ಕಾಂಗ್ರೆಸಿನ ಇತಿಹಾಸ ಪ್ರಜ್ಞೆ ಪ್ರಧಾನಮಂತ್ರಿ ಬದಲಾದಂತೆ ಬದಲಾಗುವುದೇ?: ಬಿಜೆಪಿ ಪ್ರಶ್ನೆ
ಬೆಳಗಾವಿ, ಡಿಸೆಂಬರ್ 19: ಒಂದು ಸಮುದಾಯದ ಓಲೈಕೆಯಲ್ಲೇ ನಿರತರಾಗಿರುವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಟಿಪ್ಪು, ಶಾರಿಕ್ ನಂಥವರೇ ದೇವರಾಗಿದ್ದಾರೆಯೇ ವಿನಾ, ದಲಿತರಿಗೂ ಪತಿತ ಪಾವನ ಮಂದಿರ ಕೊಟ್ಟ ಸಾವರ್ಕರ್ ದೇವರಾಗಲಿಲ್ಲ . ಸಮಾಜವಾದಿ ಸಿದ್ದರಾಮಯ್ಯ ಈಗೆಲ್ಲಿ ಹೋದರು..? ಎಂದು ಬಿಜೆಪಿ ಟ್ವೀಟರ್ ಮೂಲಕ ಪ್ರಶ್ನಿಸಿದೆ.
ಈ ಕುರಿತು ಸಗರಣಿ ಟ್ವೀಟ್ ಮಾಡಿರುವ ಬಿಜೆಪಿ, 1970 ರಲ್ಲಿ ಇಂದಿರಾ ಗಾಂಧಿ ಸರ್ಕಾರ ವೀರ ಸಾವರ್ಕರ್ ಅಂಚೆ ಚೀಟಿ ಬಿಡುಗಡೆ ಮಾಡಿತ್ತು. ಸಾವರ್ಕರ್ ಕುರಿತು ಡಾಕ್ಯುಮೆಂಟರಿ ನಿರ್ಮಾಣಕ್ಕಾಗಿ ಸಾವರ್ಕರ್ ಸ್ಮಾರಕ ಸಮಿತಿಗೆ ಸ್ವತಃ ಇಂದಿರಾ ಗಾಂಧಿ ದೇಣಿಗೆ ನೀಡಿದ್ದರು. ಕಾಂಗ್ರೆಸಿನ ಇತಿಹಾಸ ಪ್ರಜ್ಞೆ ಪ್ರಧಾನಮಂತ್ರಿ ಬದಲಾದಂತೆ ಬದಲಾಗುವುದೇ? ಎಂದು ಪ್ರಶ್ನಿಸಿದೆ.
ಸಾವರ್ಕರ್ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಖುದ್ದು ಸಾವರ್ಕರ್ ಹೋರಾಟವನ್ನು ಕೊಂಡಾಡಿ ಅವರೊಬ್ಬ ಅದ್ಭುತ ಸ್ವಾತಂತ್ರ್ಯ ಹೋರಾಟಗಾರ ಎಂದು ಶ್ಲಾಘಿಸಿ ಪತ್ರ ಬರೆದಿದ್ದರು. ಇದರ ಜೊತೆಗೆ ವೀರ್ ಸಾವರ್ಕರ್ ಸ್ಮಾರಕ ನಿಧಿಗೆ ವೈಯುಕ್ತಿಕವಾಗಿ 11,000 ರೂಪಾಯಿ ದೇಣಿಗೆ ಕೂಡಾ ನೀಡಿದ್ದರು. ಸಾವರ್ಕರ್ ಅಸ್ಪೃಶ್ಯತಾ ನಿವಾರಣೋಪಾಯಗಳು ಅಂಬೇಡ್ಕರ್ ಅವರಿಗೆ ಪ್ರೇರಣೆಯಾಗಿತ್ತು, ಆದರೆ ಕಾಂಗ್ರೆಸ್ಸಿಗರಿಗೆ ಆಗಲೇ ಇಲ್ಲ! ʼಅಸ್ಪೃಶ್ಯತೆ ನಿವಾರಿಸಲು ನನ್ನ ಆಶಯಕ್ಕನುಗುಣವಾಗಿ ಸಮಾಜದೊಳಗಿದ್ದು ಶ್ರಮಿಸುತ್ತಿರುವ ಕೆಲವೇ ಕೆಲವು ಮಂದಿಯಲ್ಲಿ ಸಾವರ್ಕರ್ ಕೂಡಾ ಒಬ್ಬರುʼ ಎಂದು ಅಂಬೇಡ್ಕರ್ ಕೊಂಡಾಡಿದ್ದರು ಎಂಪದು ಬಿಜೆಪಿ ಟ್ವೀಟ್ ಮಡಿದೆ.

