ಸ್ವತಃ ದಂಪತಿಗಳೇ ಶಾಸಕರಾಗಿದ್ದಾರೆ ಹೊರತಾಗಿ ಜಿಲ್ಲೆಗೆ ಬೇರೇನು ಮಾಡಿದ್ದೀರಿ? ಹೆಚ್ಡಿಕೆ ಗೆ ಬಿಜೆಪಿ ಪ್ರಶ್ನೆ.
ಬೆಂಗಳೂರು,ಜನವರಿ 2: ಸದಾ ಕಾಲ ಸದಾರಮೆ ನಾಟಕವಾಡುವ ಎಚ್.ಡಿ.ಕುಮಾರಸ್ವಾಮಿ ಅವರು ಕನ್ನಡಿಗರ ಬಗ್ಗೆ ಎಷ್ಟು ಕಾಳಜಿ ತೋರಿದ್ದಾರೆ ಅನ್ನೋದು ಎಲ್ಲರಿಗೂ ಅರಿವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ದ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಸರಣಿ ಟ್ವೀಟ್ ನಡೆಸಿರುವ ಬಿಜೆಪಿ, ಮಂಡ್ಯದ ಜನತೆಯಂತೂ ಇದಕ್ಕೆ ಖುದ್ದು ಸಾಕ್ಷಿ. ಮಂಡ್ಯದ ಮೈಶುಗರ್ ಮುಚ್ಚಿದ ಕಥೆ, 8000 ಕೋಟಿ ರೂ.ಗಳ ಮೊತ್ತದ ಯೋಜನೆಗಳ ಗಾಳಿಪಟ ಹಾರಿಸಿದ ಕಥೆ - ಇವುಗಳ ನೈಜ ಚಿತ್ರಣದ ಅರಿವಿರದ ಕನ್ನಡಿಗರೇ ಇಲ್ಲ ಎಂದು ಕಿಡಿಕಾರಿದೆ.
ಹಾಸನದಲ್ಲಿ ಅಣ್ಣ, ಮಂಡ್ಯದಲ್ಲಿ ಮಗ, ರಾಮನಗರದಲ್ಲಿ ಖುದ್ದು ದಂಪತಿಗಳು ಕೋಟೆ ಕಟ್ಟಿ ಮೆರೆಯುವ ಹುನ್ನಾರದಲ್ಲಿ, ಕಾರ್ಯಕರ್ತರಿಗೆ ಕ್ಯಾ-ರೇ ಎನ್ನದಿರುವುದು, ಹೆಗಲು ಕೊಟ್ಟ ಕಾರ್ಯಕರ್ತರಿಗೆ ಕೈ ಕೊಟ್ಟಿದ್ದು ಎಲ್ಲವನ್ನು ಜನ ಕಂಡಿದ್ದಾರೆ. ಮಂಡ್ಯ, ರಾಮನಗರದ ಅವರದೆ ಪಕ್ಷದ ಕಾರ್ಯಕರ್ತರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕನ್ನಡಿಗರಂತೆ ತೋರುವುದಿಲ್ಲವೇ? ಎಂದು ಪ್ರಶ್ನಿಸಿದೆ.

ಈ ಮೂರೂ ಜಿಲ್ಲೆಗಳಲ್ಲೂ ಮೆಗಾ ಡೈರಿ ಇದ್ದದ್ದು ಹಾಸನದಲ್ಲಿ ಮಾತ್ರ. ಅದೂ ಬಿಜೆಪಿ ಸರ್ಕಾರದ ಕೊಡುಗೆ. ಮಂಡ್ಯದಲ್ಲಿ ನಮ್ಮ ಸರ್ಕಾರ ಮೊನ್ನೆಯಷ್ಟೇ ಮೆಗಾ ಡೈರಿಯನ್ನು ಉದ್ಘಾಟಿಸಿದೆ. "ನಂದಿನಿ" ವಿಲೀನದ ಬಗ್ಗೆ ಯಾರೂ ಏನು ಹೇಳದಿದ್ದರೂ, ಯಾವತ್ತೂ ಇಲ್ಲದ ಕನ್ನಡ ಪ್ರೇಮ ತೋರಿಸಲು ಎಚ್.ಡಿ.ಕುಮಾರಸ್ವಾಮಿ ಅವರು ಸುಳ್ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದೆ.
MANMULನಲ್ಲಿ ಜೆಡಿಎಸ್ ನಾಯಕರದ್ದೇ ಕಾರುಬಾರಂತೆ! ಅಲ್ಲಿನ ತಾಂಡವವಾಡುತ್ತಿರುವ ಅವ್ಯವಹಾರಗಳ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದಿವ್ಯ ಮೌನ ವಹಿಸಿದ್ದಾರೆ. ಮೈಶುಗರ್ ಸಕ್ಕರೆ ಕಾರ್ಖಾನೆಗೆ ಬೀಗ ಜಡಿದು ಮಂಡ್ಯದ ಲಕ್ಷಾಂತರ ಜನರ ಹೊಟ್ಟೆಯ ಮೇಲೆ ಹೊಡೆದವರು ಎಚ್.ಡಿ.ಕುಮಾರಸ್ವಾಮಿ ಅರವರಲ್ಲವೇ? ಎಂದು ಪ್ರಶ್ನಿಸಿದೆ.
2019ರ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸೋಲುವ ಮುನ್ನ ಚುನಾವಣಾ ಗಿಮಿಕ್ ಆಗಿ ಘೋಷಿಸಿದ್ದ 8,000 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳು ಮಂಡ್ಯದ ಜನರ ದಿಕ್ಕುತಪಿಸುಲು ಎಚ್.ಡಿ.ಕುಮಾರಸ್ವಾಮಿಯವರು ನೀರಿನ ಮೇಲೆ ಗೀಚಿದ ಅಕ್ಷರಗಳು. ಇದು ಸ್ವಾಭಿಮಾನಿ ಮಂಡ್ಯದ ಕನ್ನಡಿಗರಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ಅವಮಾನ ಎಂದು ಟ್ವೀಟ್ ಮಾಡಿದೆ.

