ಶಿವಮೊಗ್ಗದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ: ಸಿಎಂ ಬೊಮ್ಮಾಯಿ
ಶಿವಮೊಗ್ಗ, ನವೆಂಬರ್ 15: ಶಿವಮೊಗ್ಗ ಜಿಲ್ಲೆಯಲ್ಲಿ ಪೈಪೋಟಿಯಿಂದ ಕೆಲಸ ಮಾಡುವ ಟೀಂ ಅನ್ನು ಯಡಿಯೂರಪ್ಪ ಅವರು ಸಿದ್ಧ ಮಾಡಿದ್ದಾರೆ. ಆದ್ದರಿಂದ ಮುಂಬರುವ 2023ರ ಚುನಾವಣೆಯಲ್ಲಿ ಭದ್ರಾವತಿ ಸಹಿತ ಎಲ್ಲ ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿವಮೊಗ್ಗ ಜಿಲ್ಲೆ ಸೊರಬದ ಆನವಟ್ಟಿಯಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿದ್ದ ಜನ ಸಂಕಲ್ಪ ಯಾತ್ರೆಯನ್ನ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ರಾಜ್ಯಕ್ಕೆ ಮೂರು ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಅದರಲ್ಲಿ ಜನಮಾನಸದಲ್ಲಿ ಉಳಿದಿರುವ ಜನಪ್ರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು ಕೊಟ್ಟ ಹತ್ತಾರು ಯೋಜನೆಗಳು ಸೂರ್ಯ ಚಂದ್ರ ಇರುವವರೆಗೂ ಶಾಶ್ವತವಾಗಿ ಇರುತ್ತದೆ ಎಂದು ಹೇಳಿದರು.
ಬಿಎಸ್ ಯಡಿಯೂರಪ್ಪ ಅವರು ರೈತರಿಗಾಗಿ ಸಾಲ ಮನ್ನ ಜೊತೆಗೆ 10 ಎಚ್ ಪಿ ಉಚಿತ ವಿದ್ಯುತ್ ನೀಡಿದ ಧಿಮಂತ ನಾಯಕರು. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಕೊಡುವುದು, ಭೂ ಚೇತನ ಕಾರ್ಯಕ್ರಮವನ್ನು ಕೊಟ್ಟು ಕರ್ನಾಟಕದ ಭೂ ಶಕ್ತಿಯನ್ನು ಹೆಚ್ಚಿಸಿದ್ದು, ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ, ಶಾಲಾ ಮಕ್ಕಳಿಗೆ ಸೈಕಲ್ ಯೋಜನೆ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಭರವಸೆಯ ಬೆಳಕನ್ನು ನೀಡಿರುವುದು ಮಣ್ಣನ ಮಗ ಯಡಿಯೂರಪ್ಪ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಸೊರಬ ಕ್ಷೇತ್ರವನ್ನು ಬಹಳ ಹಿಂದಿನಿಂದಲೂ ಪ್ರತಿನಿಧಿಸುತ್ತಿದ್ದ ಹಿಂದುಳಿದ ನಾಯಕ ದಿವಂಗತ ಎಸ್. ಬಂಗಾರಪ್ಪ ಅವರ ಸಾಧನೆ ಹಾಗೂ ಸಾಮಾಜಿಕ ನ್ಯಾಯದ ಕಳಕಳಿಯನ್ನು ನಾವು ಮರೆಯಬಾರದು. ಕರ್ನಾಟಕ ರಾಜ್ಯದಲ್ಲಿ ಹಲವು ಮೂಲಭೂತ ಬದಲಾವಣೆಗಳನ್ನು ತಂದ ಅಭಿವೃದ್ಧಿಯ ಹರಿಕಾರರಾದ ದೇವರಾಜ ಅರಸು ಅವರು ಭೂ ಸುಧಾರಣೆ ಕಾಯ್ದೆ ತಂದು ಗೇಣಿದಾರರಿಗೆ ಸಹಾಯ ಮಾಡಿದರು. ಆದರೆ ಆ ಗೇಣಿದಾರ ಚಳುವಳಿ ಪ್ರಾರಂಭವಾಗಿದ್ದು ಇದೇ ಶಿವಮೊಗ್ಗದಲ್ಲಿ. ಬಂಗಾರಪ್ಪ ಅವರು ದೇವರಾಜ ಅರಸು ಅವರ ನೀತಿಯಿಂದ ಪ್ರಭಾವಿತರಾಗಿ ಹಿಂದುಳಿದ ವರ್ಗದವರನ್ನು ಜಾಗೃತಿ ಮಾಡಿದರು.
