ವಿಧಾನಸೌಧವೇ ಖಾಲಿ ಮಾಡಿ ಜನರ ದುಡ್ಡಲ್ಲಿ ಸಮಾವೇಶ ಆಯೋಜನೆ
ನಿನ್ನೆ ಹಾಸನದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಜನರ ಹಣದಲ್ಲಿ ಇಂತಹ ಸಮಾವೇಶಗಳನ್ನು ಮಾಡುತ್ತಾ ಸಿದ್ದರಾಮಯ್ಯ ಅವರು ಹಣ ಪೋಲು ಮಾಡುತ್ತಿದ್ದು, ಈ ಬಗ್ಗೆ ಮುಕ್ತ ಚರ್ಚೆ ನಡೆಯಬೇಕು ಎಂದು ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯನವರ ಕುಟುಂಬ ಪಡೆದ 14 ನಿವೇಶನಗಳೂ ಸೇರಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ)ಲೂಟಿಯಾದ ಸಾವಿರಾರು ಕೋಟಿ ಬೆಲೆ ಬಾಳುವ ಐದು ಸಾವಿರಕ್ಕೂ ಹೆಚ್ಚು ನಿವೇಶನಗಳ ಹಗರಣದ ಕುರಿತು ನಾವು ಮೈಸೂರು ಚಲೋ ಬೃಹತ್ ಪಾದಯಾತ್ರೆ ಕೈಗೊಂಡೆವು. ನೀವು ಅದಕ್ಕೆ ಪರ್ಯಾಯವಾಗಿ ನಿಮ್ಮ ಭ್ರಷ್ಟತೆಯ ಮುಖ ಮುಚ್ಚಿಕೊಳ್ಳಲು ಮೈಸೂರಿನಲ್ಲಿ ಭಂಡತನದ ಪ್ರಾಯೋಜಿತ ಸಮಾವೇಶ ಏರ್ಪಡಿಸುತ್ತೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದೀಗ ವಿಧಾನಸೌಧವನ್ನು ಖಾಲಿ ಮಾಡಿ ಮಂತ್ರಿ ಮಹೋದಯರೆಲ್ಲರನ್ನೂ ಕಡ್ಡಾಯವಾಗಿ ಕರೆದುಕೊಂಡು ಹೋಗಿ ಕೋಟಿ ಕೋಟಿ ಖರ್ಚು ಮಾಡಿ ಸಮಾವೇಶಗಳನ್ನು ಸಂಘಟಿಸುತ್ತಿದ್ದೀರಿ. ನೀವು ಮಾಡಿರುವ ಭ್ರಷ್ಟಾತಿ ಭ್ರಷ್ಟ ಹಗರಣಗಳಿಂದ ಕಾನೂನಿನ ಕುಣಿಕೆಗೆ ಸಿಲುಕಿ ಅಧಿಕಾರ ಕಳೆದುಕೊಳ್ಳುವ ಭಯದಿಂದ ಹಾಗೂ ನಿಮ್ಮ ಸ್ವವೈಭವೀಕರಣಕ್ಕಾಗಿ ಸಂಘಟಿಸುತ್ತಿರುವ ಸಮಾವೇಶಗಳು ಜನಕಲ್ಯಾಣ ಎಂದು ಹೇಗೆ ಅರ್ಥೈಸುತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಇದು ಜನ ಕಲ್ಯಾಣ ವಿರೋಧಿ ಸಮಾವೇಶ, ಅಭಿವೃದ್ಧಿ ವಿರೋಧಿ ಸಮಾವೇಶ, ಭ್ರಷ್ಟತೆಯನ್ನು ಸಮರ್ಥಿಸುವ ಸಮಾವೇಶ, ಆತ್ಮವಂಚನೆ ಮಾಡಿಕೊಂಡು ನೈತಿಕತೆಯನ್ನು ಗಾಳಿಗೆ ತೂರಿ ಲಜ್ಜೆಗೆಟ್ಟ ವರ್ತನೆಯ ಪ್ರತೀಕವಾಗಿ ಸಂಘಟಿಸುವ ಇಂತಹ ಸಮಾವೇಶಗಳಿಗೆ ಕಾಲವೇ ಉತ್ತರ ಹೇಳಲಿದೆ ಎಂದು ಎಚ್ಚರಿಸಿದ್ದಾರೆ.

