ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆಗೆ ಬಿಜೆಪಿ, ಜೆಡಿಎಸ್ ಸಿದ್ಧತೆ
ಬೆಂಗಳೂರು, ಜೂನ್ 26: ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಮಾತ್ರ ಅವಧಿಪೂರ್ವ ಚುನಾವಣೆಗೆ ತಯಾರಿ ನಡೆಸುತ್ತಿವೆ. ಡಿಸೆಂಬರಿನಲ್ಲಿ ಅವಧಿಪೂರ್ಣ ಚುನಾವಣೆ ನಡೆಯಬಹುದು ಎಂಬುದು ಆ ಪಕ್ಷಗಳ ಲೆಕ್ಕಾಚಾರವಾಗಿದೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವುದಿಲ್ಲ. ನಿಗದಿಯಂತೆ ಏಪ್ರಿಲ್ ಮೇನಲ್ಲೇ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ. ಚುನಾವಣೆಗೂ ಮೊದಲೇ ವಿಪಕ್ಷಗಳು ಸೋಲೊಪ್ಪಿಕೊಂಡಿವೆ ಅಂತ ಅವರು ಬಿಜೆಪಿ ಮತ್ತು ಜೆಡಿಎಸ್ ನ ಕಾಲೆಳೆದಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹಲವಾರು ಬಾರಿ ಹೇಳಿದ್ದಾರೆ.

ಕಾಂಗ್ರೆಸ್ ರಣತಂತ್ರವೇ?
ಕರ್ನಾಟಕದಲ್ಲಿ ಚುನಾವಣೆ ನಡೆಯುವ ಹೊತ್ತಲ್ಲೇ ಬೇರೆ ರಾಜ್ಯಗಳಲ್ಲೂ ಚುನಾವಣೆ ನಡೆಯಲಿದೆ. ಅವೆಲ್ಲಾ ಬಿಜೆಪಿ ಆಡಳಿತವಿರುವ ರಾಜ್ಯಗಳು. ಹಾಗಾಗಿ ಮೋದಿ ಅಲೆಯೇನಾದರೂ ಕೆಲಸ ಮಾಡುವುದು ಬೇಡ ಎಂಬ ಕಾರಣಕ್ಕೆ ಕಾಂಗ್ರೆಸ್ ಅವಧಿ ಪೂರ್ವ ಚುನಾವಣೆಗೆ ಹೋಗಲಿದೆ ಎಂಬ ಸಂಶಯಗಳು ವಿಪಕ್ಷಗಳ ನಾಯಕರನ್ನು ಕಾಡುತ್ತಿವೆ.

ಕಾಂಗ್ರೆಸ್ ಸಿದ್ಧತೆ - ಬಿಎಸ್ವೈ
ಅವಧಿ ಪೂರ್ವ ಚುನಾವಣೆಯ ವರದಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿ ಹಾಕಿದರೂ ಯಡಿಯೂರಪ್ಪ ಮಾತ್ರ ಮತ್ತೆ ಮತ್ತೆ ಕಾಂಗ್ರೆಸ್ ಸರಕಾರ ಅವಧಿ ಪೂರ್ವ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳುತ್ತಿದ್ದಾರೆ.
"ಕಾಂಗ್ರೆಸ್ ಹೊಸ ಉಸ್ತುವಾರಿ ಕೆಸಿ ವೇಣುಗೋಪಾಲ್ ಚಟುವಟಿಕೆ ನೋಡಿದರೆ ಕಾಂಗ್ರೆಸ್ ಡಿಸೆಂಬರ್ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬುದು ಅರ್ಥವಾಗುತ್ತದೆ. ಶಾಸಕರಿಗೆ ಕ್ಷೇತ್ರದ ಕಡೆಗೆ ಗಮನ ಹರಿಸಲು ಹೇಳಲಾಗಿದೆ. ಅಧಿಕಾರಿಗಳ ಮೇಲೆ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಕ್ಕೆ ತರುವ ಒತ್ತಡ ಹೇರಲಾಗಿದೆ. ಈ ರೀತಿಯ ತಕ್ಷಣದ ಬದಲಾವಣೆಯಿಂದ ಡಿಸೆಂಬರಿನಲ್ಲಿ ಚುನಾವಣೆ ನಡೆಯಬಹುದು ಎಂಬುದು ನನ್ನ ಲೆಕ್ಕಾಚಾರವಾಗಿದೆ. ನಾವು ಇದಕ್ಕೆ ಸಿದ್ಧವಾಗಿದ್ದೇವೆ," ಎಂದು ಯಡಿಯೂರಪ್ಪ ಹೇಳಿದ್ದಾರೆ. ವಿಪಕ್ಷಗಳನ್ನು ಸೋಲಿಸುವ ಕಾಂಗ್ರೆಸ್ ತಂತ್ರ ಫಲಿಸದು ಎಂದು ಅವರು ಹೇಳಿದ್ದಾರೆ.

