Praja Dhwani Bus Yatra: ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಸಂಪೂರ್ಣ ವಿಫಲವಾಗಿವೆ: ಡಿ.ಕೆ.ಶಿವಕುಮಾರ್
ಬೆಳವಾಗಿ,ಜನವರಿ11: ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಸಂಪೂರ್ಣ ವಿಫಲವಾಗಿವೆ. ನವಕರ್ನಾಟಕಕ್ಕೆ ಹೊಸ ಭರವಸೆಗಳನ್ನು ನೀಡುತ್ತಿದ್ದೇವೆ. ನಮ್ಮ ಕರ್ನಾಟಕಕ್ಕೆ ನಮ್ಮ ವಚನ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮ ಕರ್ನಾಟಕಕ್ಕೆ ನಮ್ಮ ವಚನ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಇದುವರೆಗೂ ಏನಾಗಿದೆ, ನಾವು ಮುಂದೆ ಏನು ಮಾಡುತ್ತೇವೆ ಎಂಬುದುನ್ನು ತಿಳಿಸುವುದು ಈ ಪ್ರಜಾಧ್ವನಿ ಯಾತ್ರೆಯ ಉದ್ದೇಶವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರ ಬಸ್ ಯಾತ್ರೆ ಶೈಕ್ಷಣಿಕ ಪ್ರವಾಸ; ಬಿಜೆಪಿ ವ್ಯಂಗ್ಯ
ಕರ್ನಾಟಕ ರಾಜ್ಯದ ಬದಲಾವಣೆಗೆ ನಾಂದಿ ಹಾಡುವ ದಿನ ಇಂದು. ಮಹಾತ್ಮ ಗಾಂಧಿ ಅವರು ಬ್ರಿಟೀಷರನ್ನು ದೇಶದಿಂದ ಹೊರಗೊಡಿಸಲು ಈ ಭೂಮಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ವಹಿಸಿಕೊಂಡರು. ನಾವು ಈ ಕೆಟ್ಟ ಸರ್ಕಾರದ ಕೊಳೆಯನ್ನು ಇಲ್ಲಿನ ಗಾಂಧಿ ಬಾವಿಯ ಜಲದಿಂದ ತೊಳೆಯಲು ಈ ಯಾತ್ರೆ ಆರಂಭಿಸಿದ್ದೇವೆ. ಗಾಂಧೀಜಿ ಅವರು ಇಲ್ಲಿಂದ ಹೋರಾಟ ಆರಂಭಿಸಿದ ನಂತರ ನಮಗೆ ಪ್ರಜಾಪ್ರಭುತ್ವ ಸಿಕ್ಕಿ, ದೇಶ ಅಭಿವೃದ್ಧಿಶೀಲ ರಾಷ್ಟ್ರವಾಗಿದೆ. ಕಾಂಗ್ರೆಸ್ 60 ಕ್ಕೂ ಹೆಚ್ಚು ವರ್ಷಗಳ ಕಾಲ ಆಡಳಿತ ಮಾಡಿದೆ. ಪ್ರತಿ ಹಂತದಲ್ಲಿ ನಾವು ಜನರ ಬದುಕಿಗೆ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಿಂದ ರಾಜ್ಯ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕಳಂಕ ತಂದಿದೆ. ಈ ಕಳಂಕ ನಿರ್ಮೂಲನೆ ಮಾಡಬೇಕು. ಜನರ ಅಭಿಪ್ರಾಯಕ್ಕೆ ಸ್ಪಂದಿಸಿ, ಪ್ರಜೆಗಳ ಧ್ವನಿ ತಿಳಿಸಲು ನಾವು ಈ ಐತಿಹಾಸಿಕ ಸ್ಥಳದಿಂದ ನಮ್ಮ ಪ್ರಜಾಧ್ವನಿ ಯಾತ್ರೆ ಆರಂಭಿಸುತ್ತಿದ್ದೇವೆ. ಇಂದು ಆರಂಭವಾಗಲಿರುವ ಯಾತ್ರೆ ಈ ತಿಂಗಳು ಜಿಲ್ಲಾ ಕೇಂದ್ರಗಳಲ್ಲಿ ಪ್ರವಾಸ ಮಾಡಲಿದೆ. ನಂತರ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡುತ್ತೇವೆ. ಪ್ರಮುಖ ನಾಯಕರು ಬಸ್ ನಲ್ಲಿ ತೆರಳುತ್ತೇವೆ. ಎಲ್ಲ ನಾಯಕರು ಬಸ್ ನಲ್ಲಿ ಸಾಗಲು ಸಾಧ್ಯವಿಲ್ಲ. ಆಯಾ ಸ್ಥಳಕ್ಕೆ ಹೋದಾಯ ಕೆಲ ನಾಯಕರು ನಮ್ಮನ್ನು ಸೇರಿಕೊಳ್ಳುತ್ತಾರೆ. 20 ಜಿಲ್ಲೆಗಳಲ್ಲಿ ನಾನು, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಹೆಚ್.ಕೆ ಪಾಟೀಲ್, ಆ ಭಾಗದ ಶಾಸಕರು ಇರುತ್ತಾರೆ. ಕೆಲವರು ಕಾರ್ಯಕ್ರಮ ಆಯೋಜನೆಯಲ್ಲಿ ನಿರತರಾಗಿರುತ್ತಾರೆ.
