ಮತ್ಯಾವ ಪುರುಷಾರ್ಥಕ್ಕಾಗಿ ಯಡಿಯೂರಪ್ಪನವರೇ ಈ ಬೃಹನ್ನಾಟಕ?
Recommended Video

ಲೋಕಸಭಾ ಚುನಾವಣೆಯ ಈ ಹೊಸ್ತಿಲಲ್ಲಿ ಬಿಜೆಪಿಯವರು ಒಂದನ್ನಂತೂ ಅರ್ಥಮಾಡಿಕೊಳ್ಳಬೇಕು. ಈಗ ನಡೆಯುತ್ತಿರುವ ರಾಜಕೀಯ ಗೊಂದಲ ಏನಿದೆಯೋ, ಅದಕ್ಕೆ ಒಂದು ವೇಳೆ ಯಡಿಯೂರಪ್ಪನವರು ಕಾರಣ ಅಲ್ಲದೇ ಇದ್ದರೂ, ಜನಸಾಮಾನ್ಯರು ಬಿಜೆಪಿಯದ್ದೇ ಈ ನಾಟಕ ಇದು ಎನ್ನುವ ತೀರ್ಮಾನಕ್ಕೆ ಬರುತ್ತಾರೆ.
ಬಿಜೆಪಿಯವರು ಸಮ್ಮಿಶ್ರ ಸರಕಾರವನ್ನು ಉರುಳಿಸಲು ನೋಡುತ್ತಿರಬಹುದು, ಅಥವಾ ಆ ಪ್ರಯತ್ನದಿಂದ ಹಿಂದಕ್ಕೆ ಸರಿದಿರಬಹುದು, ಅದೆಲ್ಲಾ ಸಾಧ್ಯತೆಗಳನ್ನು ಬಿಟ್ಟು, ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷದವರಿಂದಲೇ ಗೊಂದಲ ಉಂಟಾಗುತ್ತಿರಬಹುದು, ಆದರೆ ಎಲ್ಲದಕ್ಕೂ ರಾಜ್ಯದ ಜನತೆ ಸದ್ಯದ ಪರಿಸ್ಥಿತಿಯಲ್ಲಿ ಜವಾಬ್ದಾರಿಯನ್ನಾಗಿ ಮಾಡುವುದು ಬಿಜೆಪಿಯನ್ನು.
ಯಡಿಯೂರಪ್ಪನವರು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸುವುದಿಲ್ಲ ಎಂದು ಹೇಳಿದ್ದಾರೆ. ತಾಖತ್ ಇದ್ದರೆ ಮಂಡಿಸಿ ಎಂದು ದೇವೇಗೌಡರು ಸವಾಲೆಸೆದಿದ್ದಾರೆ. ಆ ಚಿಂತನೆಯಲ್ಲೇ ನಾವಿಲ್ಲ ಸ್ವಾಮೀ..ಎಂದು ಯಡಿಯೂರಪ್ಪನವರು ಮತ್ತೆ ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ದಾಗ, ಈಗಿರುವ ರಾಜಕೀಯ ಗೊಂದಲಗಳು ಯಾಕೆ?
ರಾಜ್ಯಪಾಲರ ಭಾಷಣವನ್ನು ಬಹಿಷ್ಕರಿಸುವುದು ಸಂವಿಧಾನ ಬದ್ದ, ಆದರೆ, ಸದನದ ಬಾವಿಗೆ ಇಳಿದು ಗದ್ದಲ ಎಬ್ಬಿಸುವುದು ರಾಜ್ಯಪಾಲರಿಗೆ ಮತ್ತು ಸದನಕ್ಕೆ ಮಾಡಿದ ಅವಮಾನ ಅಲ್ಲದೇ ಇನ್ನೇನು? ದೋಸ್ತಿ ಸರಕಾರದಲ್ಲಿ ಅತೃಪ್ತಿಯ ಕರಿಛಾಯೆ ಆವರಿಸಿದ್ದರೂ, ಬಿಜೆಪಿ ಸದ್ಯ ಅವಿಶ್ವಾಸ ಗೊತ್ತುವಳಿ ಮಂಡಿಸುವುದಿಲ್ಲ ಎಂದು ಬಿಎಸ್ವೈ ಹೇಳಿದ್ದಾರೆ. ಹಾಗಿದ್ದರೆ ತೆರೆಯ ಹಿಂದಿನ ನಾಟಕವನ್ನು ಇನ್ನೂ ಮುಂದುವರಿಸಿರುವುದು ಯಾವ ಕಾರಣಕ್ಕಾಗಿ?

