#StepDownCM ಕರ್ನಾಟಕ ಬಿಜೆಪಿಯಿಂದ ಟ್ವೀಟ್ ಅಭಿಯಾನ
ಬೆಂಗಳೂರು, ಜುಲೈ 18 : ಒಂದು ಕಡೆ ವಿಧಾನಸಭೆಯಲ್ಲಿ ವಿಶ್ವಾಸಮತದ ಕುರಿತು ಚರ್ಚೆ ನಡೆಯುತ್ತಿದೆ. ಮತ್ತೊಂದು ಕಡೆ ಪ್ರತಿಪಕ್ಷ ಬಿಜೆಪಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಒತ್ತಾಯ ಮಾಡುತ್ತಿದೆ.
ಗುರುವಾರ ಕರ್ನಾಟಕ ಬಿಜೆಪಿ #StepDownCM ಎಂಬ ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ಗಳನ್ನು ಮಾಡುತ್ತಿದೆ. ಕರ್ನಾಟಕದ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಎಚ್. ಡಿ. ಕುಮಾರಸ್ವಾಮಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಹುಮತವಿಲ್ಲದೇ ಅಧಿಕಾರವನ್ನು ಇಟ್ಟುಕೊಂಡಿವೆ. ಸಂವಿಧಾನದ ಪ್ರಕಾರ ಬಹುಮತವಿಲ್ಲದ ಪಕ್ಷ ಅಧಿಕಾರದಲ್ಲಿರಬಾರದು ಎಂದು ಬಿಜೆಪಿ ಟ್ವೀಟ್ ಮೂಲಕ ಒತ್ತಾಯಿಸಿದೆ.
ಮತ್ತೊಂದು ಕಡೆ ಗುರುವಾರ ಬೆಳಗ್ಗೆಯಿಂದ ವಿಧಾನಸಭೆಯಲ್ಲಿ ವಿಶ್ವಾಸಮತದ ಮೇಲೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್-ಜೆಡಿಎಸ್ ಚರ್ಚೆಯನ್ನು ಬೇಕೆಂದೂ ಎಳೆದುಕೊಂಡು ಹೋಗುತ್ತಿವೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ರಾಜ್ಯಪಾಲರಿಗೂ ದೂರು ನೀಡಿದೆ....

ಇಡೀ ದೇಶವೇ ನೋಡುತ್ತಿದೆ
#StepDownCM ಎಂಬ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕದ ರಾಜಕೀಯವನ್ನು ಇಡೀ ದೇಶವೇ ನೋಡುತ್ತಿದೆ. ವಿಶ್ವಾಸಮತ ಸಾಬೀತು ಮಾಡುವುದು ಬಿಟ್ಟು ಕಾಲಹರಣ ಮಾಡುತ್ತಿದ್ದಾರೆ ಎಂದು ಶೇಮ್ ಆನ್ ಕುಮಾರಸ್ವಾಮಿ ಎಂದು ಆರೋಪಿಸಿದೆ.

ಸರ್ಕಾರಕ್ಕೆ ಬಹುಮತವಿಲ್ಲ
ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿದೆ. ಸಂವಿಧಾನದ ಪ್ರಕಾರ ಬಹುಮತವಿಲ್ಲದ ಸರ್ಕಾರ ರಾಜೀನಾಮೆ ನೀಡಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಬಹಮತವಿಲ್ಲದೇ ಅಧಿಕಾರದಲ್ಲಿವೆ ಎಂದು ಬಿಜೆಪಿ ಆರೋಪ ಮಾಡಿದೆ.

ರಾಜಭವನದ ಗಮನ
ರಾಜಭವನದ ವಿಶೇಷ ಅಧಿಕಾರಿಯೊಬ್ಬರು ಬೆಳಗ್ಗೆಯಿಂದ ವಿಧಾನಸೌಧದಲ್ಲಿ ಕಲಾಪ ವೀಕ್ಷಣೆ ಮಾಡುತ್ತಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಭೇಟಿ ಮಾಡಲು ಅವರು ಪ್ರಯತ್ನ ಮಾಡುತ್ತಿದ್ದಾರೆ. ರಾಜಭವನ ಎಲ್ಲಾ ಪ್ರಕ್ರಿಯೆಗಳನ್ನು ಗಮನಿಸುತ್ತಿದೆ.

ಅಡ್ವೊಕೇಟ್ ಜನರಲ್ನಿಂದ ಸಲಹೆ
ಗುರುವಾರ ಬೆಳಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗದ ಪಕ್ಷದ ನಾಯಕ ಸಿದ್ದರಾಮಯ್ಯ, "ಶಾಸಕಾಂಗ ಪಕ್ಷದ ನಾಯಕನಾಗಿ ನಮ್ಮ ಸದಸ್ಯರಿಗೆ ವಿಪ್ ನೀಡುವ ನನ್ನ ಅಧಿಕಾರದ ಬಗ್ಗೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಲ್ಲಿ ಗೊಂದಲ ಇದೆ. ಇದು ಸ್ಪಷ್ಟವಾಗುವ ವರೆಗೆ ಮುಖ್ಯಮಂತ್ರಿಗಳು ವಿಶ್ವಾಸಮತ ಮಂಡನೆಯನ್ನು ಮುಂದೂಡಬೇಕು" ಎಂದು ಹೇಳಿದರು. ಈ ಕುರಿತು ಸ್ಪೀಕರ್ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರಿಂದ ಸಲಹೆ ಪಡೆದುಕೊಳ್ಳುತ್ತಿದ್ದಾರೆ.












Click it and Unblock the Notifications