ನಮ್ಮ ಸರ್ಕಾರ ರಾಮನಗರಕ್ಕೆ ವಿಶ್ವದರ್ಜೆಯ ರೇಷ್ಮೆ ಮಾರುಕಟ್ಟೆ, ಮಾಗಡಿಯಲ್ಲಿ ಕರ್ನಾಟಕ ಸಂಸ್ಕೃತ ವಿವಿಯ ಹೊಸ ಆವರಣ ಕೊಟ್ಟಿದೆ. ರಾಮನಗರವನ್ನು ಸ್ವಂತ ರಾಜಕೀಯ ಲಾಭಕ್ಕಾಗಿ ಜಿಲ್ಲೆಯಂದು ಘೋಷಿಸಿ ಬಿಡದಿಯಲ್ಲಿ ಐಷಾರಾಮಿ ಜೀವನ ಸಾಗಿಸುತ್ತ, ಸ್ವತಃ ದಂಪತಿಗಳೇ ಶಾಸಕರಾಗಿದ್ದಾರೆ ಹೊರತಾಗಿ ಜಿಲ್ಲೆಗೆ ಬೇರೇನು ಮಾಡಿದ್ದೀರಿ? ಎಂದು ಪ್ರಶ್ನಿಸಿದೆ.
ನಮ್ಮ ಸರ್ಕಾರ ರಾಮನಗರದ ರಾಮದೇವರಬೆಟ್ಟದಲ್ಲಿ ಅಯೋಧ್ಯೆ ಮಾದರಿಯಂತೆ ಶ್ರೀ ರಾಮಚಂದ್ರನ ದೇವಸ್ಥಾನವನ್ನು ನಿರ್ಮಿಸಲಿದೆ. ಮಾಗಡಿ ಕೆಂಪಾಪುರದಲ್ಲಿ ಕೆಂಪೇಗೌಡರ ಸ್ಮಾರಕ, ಮಾಗಡಿ ವೀರಾಪುರದಲ್ಲಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಸ್ಮಾರಕ ಮತ್ತು ಮಾಗಡಿ ಬಾನಂದೂರಿನಲ್ಲಿ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸ್ಮಾರಕ ನಿರ್ಮಿಸಲಿದೆ.
ಈ ಮಹನೀಯರನ್ನು ಎಂದಿಗೂ ನೆನೆಯದೆ, ಕನ್ನಡ ದ್ವೇಷಿ ಟಿಪ್ಪು ಸುಲ್ತಾನನ ಹೆಸರಿನಲ್ಲಿ ವಿಶ್ವವಿದ್ಯಾಲಯ ತೆರಿಯಲಿದ್ದೇವೆ ಎಂದು ಘೋಷಿಸುವ ಮೂಲಕ ಕನ್ನಡ ಕುಲ ಕೋಟಿಯ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ. ಇಷ್ಟೆಲ್ಲಾ ಹಳವಂಡ ಮಾಡಿಕೊಂಡಿರುವ ಎಚ್.ಡಿ.ಕುಮಾರಸ್ವಾಮಿ ಯವರು ಕಟ್ಟಾಳು ಎಂಬ ಹುಂಬತನದ ಭ್ರಮಾಲೋಕದಿಂದ ವಾಸ್ತವಕ್ಕೆ ಬರಬೇಕು ಎಂದು ಬಿಜೆಪಿ ಟ್ವೀಟ್ ಮಾಡಿದೆ.












Click it and Unblock the Notifications