ಅವಿಶ್ವಾಸ ಗೊತ್ತುವಳಿ ಮಂಡಿಸುವುದಿಲ್ಲ, ಯಡಿಯೂರಪ್ಪ
ಅವಿಶ್ವಾಸ ಗೊತ್ತುವಳಿ ಮಂಡಿಸುವುದಿಲ್ಲ ಎನ್ನುವ ಬಿಎಸ್ವೈ ಮಾತಿನಲ್ಲೇ ಒಂದಂತೂ ಸ್ಪಷ್ಟವಾಗುತ್ತದೆ, ಸರಕಾರ ಬೀಳಿಸಲು ಬೇಕಾದಂತಹ ಸಂಖ್ಯಾಬಲವನ್ನು ಗಿಟ್ಟಿಸುವ ವಿಶ್ವಾಸ ಯಡಿಯೂರಪ್ಪನವರಲ್ಲಿ ಇಲ್ಲ ಎಂದು. ಮೈತ್ರಿ ಸರಕಾರದ ಹನ್ನೆರಡು ಶಾಸಕರು ಗೈರಾಗಿದ್ದಾರೆ. ಈ ಸರಕಾರಕ್ಕೆ ಬಹುಮತವಿಲ್ಲ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಹೀಗಿರುವಾಗ, ಸದ್ಯ ಮಟ್ಟಿಗೆ ಸುಮ್ಮನೆ ಕೂತು, ಸರಕಾರದಲ್ಲೇ ಗೊಂದಲ ತಾರಕಕ್ಕೇರಿದಾಗ, ಸರಕಾರ ರಚಿಸಲು ಬಿಜೆಪಿ ಪ್ರಯತ್ನಿಸುವುದು ಗಂಭೀರವಾದ ರಾಜಕೀಯ ನಡೆಯಾಗಬಹುದು.

ಅವಿಶ್ವಾಸ ಮಂಡನೆಯಿಲ್ಲ, ಬಿಎಸ್ವೈ: ಮತ್ಯಾವ ಪುರುಷಾರ್ಥಕ್ಕಾಗಿ ಈ ಬೃಹನ್ನಾಟಕ
ಕಾಂಗ್ರೆಸ್ಸಿನ ಹತ್ತು ಶಾಸಕರು ಗೈರಾಗಿದ್ದರು, ಅದರಲ್ಲಿ ಪೂರ್ವಾನುಮತಿ ಪಡೆದವರು ಐವರು, ಇಬ್ಬರು ಪಕ್ಷೇತರರು, ಹೀಗೆ ಒಟ್ಟು ಏಳು ಶಾಸಕರನ್ನು ಇಟ್ಟುಕೊಂಡು ಬಿಜೆಪಿ ಏನು ಅಲುಗಾಡಿಸಲು ಸಾಧ್ಯ? ದೇಶದೆಲ್ಲಡೆ ಬಿಜೆಪಿ ಒಂದೆಡೆ, ಮಿಕ್ಕವರೆಲ್ಲಾ ಇನ್ನೊಂದೆಡೆ ಎನ್ನುವ ಸ್ಥಿತಿ ಇರುವಾಗ, ವಿರೋಧ ಪಕ್ಷಗಳು ಎಲ್ಲದಕ್ಕೂ ಬಿಜೆಪಿಯನ್ನೇ ಟಾರ್ಗೆಟ್ ಮಾಡುತ್ತಾರೆ ಎನ್ನುವ ವಿಚಾರ ಗೊತ್ತಿದ್ದರೂ, ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಯಾಕೆ ಈ ಗುರಿಮುಟ್ಟಲಾಗದ ಕೆಲಸವನ್ನು ಮಾಡುತ್ತಿದೆ ಎನ್ನುವುದು ಬಿಜಿಪಿಯ ಹಲವು ಮುಖಂಡರಿಗೇ ಕಾಡುತ್ತಿರುವ ಪ್ರಶ್ನೆ.