ಇಲ್ಲವೇ ಇಲ್ಲ
ಆದರೆ ಭಾನುವಾರ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, "ಅವಧಿಪೂರ್ವ ಚುನಾವಣೆಯ ಸಾಧ್ಯತೆ ಇಲ್ಲ. ಏಪ್ರಿಲ್ ಅಥವಾ ಮೇ 2018ರಲ್ಲೇ ಚುನಾವಣೆ ನಡೆಯಲಿದೆ. ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಕಾಂಗ್ರೆಸ್ ಜಾತಿ ಸಮೀಕ್ಷೆಯನ್ನು ಕೈಯಲ್ಲಿಟ್ಟುಕೊಂಡಿದ್ದು ಅದನ್ನು ಚುನಾವಣೆಗೂ ಮುನ್ನ ಬಹಿರಂಗಗೊಳಿಸುವ ಸಾಧ್ಯತೆ ಇದೆ. ಇನ್ನು ಬಿಜೆಪಿ ಮತ್ತು ಜೆಡಿಎಸ್ ಕೂಡಾ ಸರಕಾರ ದಲಿತರ ಮತ್ತು ಹಿಂದುಳಿದ ವರ್ಗದ ಮತಗಳನ್ನು ಸೆಳೆಯಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿವೆ ಎಂದೂ ಆರೋಪಿಸಿವೆ.

ಟಿಕೆಟ್ ಹಂಚಿಕೆಗೆ ಸಮೀಕ್ಷೆ
ಟಿಕೆಟ್ ಹಂಚಿಕೆಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸಮೀಕ್ಷೆಗಳನ್ನು ನಡೆಸುತ್ತಿವೆ. "ತಳಮಟ್ಟದ ವಾಸ್ತವಗಳನ್ನು ತಿಳಿದುಕೊಳ್ಳಲು ಹೊರಗಿನ ಸಂಸ್ಥೆಗಳಿಂದ ಸಮೀಕ್ಷೆ ನಡೆಸಲಾಗುತ್ತದೆ. ರಾಜ್ಯಾದ್ಯಂತ ಸಮೀಕ್ಷೆ ನಡೆಯಲಿದ್ದು ಸಾಂಭಾವ್ಯ ಅಭ್ಯರ್ಥಿಗಳನ್ನು ಪತ್ತೆ ಹಚ್ಚಲು ಇದು ಸಹಾಯಕವಾಗಲಿದೆ," ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಮೇನಲ್ಲೇ ಅಮಿತ್ ಶಾ ಸೂಚನೆ ಮೇರೆಗೆ ಸಮೀಕ್ಷೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ಯಡಿಯೂರಪ್ಪ ಮಾತ್ರ ಇನ್ನೆರಡು ತಿಂಗಳಲ್ಲಿ ಸಮೀಕ್ಷೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಜಾತಿ ಸಮೀಕ್ಷೆಯೇ ಕಾಂಗ್ರೆಸ್ ಗೆ ಆಧಾರ
ಜಾತಿ, ಧರ್ಮ ಮತ್ತು ಅಭ್ಯರ್ಥಿಗಳ ಸಮೀಕರಣಕ್ಕೆ ಕಾಂಗ್ರೆಸ್ ಮುಂದಾಗಿದೆ. ಇದಕ್ಕೆ ತನ್ನ ಜಾತಿ ಸಮೀಕ್ಷೆಯನ್ನೇ ಕಾಂಗ್ರೆಸ್ ಆಧಾರವಾಗಿಟ್ಟುಕೊಳ್ಳುವ ಸಾಧ್ಯತೆ ಇದೆ.
ಇದಲ್ಲದೇ ಹೈಕಮಾಂಡ್ ಸೂಚನೆ ಮೇರೆಗೆ ಕಾಂಗ್ರೆಸ್ ಕೂಡಾ ಟಿಕೆಟ್ ಹಂಚಿಕೆಗೆ ಸಮೀಕ್ಷೆ ಮೊರೆ ಹೋಗಲಿದೆ. ಈಗಾಗಲೇ ಎರಡು ಸುತ್ತಿನ ಸಮೀಕ್ಷೆಗಳನ್ನು ನಡೆಸಲಾಗಿದೆ ಎಂಬ ವರದಿಗಳೂ ಇವೆ. ಕಾಂಗ್ರೆಸ್ ಕೈಯಲ್ಲಿರುವ ಅತೀ ದೊಡ್ಡ ರಾಜ್ಯ ಕರ್ನಾಟಕವಾಗಿದ್ದು, ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳಲು ಕೈ ಪಕ್ಷ ಒದ್ದಾಡುತ್ತಿದೆ.












Click it and Unblock the Notifications