ತಾಯಿ ಭಾರತಿಗೆ ಕನ್ನಡದಾರತಿ ಎತ್ತುವೆ ಎಂದ ಆಲೂರು ವೆಂಕಟರಾಯರಿಗೆ, ಭಾರತ ಜನನಿಯ ತನುಜಾತೆ ಎಂದ ಕುವೆಂಪುರವರಿಗೆ, ಭಾಷೆಯಲ್ಲ, ಕಾವ್ಯವೇ ನವಮೇಘರೂಪ ಎಂದ ಬೇಂದ್ರೆಯವರಿಗೆ ಪ್ರೇರಣೆಯಾದವರು ಸಾವರ್ಕರ್. ಅಂಥಹ ವೀರ ಸಾವರ್ಕರ್ ಅವರು ಕಾಂಗ್ರೆಸ್ಸಿಗೆ ಮಾತ್ರ ವರ್ಜ್ಯವಾಗುವುದೇಕೆ? ಸಿಂಗಾಪುರದ "ಫ್ರೀ ಇಂಡಿಯಾ ರೇಡಿಯೋ" ಭಾಷಣದಲ್ಲಿ ನೇತಾಜಿ, "ರಾಜಕೀಯ ಪ್ರಬುದ್ಧತೆಯಿಲ್ಲದ ಕಾಂಗ್ರೆಸ್ ಸೈನಿಕರನ್ನು ಹಣಕ್ಕಾಗಿ ಮಾರಿಕೊಂಡವರು ಎಂದು ಹೀಗಳೆಯುತ್ತಿರುವಾಗ ಸಾವರ್ಕರ್ ಸೇನೆಗೆ ಸೇರಿ ಎನ್ನುತ್ತಿರುವುದು ಸ್ಫೂರ್ತಿದಾಯಕ" ಎಂದಿದ್ದರು.
ಸಾವರ್ಕರ್ ನಿಂದಕರೆಲ್ಲರೂ ನೇತಾಜಿ ನಿಂದಕರೂ ಆಗಿದ್ದಾರೇಕೆಂದು ಈಗ ತಿಳಿಯಿತೇ? ಕಾಂಗ್ರೆಸ್ ಇಂದು ಸಾವರ್ಕರ್ರನ್ನು ವಿರೋಧಿಸಬಹುದು. ಆದರೆ ಸಾವರ್ಕರ್ರನ್ನು ಅಪಾರವಾಗಿ ಪ್ರೀತಿಸುವವರು, ಗೌರವಿಸುವವರ ಸಾಲಲ್ಲಿ ಗಾಂಧೀಜಿಯೂ ನಿಲ್ಲುತ್ತಾರೆ. ಗಾಂಧೀಜಿ ಪತ್ರಗಳಲ್ಲಿ ಸಾವರ್ಕರ್ರನ್ನು ಪ್ರೀತಿಯಿಂದ ʼಭಾಯ್ʼ ಎಂದು ಸಂಬೋಧಿಸುತ್ತಿದ್ದರು.
ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರೇ, ಸಾವರ್ಕರ್ ಅವರನ್ನು ಓದುವುದು ಬೇಡ. ಕೇವಲ ನಿಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಮಾತನ್ನು ನೀವು ಅರ್ಥ ಮಾಡಿಕೊಂಡಿದ್ದರೂ, ಸಾವರ್ಕರ್ ಅವರ ಭಾವಚಿತ್ರಕ್ಕೆ ನೀವೇ ಹಾರ ಹಾಕುತ್ತಿದ್ದಿರೇನೋ! ಮಸ್ತಕದಲ್ಲೂ ಏನಿಲ್ಲ, ಪುಸ್ತಕವೂ ಓದಲ್ಲ ಎನ್ನುವವರಿಗೆ ಏನೆನ್ನೋಣ? ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಅಂಡಮಾನಿನ ಕತ್ತಲ ಕೋಣೆಯಲ್ಲಿ ವೀರ ಸಾವರ್ಕರ್ ಕಾಲ ಕಳೆಯದಿರುತ್ತಿದ್ದರೆ, ಅವರ ಚಿಂತನೆಗಳು ರಾಷ್ಟ್ರದಲ್ಲಿ ಹರಿಯದಿರುತ್ತಿದ್ದರೆ ಭಾರತ 1947 ರಲ್ಲಿ ಸ್ವತಂತ್ರವಾಗುತ್ತಲೂ ಇರಲಿಲ್ಲ, ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತಲೂ ಇರಲಿಲ್ಲ. ಅಂದು ವೀರ ಸಾವರ್ಕರ್ ಕತ್ತಲ ಕೋಣೆಯಲ್ಲಿ ಕಾಲ ಕಳೆಯದಿರುತ್ತಿದ್ದರೆ, ಇಂದು ವಿರೋಧಿಸುವವರಿಗೆ ಧ್ವನಿಯೇ ಇರುತ್ತಿರಲಿಲ್ಲ. ಇಂದಿನ ಆಡಳಿತದ ಯಾವ ಸಂಕೇತಗಳೂ ಇರುತ್ತಿರಲಿಲ್ಲ.
ಅರ್ಜುನನನ್ನು ಶಂಕಿಸಬಹುದು. ಆದರೆ ಗಾಂಢೀವವನ್ನು ಶಂಕಿಸಬಹುದೇ? ಎಂದು ಪ್ರಶ್ನಿಸಿದೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್ ಗೆ ಜನರಿಗಿಂತ ನಿಮ್ಹಾನ್ಸ್ ಆಸ್ಪತ್ರೆಯ ನುರಿತ ಮನೋವೈದ್ಯರ ಅವಶ್ಯಕತೆ ಹೆಚ್ಚಾಗಿದೆ. ಪರದೇಶಿ ಟಿಪ್ಪುವನ್ನು ಹೊಗಳುವವರು, ದೇಶಪ್ರೇಮಿ ಸಾವರ್ಕರ್ ಫೋಟೊ ಕಂಡರೂ ಉರಿದು ಬೀಳುವವರು ಒಂದೋ ದೇಶವಿರೋಧಿಯಾಗಿರಬೇಕು ಅಥವಾ ಮಾನಸಿಕ ಅಸ್ವಸ್ಥರಾಗಿರಬೇಕು ಎಂದು ಕಿಡಿಕಾರಿದೆ.












Click it and Unblock the Notifications