ಬಿಜೆಪಿಯ ವ್ಯರ್ಥ ಪ್ರಯತ್ನ ಮುಂದುವರಿಯುತ್ತಲೇ ಇದೆ
ಯಡಿಯೂರಪ್ಪ ಒಂದು ಪಾನ್ ಮುಂದಿಟ್ಟರೆ ಅದನ್ನು ಹಿಮ್ಮೆಟ್ಟಿಸಲು ಗೌಡ್ರು, ಡಿಕೆಶಿ ಎನ್ನುವ ಚಾಣಾಕ್ಷರಿದ್ದಾರೆ ಎನ್ನುವುದನ್ನು ರಾಜ್ಯ ಬಿಜೆಪಿ ಮುಖಂಡರು ಇನ್ನೂ ಅರಿತಂತೆ ಕಾಣುವುದಿಲ್ಲ. ಕುಮಾರಸ್ವಾಮಿ ಸರಕಾರ ಅಧಿಕಾರಕ್ಕೆ ಬಂದ ಎಂಟೊಂಬತ್ತು ತಿಂಗಳಲ್ಲಿ ಯಾವ ರೀತಿ ಬಿಜೆಪಿಯನ್ನು ಸಮ್ಮಿಶ್ರ ಸರಕಾರದ ಮುಖಂಡರು ಹಿಮ್ಮೆಟ್ಟಿಸಿದರು ಎನ್ನುವುದು ರಾಜ್ಯದ ಜನತೆಯ ಮುಂದಿದೆ. ಆದರೂ, ಬಿಜೆಪಿಯ ವ್ಯರ್ಥ ಪ್ರಯತ್ನ ಮುಂದುವರಿಯುತ್ತಲೇ ಇದೆ.

ಕೇಂದ್ರ ಬಿಜೆಪಿ ನಾಯಕರ ಮೇಲೆ ಗೌಡ್ರ ಸಾಫ್ಟ್ ಕಾರ್ನರ್
ರಾಜ್ಯದ ಸದ್ಯದ ರಾಜಕೀಯ ಗೊಂದಲಕ್ಕೆ ಮೋದಿ, ಶಾ ಅಥವಾ ಕೇಂದ್ರದ ಯಾವ ಬಿಜೆಪಿ ನಾಯಕರೂ ಕಾರಣರಲ್ಲ, ಇದೆಲ್ಲಾ ನಡೆಯುತ್ತಿರುವುದು, ಬಿಎಸ್ವೈಗೆ ಸಿಎಂ ಕುರ್ಚಿಯ ಮೇಲಿರುವ ಲಾಲಸೆಯಿಂದ ಎಂದು ಗೌಡ್ರು ಹೇಳಿದರೋ, ಅದರ ಅರ್ಥವನ್ನು ಗ್ರಹಿಸುವುದಾದರೆ, ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಈ ಗೊಂದಲಕ್ಕೆ ಅಮಿತ್ ಶಾ ಅಷ್ಟೇನೂ ಉತ್ಸುಕರಾಗಿಲ್ಲ ಎನ್ನುವುದು. ಹಾಗೆಯೇ, ಕೇಂದ್ರ ಬಿಜೆಪಿ ನಾಯಕರ ಮೇಲೆ ಗೌಡ್ರ ಸಾಫ್ಟ್ ಕಾರ್ನರ್ ಹಿಂದೆ, ಬೇರೇನೋ ಲೆಕ್ಕಾಚಾರವೂ ಇರಬಹುದು.

ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಗೆ ಇದೆಲ್ಲಾ ಬೇಕಾ?
ಸದ್ಯದ ಪರಿಸ್ಥಿತಿಯಲ್ಲಿ ಒಂದಂತೂ ನಿಜ, ಬೇರೇನೋ ಕಾರಣದಿಂದ ಕುಮಾರಸ್ವಾಮಿ ಸರಕಾರ ಪತನಗೊಂಡರೂ, ಅದಕ್ಕೆ ಹೊಣೆಯಾಗುವುದು ಬಿಜೆಪಿ. ಕನಿಷ್ಟ ಇಪ್ಪತ್ತು ಸೀಟನ್ನು ಕರ್ನಾಟಕದಿಂದ ಜಯಿಸಬೇಕು ಎಂದು ಅಮಿತ್ ಶಾ ಟಾರ್ಗೆಟ್ ಹಾಕಿಕೊಂಡಿರುವಾಗ ಮತ್ತು ನೇರವಾಗಿ ಬಿಜೆಪಿಗೆ ಎಂಟ್ರಿ ಇರುವುದು ಕರ್ನಾಟಕದಿಂದ ಮಾತ್ರ ಎಂದಿರುವಾಗ, ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಗೆ ಇದೆಲ್ಲಾ ಬೇಕಾ?












Click it and Unblock the Notifications