ಈಶ್ವರಪ್ಪಗೆ ತಿರುಗೇಟು, ಬಿಜೆಪಿಯಿಂದ ಮೂರು ಸಮಾವೇಶ!
ಬೆಂಗಳೂರು, ಆಗಸ್ಟ್ 31 : 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ರಚನೆ ಮಾಡುತ್ತಿರುವ ಕೆ.ಎಸ್.ಈಶ್ವರಪ್ಪ ಅವರಿಗೆ ತಿರುಗೇಟು ನೀಡಲು ಬಿ.ಎಸ್.ಯಡಿಯೂರಪ್ಪ ನಿರ್ಧರಿದ್ದಾರೆ. ಪಕ್ಷದ ವತಿಯಿಂದಲೇ ಹಿಂದುಳಿದ ವರ್ಗಗಳ ಮೂರು ಸಮಾವೇಶಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಮಂಗಳವಾರ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ವಿವಿಧ ಮೋರ್ಚಾಗಳ ಸಭೆ ನಡೆಯಿತು. ಸಭೆಯಲ್ಲಿ ಮೋರ್ಚಾಗಳ ಮೂಲಕ ಹಿಂದುಳಿದ ಹಾಗೂ ದಲಿತ ವರ್ಗಗಳ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಈ ಮೂಲಕ ಬ್ರಿಗೇಡ್ ರಚನೆ ಮಾಡುತ್ತಿರುವ ಈಶ್ವರಪ್ಪಗೆ ತಿರುಗೇಟು ನೀಡಲಾಗುತ್ತಿದೆ. [ಕರ್ನಾಟಕ ಬಿಜೆಪಿ ಬಿಕ್ಕಟ್ಟಿಗೆ 'ರಾಮ'ಬಾಣ ಸಿದ್ಧ!]
ಒಟ್ಟು ಮೂರು ಸಮಾವೇಶ ನಡೆಯಲಿದ್ದು, ಎರಡು ಸಮಾವೇಶಗಳ ದಿನಾಂಕ ಅಂತಿಮಗೊಳಿಸಲಾಗಿದೆ. ಅಕ್ಟೋಬರ್ 23ರಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಪರಿಶಿಷ್ಟ ಪಂಗಡ ಸಮಾವೇಶ ನಡೆಯಲಿದ್ದು, ಸುಮಾರು 1 ಲಕ್ಷ ಜನರನ್ನು ಸೇರಿಸಲು ಉದ್ದೇಶಿಸಲಾಗಿದೆ.['ಧೈರ್ಯವಿದ್ದರೆ ನಾನೇ ಮುಂದಿನ ಸಿಎಂ ಎಂದು ಈಶ್ವರಪ್ಪ ಹೇಳಲಿ']
ಕೆ.ಎಸ್.ಈಶ್ವರಪ್ಪ ಅವರು ಅಕ್ಟೋಬರ್ನಲ್ಲಿ ಹಾವೇರಿಯಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್'ನ ಮೊದಲ ಸಮಾವೇಶ ನಡೆಸಲು ಉದ್ದೇಶಿಸಿದ್ದಾರೆ. ಅದಕ್ಕೂ ಮೊದಲು ಈ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಅಂದಹಾಗೆ ಬ್ರಿಗೇಡ್ ಅನ್ನು ಟ್ರಸ್ಟ್ ರೂಪದಲ್ಲಿ ಈಗಾಗಲೇ ನೋಂದಣಿ ಮಾಡಿಸಲಾಗಿದೆ....

ಸಮಾವೇಶಗಳ ದಿನಾಂಕ
* ಅಕ್ಟೋಬರ್ 23ರಂದು ರಾಯಚೂರು ಜಿಲ್ಲೆಯ ಲಿಂಗಸುಗೂರು (ಎಸ್ಟಿ ಸಮಾವೇಶ)
* ನವೆಂಬರ್ 27ರಂದು ಬೆಂಗಳೂರು (ಹಿಂದುಳಿದ ವರ್ಗಗಳ ಸಮಾವೇಶ)
* ಪರಿಶಿಷ್ಟ ವರ್ಗಗಳ ಸಮಾವೇಶ (ದಿನಾಂಕ ನಿಗದಿಯಾಗಿಲ್ಲ)

ರಾಯಚೂರಿನಲ್ಲಿ ಸಮಾವೇಶ ಏಕೆ?
ಅಕ್ಟೋಬರ್ 23ರಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಎಸ್ಟಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಎಸ್ಟಿ ಮೋರ್ಚಾದ ಅಧ್ಯಕ್ಷ ಹಾಗೂ ಮಾಜಿ ಸಚಿವ ರಾಜೂಗೌಡ ಅವರು ಅದೇ ಭಾಗಕ್ಕೆ ಸೇರಿದ್ದಾರೆ. ಆದ್ದರಿಂದ ಅಲ್ಲಿ ಸಮಾವೇಶ ನಡೆಸುವ ಮೂಲಕ ರಾಯಚೂರು, ಬಳ್ಳಾರಿ, ಯಾದಗಿರಿ, ಕೊಪ್ಪಳ, ಕಲಬುರಗಿ, ಗದಗ, ಬೀದರ್ ಜಿಲ್ಲೆಗಳ ಜನರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.

ಯಡಿಯೂರಪ್ಪ ಹೇಳಿದ್ದೇನು?
ಮೋರ್ಚಾಗಳ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, 'ಹಿಂದುಳಿದ ಮತ್ತು ದಲಿತ ವರ್ಗಗಳ ಸಂಘಟನೆಗೆ ಸಂಬಂಧಿಸಿದಂತೆ ಕೆಲವರಿಂದ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಪಕ್ಷದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ನಾವು ಪಕ್ಷದ ವ್ಯಾಪ್ತಿಯಲ್ಲೇ ಸಮಾವೇಶ ಮಾಡಿ ನಾವೇನು ಮಾಡಿದ್ದೇವೆ ಎಂಬುದನ್ನು ಹೇಳೋಣ' ಎಂದರು.

'ಯಾವ ಗೊಂದಲಗಳು ಇಲ್ಲ'
ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ ಅವರು, 'ಪಕ್ಷದ ವತಿಯಿಂದ ಹಮ್ಮಿಕೊಳ್ಳುತ್ತಿರುವ ಸಮಾವೇಶಗಳ ಬಗ್ಗೆ ಯಾವ ಗೊಂದಲಗಳೂ ಇಲ್ಲ. ಸಮಾವೇಶಗಳಿಗೆ ಅಪಾರ್ಥ ಕಲ್ಪಿಸಬೇಡಿ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ' ಎಂದು ಹೇಳಿದರು.












Click it and Unblock the Notifications