ಇಂತಹ ಸಮಾವೇಶಗಳಿಂದ ನಾಡಿನ ಜನರ ತೆರಿಗೆದಾರರ ಹಣ ಎಷ್ಟು ಪೋಲಾಗುತ್ತಿದೆ? ಸರ್ಕಾರಿ ಯಂತ್ರ ಹಾಗೂ ಮಾನವ ಸಂಪನ್ಮೂಲ ಹೇಗೆ ದುರ್ಬಳಕೆಯಾಗುತ್ತಿದೆ? ಎಂಬುದರ ಬಗ್ಗೆ ಪರಾಮರ್ಶೆ ನಡೆಯಲಿ. ಆಡಳಿತ ಪಕ್ಷ ಸಂಘಟಿಸುವ ಇಂತಹ ಸಮಾವೇಶಗಳು ಎಷ್ಟು ಸಮರ್ಥನೀಯ ಎಂಬುದರ ಬಗ್ಗೆ ಮುಕ್ತ ಚರ್ಚೆಯಾಗಲಿ ಎಂದು ಒತ್ತಾಯಿಸಿದ್ದಾರೆ.
ಬಳ್ಳಾರಿ ಬಾಣಂತಿಯರ ಸಾವು ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷ್ಯ ಎದ್ದು ತೋರುತ್ತಿದೆ. ಘಟನಾ ಸ್ಥಳಕ್ಕೆ ಇದುವರೆಗೂ ಆರೋಗ್ಯ ಸಚಿವರಾಗಲಿ, ವೈದ್ಯಕೀಯ ಶಿಕ್ಷಣ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಭೇಟಿ ನೀಡಿಲ್ಲ ಎಂದು ವಿಜಯೇಂದ್ರ ಖಂಡಿಸಿದ್ದಾರೆ. ಬ್ಲಾಕ್ ಲಿಸ್ಟ್ ಪಟ್ಟಿಯಲ್ಲಿರುವ ಕಂಪನಿಯಿಂದ ಔಷಧಗಳನ್ನು ತರಿಸಿಕೊಳ್ಳುತ್ತಿದ್ದು, ಸರ್ಕಾರ ಈ ವಿಚಾರದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ಅಳುತೈತೆ ಬಾಣಂತಿಯರ ಕುಟುಂಬ-ನಗುತೈತೆ ಕಾಂಗ್ರೆಸ್ ಸರ್ಕಾರ. ಕರ್ನಾಟಕದಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರೆಯುತ್ತಲೇ ಇದೆ, ಆದರೆ ಭ್ರಷ್ಟ ಕಾಂಗ್ರೆಸ್ ಸರ್ಕಾರ ಮಾತ್ರ ಡೋಂಟ್ ಕೇರ್ ಎಂದು ಬಿಜೆಪಿ ಕೂಡ ಟ್ವೀಟ್ನಲ್ಲಿ ವ್ಯಂಗ್ಯ ಮಾಡಿದೆ. ಅದೆಷ್ಟೋ ನವಜಾತ ಶಿಶುಗಳು ತಾಯಿ ಪ್ರೀತಿಯಿಂದ ವಂಚಿತವಾಗುತ್ತಿವೆ. ವಂಶೋದ್ಧಾರಕರು ಜನಿಸಿದ್ದಾರೆ ಎಂದು ಸಂಭ್ರಮಿಸಬೇಕಾಗಿದ್ದ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ.
ಇಷ್ಟಾದರೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅದ್ಯಾವ ಈಜು ಕೊಳದಲ್ಲಿ ರಿಲಾಕ್ಸ್ ಮಾಡುತ್ತಿದ್ದಾರೊ, ಆ ದೇವರೇ ಬಲ್ಲ ಎಂದು ವಾಗ್ದಾಳಿ ನಡೆಸಿದೆ. ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಬೇಜವಾಬ್ದಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಂಪುಟದಿಂದ ವಜಾ ಮಾಡಿ, ಬಾಣಂತಿಯರ ಸರಣಿ ಸಾವನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದೆ.












Click it and Unblock the Notifications