ಬಂಗಾರಪ್ಪ ಅವರು ಯಾವುದೇ ಪಕ್ಷವನ್ನು ನಂಬಿ ರಾಜಕಾರಣ ಮಾಡಲಿಲ್ಲ, ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಆದರೆ ಎಲ್ಲ ರಾಜಕೀಯ ಪಕ್ಷಗಳು ಬಂಗಾರಪ್ಪ ಅವರಿಗೆ ಸೇರಿದವು. ಅವರು ಕರ್ನಾಟಕದ ಮೂಲೆ ಮೂಲೆಯಲ್ಲೂ ಈ ಪ್ರಭಾವವನ್ನು ಉಳಿಸಿದ್ದಾರೆ. ಹಲವಾರು ಮಂದಿ ನಾವು ಹಿಂದುಳಿದ ವರ್ಗದ ನಾಯಕರು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಾರೆ. ಆದ್ರೆ ನಿಜವಾದ ಹಿಂದುಳಿದ ವರ್ಗದ ನಾಯಕರು ದೇವರಾಜ ಅರಸು ಮತ್ತು ಬಂಗಾರಪ್ಪ ಅವರು. ಸೊರಬ ಮಣ್ಣಿನಲ್ಲಿ ನಿಂತು ಮಾತಾಡುವಾಗ ಇವರ ಪ್ರೇರಣೆ ಪಡೆದುಕೊಂಡು ಮಾತಾಡುತ್ತಿದ್ದೀನಿ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಡೀ ಶಿವಮೊಗ್ಗ ಜಿಲ್ಲೆಯ ಚಿತ್ರಣವನ್ನೇ ಬದಲಾವಣೆ ಮಾಡಿದರು. ಜನಸಾಮಾನ್ಯರ ಬದುಕನ್ನು ಹಸನು ಮಾಡುವ ಕೆಲಸವನ್ನು ಯಡಿಯೂರಪ್ಪ ಅವರು ಮಾಡಿದ್ದಾರೆ. ಆದ್ದರಿಂದ ಶಿವಮೊಗ್ಗ ಜಿಲ್ಲೆ ಜನತೆ ಸದಾ ಯಡಿಯೂರಪ್ಪ ಅವರೊಟ್ಟಿಗೆ ನಿಲ್ಲಬೇಕು. ಜನರಿಗೆ ಇನ್ನಷ್ಟು ಸೇವೆ ಮಾಡಬೇಕೆಂದು ಉತ್ಸಾಹದಿಂದ ರಾಜ್ಯದ ಮೂಲೆ ಮೂಲೆಗೂ ಬಂದಿದ್ದಾರೆ ಎಂದು ಹೇಳಿದರು.

ಸೊರಬ ಶಾಸಕರಾದ ಕುಮಾರ್ ಬಂಗಾರಪ್ಪ ಅವರು ತಮ್ಮ ಕ್ಷೇತ್ರಕ್ಕೆ ಹಲವು ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ರೈತರಿಗೆ ಅನುಕೂಲಕ್ಕೆ ನೀರಿನ ಕೊರತೆ ಆಗದಂತೆ ಅಂತರ್ಜಲ ಹೆಚ್ಚಿಸುವ ಸಲುವಾಗಿ 200 ಕೆರೆಗಳನ್ನು ತುಂಬಿಸಿದ್ದಾರೆ. ಅನವಟ್ಟಿ ಭಾಗಕ್ಕೆ ದಂಡಾವತಿ ಏತನೀರಾವರಿ ಬಹಳ ಪ್ರಮುಖವಾದ್ದು. ನಮ್ಮ ಯೋಜನೆಗೆ ನೆರೆಯ ರಾಜ್ಯ ಅಡಚಣೆ ಉಂಟು ಮಾಡಿತ್ತು. ಹಾಗಾಗಿ ಈ ಬಾರಿ ಯಾವುದೇ ಮುಳುಗಡೆ ಆಗದಂತೆ, ಯಾವುದೇ ರೈತನಿಗೆ ತೊಂದರೆ ಆಗದಂತೆ ಯೋಜನೆಯ ಸ್ವರೂಪವನ್ನು ಬದಲಿಸಿ ಲಿಫ್ಟ್ ಮುಖಾಂತರ ನೀರೆತ್ತುವ ಕಾಮಗಾರಿಗೆ ಶೀಘ್ರದಲ್ಲೇ ಅನುಮೋದನೆ ಕೊಟ್ಟು ಅಡಿಗಲ್ಲು ಹಾಕುತ್ತೀವಿ. ಜನವರಿ ತಿಂಗಳಲ್ಲಿ ಸುಮಾರು 800 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡುತ್ತಿದ್ದೀವಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.












Click it and Unblock the Notifications