸಮುದಾಯದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಸಂಘಟಿತರಾಗಬೇಕಿದೆ ಎಂದರು.
ಕಾಂಗ್ರೆಸ್ ಪಕ್ಷವು ಈ ಹಿಂದೆ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 1.5 ಸಾವಿರ ಕೋಟಿ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಅದನ್ನು ಕೂಡಲೇ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ ನಮ್ಮ ಸಮುದಾಯದವರಿಗೆ ಸರಕಾರದಿಂದ ಐ.ಎ.ಎಸ್, ಕೆ.ಎ.ಎಸ್ ಹಾಗೂ ಪೊಲೀಸ್ ಹುದ್ದೆಗಳಿಗೆ ತರಬೇತಿ ಸಂಸ್ಥೆಗಳನ್ನು ನಿರ್ಮಿಸಬೇಕು. ಕುಲಕಸುಬಾದ ನೀರಾ ತೆಗೆಯಲು ಅವಕಾಶ ನೀಡಬೇಕು. ಇವುಗಳನ್ನೆಲ್ಲಾ ಕೇಳುವ ಸ್ಥಿತಿಯಲ್ಲಿ ನಾವಿಲ್ಲ. ಆದರೆ ಮುಂದೆ ಅವರಾಗಿಯೇ ಬಂದು ಕೊಡುವಂತೆ ಸಂಘಟಿತರಾಗಬೇಕು ಎಂದರು.












Click it and Unblock the Notifications