ಮಂಗಳೂರು ಚಲೋ, 5 ನಗರದಿಂದ ಹೊರಡಲಿದೆ ಬಿಜೆಪಿ ರಥಯಾತ್ರೆ
ಬೆಂಗಳೂರು, ಆಗಸ್ಟ್ 21: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಅವರ ರಾಜೀನಾಮೆಗೆ ಆಗ್ರಹಿಸಿ ಐದು ನಗರಗಳಲ್ಲಿ ರಥಯಾತ್ರೆ ನಡೆಸಲು ಕರ್ನಾಟಕ ಬಿಜೆಪಿ ಯೋಜನೆ ಹಾಕಿಕೊಂಡಿದೆ. ಈ ಹಿಂದೆ ಬಿಜೆಪಿಯ ನಾಯಕ ಎಲ್.ಕೆ.ಅಡ್ವಾಣಿ ಅಯೋಧ್ಯೆಗೆ ರಥಯಾತ್ರೆ ಕೈಗೊಂಡಿದ್ದ ಮಾದರಿಯಲ್ಲೇ ರಾಜ್ಯದಲ್ಲೂ ನಡೆಸಲು ಪಕ್ಷ ತೀರ್ಮಾನಿಸಿದೆ.
ಗೃಹ ಸಚಿವರಾಗಿ ರಮಾನಾಥ ರೈ: ಇನ್ನೇನು ಅಧಿಕೃತ ಘೋಷಣೆ?
ಮಂಗಳೂರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ರಥಯಾತ್ರೆ ಮಾಡಿ, ಸಚಿವ ರೈ ರಾಜೀನಾಮೆಗೆ ಆಗ್ರಹಿಸುವುದು ಬಿಜೆಪಿ ಉದ್ದೇಶವಾಗಿದೆ. ಇಪ್ಪತ್ತೇಳುವ ವರ್ಷಗಳ ಹಿಂದೆ ಸೆಪ್ಟೆಂಬರ್ ನಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ರಥ ಯಾತ್ರೆ ನಡೆಸಿದ್ದರು. ಅದು ಆಯೋಧ್ಯೆವರೆಗೆ ತೆರಳಿತ್ತು. ಆ ನಂತರ ಇಡೀ ದೇಶದಲ್ಲಿ ಹಿಂಸಾಚಾರಕ್ಕೆ ದಾರಿ ಮಾಡಿಕೊಟ್ಟಿತ್ತು.
ಇನ್ನು ಕರ್ನಾಟಕದಲ್ಲಿ ಬಿಜೆಪಿ ಯುವ ಮೋರ್ಚಾವು ರಥ ಯಾತ್ರೆಯ ನೇತೃತ್ವವನ್ನು ವಹಿಸುತ್ತದೆ. ಐದು ನಗರಗಳಲ್ಲಿ, ಐದು ರಥಗಳ ಜತೆಗೆ ಹೊರಡುವ ಹತ್ತು ಸಾವಿರ ಬೈಕ್ ಸವಾರರು ಮಂಗಳೂರಿನಲ್ಲಿ ಯಾತ್ರೆ ಪೂರ್ಣಗೊಳಿಸುತ್ತಾರೆ. ಈ ಅಭಿಯಾನಕ್ಕಾಗಿ ಪೊಲೀಸರ ಅನುಮತಿ ಪಡೆಯಬೇಕಿದೆ.
ಶರತ್ ಮಡಿವಾಳ ಸೇರಿದಂತೆ ಹತ್ಯೆಯಾದ ಆರೆಸ್ಸೆಸ್ ಹಾಗೂ ಬಿಜೆಪಿಯ ಹನ್ನೊಂದು ಕಾರ್ಯಕರ್ತರ ಭಾವಚಿತ್ರವನ್ನು ರಥವು ಒಳಗೊಂಡಿರುತ್ತದೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಶಿವಮೊಗ್ಗದಿಂದ ಈ ರಥಗಳು ಹೊರಡುತ್ತವೆ ಎಂದು ವರದಿಯಾಗಿದೆ.
ಭಿಕ್ಷೆ ಬೇಡಿದ ಶೋಭಾ ಕರಂದ್ಲಾಜೆಗೆ ರಮಾನಾಥ ರೈ ಟಾಂಗ್
ರಥವು ಸಾಗುವ ಮಾರ್ಗ ಮಧ್ಯೆ ಸಭೆಗಳನ್ನು ನಡೆಸಿ, ಕಾರ್ಯಕರ್ತರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೆಪ್ಟೆಂಬರ್ ಏಳರಂದು ಈ ರಥಗಳು ಮಂಗಳೂರು ತಲುಪಿ, ಅಲ್ಲಿ ಬೃಹತ್ ಸಭೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ರಮಾನಾಥ್ ರೈ ರಾಜೀನಾಮೆಗೆ ಆಗ್ರಹಿಸಲಿದ್ದಾರೆ.
ಮೈಸೂರಿನಿಂದ ಹೊರಡುವ ರಥದ ನೇತೃತ್ವವನ್ನು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಹಿಸಲಿದ್ದಾರೆ. ಉಳಿದೆಲ್ಲ ಕಡೆ ಕಾರ್ಯಕರ್ತರು ಮಾತ್ರ ಭಾಗವಹಿಸಲಿದ್ದಾರೆ. ರಥದ ಜತೆಗೆ ಆಂಬುಲೆನ್ಸ್, ಮೆಕ್ಯಾನಿಕ್ ಗಳ ವ್ಯವಸ್ಥೆ ಸಹ ಇರಲಿವೆ.