ಹೊಸಬರಿಗೆ ಟಿಕೆಟ್ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹೊಸಬರ ಬಗ್ಗೆ ನಾವು ಆಲೋಚನೆ ಮಾಡುತ್ತೇವೆ. ಹೊಸ ನೀರು, ಹೊಸ ಚಿಗುರು ಬಗ್ಗೆ ಕಾಂಗ್ರೆಸ್ ಸದಾ ಆಲೋಚನೆ ಮಾಡುತ್ತಿರುತ್ತದೆ. ನಮ್ಮ ಯಾತ್ರೆ ಜನರ ಬದುಕಿನಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ತಿಳಿಸಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹೇಗೆ ಸಂವಿಧಾನ, ಕಾನೂನು ರಕ್ಷಣೆ ಮಾಡಿದೆ. ಜನರಿಗೆ ಕಾರ್ಯಕ್ರಮ ನೀಡಿದೆ. ಅವರ ಬದುಕಿನಲ್ಲಿ ಹೇಗೆ ಬದಲಾವಣೆ ತಂದಿದೆ ಎಂಬುದನ್ನು ತಿಳಿಸಲಿದೆ. ಅನೇಕ ಸಂಸ್ಥೆಗಳನ್ನು ಕಟ್ಟಿ, ಉದ್ಯೋಗ ಸೃಷ್ಟಿ ಮಾಡಿದೆ. ಬಿಜೆಪಿ ಎಲ್ಲವನ್ನು ಖಾಸಗಿಗೆ ಮಾರುತ್ತಿವೆ. ಇದನ್ನು ನಾವು ಜನರಿಗೆ ತಿಳಿಸಬೇಕು. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಮಾತು ಕೊಟ್ಟರು. ಎಲ್ಲ ಬೆಲೆಗಳು ಹೆಚ್ಚಾಗಿ ಯಾರ ಆದಾಯವೂ ಡಬಲ್ ಆಗಿಲ್ಲ. ಯುವಕರು, ಮಹಿಳೆಯರು ಯಾರಿಗೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೇಲೆ ವಿಶ್ವಾಸ ಇಡಿ, ನಾವು ಶಕ್ತಿ ಮೀರಿ ನವ ಕರ್ನಾಟಕ ನಿರ್ಮಾಣಕ್ಕೆ ವಚನ ನೀಡುತ್ತೇವೆ' ಎಂದು ಭರವಸೆ ನೀಡುತ್ತೇವೆ ಎಂದರು.
