ಆಷಾಢದಲ್ಲೇ ಸರ್ಕಾರ ರಚನೆ ಬಿಜೆಪಿ ಕನಸು, ನನಸಾಗುವುದೇ?
Recommended Video
ಬೆಂಗಳೂರು, ಜುಲೈ 02: ಅಮಾವಾಸ್ಯೆ, ಹುಣ್ಣಿಮೆ, ಆಷಾಢ, ಶುಭ ಮುಹೂರ್ತ ಎಲ್ಲವೂ ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಅವರು ಮಾತ್ರವಲ್ಲ, ಬಿಜೆಪಿಯಲ್ಲೂ ನಂಬಿ ಆಚರಿಸುವವರಿದ್ದಾರೆ. ಆಷಾಢ ಮುಗಿಯುವ ಮೊದಲೇ ಸರ್ಕಾರಕ್ಕೆ ಗ್ರಹಣ ಹಿಡಿದಿದ್ದು, ಜುಲೈ ತಿಂಗಳ ಅಂತ್ಯದೊಳಗೆ ನಾಡಿನ ಜನತೆ ಬಿಜೆಪಿ ಸರ್ಕಾರವನ್ನು ಸ್ವಾಗತಿಸಬಹುದು ಎಂದು ಬಿಜೆಪಿ ಮೂಲಗಳು ಹೇಳಿವೆ.
ಆದರೆ, ಜುಲೈ ತಿಂಗಳಿನಲ್ಲಿ ಯಾವುದೇ ಆತುರದ ನಿರ್ಧಾರ ಕೈಗೊಳ್ಳದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಅವರ ಆಪ್ತ ಜ್ಯೋತಿಷಿಗಳು ಸಲಹೆ ನೀಡಿದ್ದಾರೆ. ಅಧಿಕಾರ ಈ ಬಾರಿ ತಾನಾಗೇ ಒಲಿದು ಬರುವ ತನಕ ಕಾಯುವಂತೆ ಸೂಚಿಸಿದ್ದಾರೆ. ಹೀಗಾಗಿ, ಜುಲೈ ಅಂತ್ಯದವರೆಗೂ ಕಾಯುವಿಕೆ ಅನಿವಾರ್ಯವಾಗಿದೆ.
ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ : ಯಾರು, ಏನು ಹೇಳಿದರು?
'ನಾವು ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಯಾವುದೇ ತಂತ್ರಗಾರಿಕೆ, ಕುತಂತ್ರ ಇನ್ಯಾವುದನ್ನೂ ನಡೆಸುತ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕನಿಷ್ಠ 20 ಅತೃಪ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಇದ್ದಾರೆ ಎಂದು ಎರಡು ತಿಂಗಳಿನಿಂದ ಹೇಳುತ್ತಲೇ ಬಂದಿದ್ದೇನೆ' ಎಂದು ಯಡಿಯೂರಪ್ಪ ಹೇಳಿದ್ದಾರೆ.
ಅತೃಪ್ತರನ್ನು ಸೆಳೆಯುವ ಯತ್ನ ನಡೆದಿಲ್ಲ
ಅತೃಪ್ತ ಶಾಸಕರನ್ನು ನಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಪ್ರಯತ್ನಕ್ಕೆ ನಾವು ಮುಂದಾಗಿಲ್ಲ, ನಾವೇನು ಸನ್ಯಾಸಿಗಳಲ್ಲ, ಮೈತ್ರಿ ಸರ್ಕಾರ ಪತನವಾದರೆ, ಸರ್ಕಾರ ರಚಿಸಲು ಸಿದ್ಧ, ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆಗೆ ಹೋಗುವ ಪ್ರಶ್ನೆಯಿಲ್ಲ' ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ನಾನು ರೆಡಿ ಎಂದು ಸೂಚಿಸಿದ್ದಾರೆ.
ಆದರೆ, ಬಿಜೆಪಿ ಹೈಕಮಾಂಡ್ ಇನ್ನೂ ಯಾವುದೇ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಸರಿಯಾದ ಸಂಖ್ಯಾಬಲ ಖಾತ್ರಿಯಾಗುವ ತನಕ ಯಾವುದೇ ಆತುರದ ನಡೆ ಇಡದಂತೆ ಎಚ್ಚರಿಕೆ ಸಂದೇಶ ಮಾತ್ರ ಬಂದಿದೆ.
ತುಘಲಕ್ ಸರ್ಕಾರ ಶೀಘ್ರದಲ್ಲೇ ಪತನ
"ರೋಮ್ ನಗರ ಹೊತ್ತಿ ಉರಿಯುತ್ತಿದ್ದಾಗ ದೊರೆ ಪಿಟೀಲು ಬಾರಿಸ್ತಾ ಇದ್ರಂತೆ, ಹಾಗೆ ಇಡೀ ರಾಜ್ಯ ಬರದಲ್ಲಿ ಸಿಲುಕಿರುವಾಗ ಸಿಎಂ ವಿದೇಶ ಮಾಡ್ತಾ ಇದ್ದಾರೆ" ಎಂದು ಯಡಿಯೂರಪ್ಪ ಅವರು ಕಿಡಿಕಾರಿದ್ದಾರೆ.
ರಾಜ್ಯದೆಲ್ಲೆಡೆ ತೀವ್ರ ಬರ ಇದೆ. ಜೂನ್ ಅಂತ್ಯಕ್ಕೆ 148 ಮಿಮಿ ಮಳೆಯಾಗಬೇಕಿತ್ತು. ಆದರೆ, 103 ಮಿಮಿ ಮಾತ್ರ ಮಳೆಯಾಗಿದೆ. 29% ಮಳೆ ಕೊರತೆ ಇದೆ, 81 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದೆ. ಇಂಥ ಸಂದರ್ಭದಲ್ಲಿ ವಿದೇಶ ಪ್ರವಾಸ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸುಳ್ಳು ಭರವಸೆ ನೀಡಿ 37 ಸ್ಥಾನ ಗೆದ್ದು, ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದಾರೆ, ರೈತರ ಸಾಲ ಮನ್ನಾ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ ಎಂದರು.
ಲೋಕಸಭೆ ಚುನಾವಣೆ ನಂತರದ ಬೆಳವಣಿಗೆ
17ನೇ ಲೋಕಸಭೆಗಾಗಿ ಏಪ್ರಿಲ್ 11 ರಿಂದ ಮೇ 19 ರ ತನಕ ನಡೆದ ಏಳು ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ಕರ್ನಾಟಕದಲ್ಲಿ ಏಪ್ರಿಲ್ 18, 23ರಂದು ಮತದಾನವಾಗಿ, ಮೇ 23ರಂದು ಫಲಿತಾಂಶ ಹೊರ ಬಂದಿತು. ಕರ್ನಾಟಕದ 28 ಸ್ಥಾನಗಳ ಪೈಕಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1 ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಗೆಲುವು ಸಾಧಿಸಿದರು.
ಕುಮಾರಸ್ವಾಮಿ ಅವರ ಸರ್ಕಾರ ಉಳಿಯುವುದೇ, ಬಿಜೆಪಿ ಏನಾದರೂ ಆಪರೇಷನ್ ಕಮಲಕ್ಕೆ ಮತ್ತೆ ಚಾಲನೆ ನೀಡುವುದೇ? ಬಿಎಸ್ ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗುವ ಕನಸು ನನಸಾಗುವುದೇ? ಎಂಬ ಪ್ರಶ್ನೆ ಏಳುವಂತೆ ಮಾಡಿದ್ದು, ಅತೃಪ್ತ ಶಾಸಕರು, ಈಗ ಹೊಸ ಸರ್ಕಾರ ರಚನೆ ಅಥವಾ ಮಧ್ಯಂತರ ಚುನಾವಣೆ ಎಲ್ಲವೂ ಅತೃಪ್ತರ ಕೈಲಿದೆ.
ಯಡಿಯೂರಪ್ಪ ಅವರಿಗೆ ಈಗ ಬಲ ಬಂದಿದೆ
ಜೂನ್ ತಿಂಗಳಿನಲ್ಲಿ ಅಪರೇಷನ್ ಕಮಲ ಪ್ರಯತ್ನಕ್ಕೆ ಬಲವಿಲ್ಲ. ಯಡಿಯೂರಪ್ಪ ಅವರಿಗೂ ಯಾವುದೇ ಅದೃಷ್ಟವಿರುವುದಿಲ್ಲ. ಒಂದು ವೇಳೆ ಸಿಎಂ ಆಗಲು ಹೊರಟರೆ ಮುಖಭಂಗವಾಗಲಿದ್ದು, ತೀವ್ರ ಹಿನ್ನಡೆ ಅನುಭವಿಸಲಿದ್ದಾರೆ. ಈಗ ಜೊತೆಗೆ ನಿಲ್ಲುವವರೂ ದೂರಾಗಲಿದ್ದಾರೆ. ದೆಹಲಿ ನಾಯಕರ ಬೆಂಬಲವೂ ಸಿಗುವುದಿಲ್ಲ. ಜುಲೈನಲ್ಲಿ ಯಡಿಯೂರಪ್ಪ ಪ್ರಯತ್ನ ಪಟ್ಟರೆ ಸಫಲವಾಗುವ ಸಾಧ್ಯತೆಯಿದೆ. ಈ ವೇಳೆಗೆ ಮೈತ್ರಿ ಸರ್ಕಾರದಲ್ಲೂ ಒಡಕು ಮೂಡಲಿದ್ದು, ಬಿಜೆಪಿ ಹೆಚ್ಚಿನ ಪ್ರಯತ್ನಪಡದಿದ್ದರೂ ಕಾರ್ಯಸಿದ್ಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಟಾರೋ ಕಾರ್ಡ್ ಭವಿಷ್ಯವೂ ಹೇಳಿದೆ
ಟಾರೋ ಕಾರ್ಡ್ ಸಂಪೂರ್ಣ ಭವಿಷ್ಯ ಇಲ್ಲಿದೆ