ಪಕ್ಷದ ಸಮೀಕ್ಷೆಯಲ್ಲಿ ಕೆಲ ಹಾಲಿ ಶಾಸಕರಿಗೆ ಸೋಲುವ ಭೀತಿ ಇದೆಯೇ ಎಂಬ ಬಗ್ಗೆ ಕೇಳಿದಾಗ, 'ಅದೆಲ್ಲವೂ ಸುಳ್ಳು' ಎಂದರು. ಇನ್ನೂ ಮೆಟ್ರೋ ಪಿಲ್ಲರ್ ದುರಂತದ ವಿಚಾರವಾಗಿ ಮುಖ್ಯಮಂತ್ರಿಗಳು ಕಾಂಗ್ರೆಸ್ ಸರ್ಕಾರದ ದುರಂತ ನೋಡಿದರೆ ಅದು 100% ಕಮಿಷನ್ ಸರ್ಕಾರ, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎಂದು ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, 'ಅವರು ವಿರೋಧ ಪಕ್ಷದಲ್ಲಿದ್ದಾಗ ಈ ವಿಚಾರಗಳ ಬಗ್ಗೆ ಧ್ವನಿ ಎತ್ತಲಿಲ್ಲ ಯಾಕೆ? ಅವರು ಈಗ ನೀಡುತ್ತಿರುವ ಹೇಳಿಕೆ ರಾಜ್ಯಕ್ಕೆ ನಾಚಿಕೆ ತರುವಂತಿದೆ. ಅವರು ಜನರ ಭಾವನೆ ಅರ್ಥ ಮಾಡಿಕೊಂಡು ಹೊಣೆಗಾರಿಕೆ ಹೊತ್ತುಕೊಳ್ಳಬೇಕು. ಈ ರೀತಿಯ ಸಮರ್ಥನೆ ಸರಿಯಲ್ಲ. ಈ ಸರ್ಕಾರ ಬಿ ರಿಪೋರ್ಟ್ ಬರೆಯುವುದರಲ್ಲೇ ಕಳೆದು ಹೋಗಿದ್ದು, ಇದೊಂದು ಬಿ ರಿಪೋರ್ಟ್ ಸರ್ಕಾರ. ಕೆಲಸಕ್ಕಾಗಿ ಮಂಚಕ್ಕೆ ಕರೆದ ಹಗರಣದಿಂದ ನೇಮಕಾತಿ, ಗುತ್ತಿಗೆದಾರರ ಹಗರಣ ಸೇರಿದಂತೆ ಎಲ್ಲ ಪ್ರಕರಣದಲ್ಲಿ ಸರ್ಕಾರ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಈ ಪ್ರಕರಣದಲ್ಲೂ ತಾಂತ್ರಿಕ ವಿಚಾರ ಇಟ್ಟುಕೊಂಡು ಶಿಕ್ಷೆಗೆ ಒಳಗಾಗಬೇಕಾದವರನ್ನು ರಕ್ಷಣೆ ಮಾಡುತ್ತಾರೆ' ಎಂದು ತಿಳಿಸಿದರು.
ಪಿಲ್ಲರ್ ದುರಂತ ವಿಚಾರವಾಗಿ ಐವರ ಮೇಲೆ ಎಫ್ಐಆರ್ ದಾಖಲಾಗಿದ್ದು, ಈ ಐವರು ಯಾರೆಂದೂ ಯಾರಿಗೂ ತಿಳಿದಿಲ್ಲ ಎಂಬ ಪ್ರಶ್ನೆಗೆ, 'ಇದು ಈ ಸರ್ಕಾರಕ್ಕಿರುವ ಸ್ಪಷ್ಟತೆ. ಇದು ಬಿಜೆಪಿ ಸರ್ಕಾರದ ದೃಷ್ಟಿಕೋನ, ಇದೇ ಸರ್ಕಾರದ ಸಂದೇಶ' ಎಂದರು.
ಮುಖ್ಯಮಂತ್ರಿಗಳ ರಾಜೀನಾಮೆ ಕೇಳುತ್ತೀರಾ ಎಂಬ ಪ್ರಶ್ನೆಗೆ, 'ಅವರು ತನಿಖೆ ನಡೆಯುವ ಮುನ್ನವೇ ಕ್ಲೀನ್ ಚಿಟ್ ನೀಡುತ್ತಾರೆ' ಎಂದು ಟೀಕಿಸಿದರು.
ಮುಸಲ್ಮಾನರ ವಿಚಾರವಾಗಿ ಆರ್ ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರ ಹೇಳಿಕೆ ವಿಚಾರವಾಗಿ ಮಾತನಾಡಿ, 'ಅವರ ಅಜೆಂಡಾ ಸಮಾಜವನ್ನು ಒಡೆಯುವುದು. ನಮ್ಮ ಅಜೆಂಡಾ ದೇಶವನ್ನು ಒಗ್ಗೂಡಿಸುವುದು. ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ' ಎಂದರು.