ಕಟೀಲ್ + ಸಂತೋಷ್, ಬೊಮ್ಮಾಯಿ + ಜೋಶಿ; ಕಾಂಗ್ರೆಸ್ ಲೆಕ್ಕಾಚಾರವೇನು?
ಬೆಂಗಳೂರು, ಜನವರಿ 12; ಧಾರವಾಡ ನಗರದಲ್ಲಿ ಜನವರಿ 12 ರಿಂದ 16ರ ತನಕ 26ನೇ ರಾಷ್ಟ್ರೀಯ ಯುವಜನೋತ್ಸವ ನಡೆಯಲಿದೆ. ಸಂಜೆ ಈ ಕಾರ್ಯಕ್ರಮವನ್ನು ಭಾರತ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ರಾಷ್ಟ್ರೀಯ ಯುವಜನೋತ್ಸವಕ್ಕೆ ಕೆಲವೇ ಹೊತ್ತು ಇರುವಾಗ ಕರ್ನಾಟಕ ಕಾಂಗ್ರೆಸ್ ಟ್ವೀಟ್ವೊಂದನ್ನು ಮಾಡಿದೆ. ಕರ್ನಾಟಕ ಬಿಜೆಪಿಯ ಬಣ ಲೆಕ್ಕಾಚಾರವನ್ನು ಬಿಚ್ಚಿಟ್ಟಿದೆ.
ಧಾರವಾಡ; ರಾಷ್ಟ್ರೀಯ ಯುವಜನೋತ್ಸವ; ವಿಶೇಷ ಸಾಹಸ ಕ್ರೀಡೆಗಳ ಪ್ರದರ್ಶನ
ಗುರುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, 'ಹುಬ್ಬಳ್ಳಿಯಲ್ಲೇ ನಡೆಯುತ್ತಿರುವ ಪ್ರಧಾನಿ ಕಾರ್ಯಕ್ರಮದಲ್ಲಿ ಅದೇ ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಕಡೆಗಣಿಸಿದೆ' ಎಂದು ಆರೋಪಿಸಿದೆ.
ಧಾರವಾಡದಲ್ಲಿ ಯುವಜನೋತ್ಸವ; ಸಿರಿಧಾನ್ಯಕ್ಕೆ ಹೆಚ್ಚಿನ ಮಹತ್ವ
'ಅವರದ್ದೇ ಕ್ಷೇತ್ರದಲ್ಲಿ ಅವರನ್ನೇ ಕಡೆಗಣಿಸುತ್ತಿರುವುದು ಇದು ಎರಡನೇ ಬಾರಿ. BSY ವಿರುದ್ಧ ಕಟೀಲ್ + ಸಂತೋಷ್ ಜೋಡಿಯಾದರೆ, ಶೆಟ್ಟರ್ ವಿರುದ್ಧ ಬೊಮ್ಮಾಯಿ + ಜೋಶಿ ಜೋಡಿಯಾಗಿದ್ದಾರೆ!' ಎಂದು ಕಾಂಗ್ರೆಸ್ ತನ್ನ ಟ್ವೀಟ್ನಲ್ಲಿ ದೂರಿದೆ.
ಧಾರವಾಡ; ಯುವಜನೋತ್ಸವ ಕಿಟ್ನ ವಿಶೇಷತೆಗಳು
ಕಾಂಗ್ರೆಸ್ ಪಕ್ಷ ಈ ಟ್ವೀಟ್ಗೆ #BJPvsBJP ಎಂಬ ಹ್ಯಾಷ್ಟ್ಯಾಗ್ ಬಳಕೆ ಮಾಡಿದೆ. ನಿಜವಾಗಿಯೂ ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಡೆಗಣಿಸುತ್ತಿದೆಯೇ? ಎಂಬುದಕ್ಕೆ ಅವರೇ ಉತ್ತರ ನೀಡಬೇಕು.
ಸಂಜೆ 3.30ರ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಧಾರವಾಡಕ್ಕೆ ಆಗಮಿಸಲಿದ್ದಾರೆ. ಸಂಜೆ 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಮಾಡಲಿದ್ದಾರೆ.
ಧಾರವಾಡ ಸಂಸದ ಮತ್ತು ಕೇಂದ್ರದ ಸಂಸದೀಯ ವ್ಯವಹಾರ, ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದಾರೆ. ಆದರೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್ ಕಡೆಗಣಿಸಲಾಗುತ್ತಿದೆ ಎಂಬುದು ಕಾಂಗ್ರೆಸ್ ಆರೋಪ.
ಕೇಂದ್ರ ಕ್ರೀಡೆ ಹಾಗೂ ಯುವ ವ್ಯವಹಾರಗಳ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರೊಂದಿಗೆ ಗುರುವಾರ ಯುವಜನೋತ್ಸವ ಉದ್ಘಾಟನಾ ಸಮಾರಂಭದ ಅಂತಿಮ ಹಂತದ ತಯಾರಿಗಳ ಪರಿಶೀಲನೆಯನ್ನು ಪ್ರಹ್ಲಾದ್ ಜೋಶಿ ನಡೆಸಿದರು. ಕೆಲವೇ ಕ್ಷಣಗಳಲ್ಲಿ ಮೋದಿ ಧಾರವಾಡಕ್ಕೆ ಆಗಮಿಸಲಿದ್ದಾರೆ.
ಮೋದಿ ಮೌನ; ಇನ್ನು ಯುವಜನೋತ್ಸವದ ಬಗ್ಗೆ ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. #ModiMouna ಎಂಬ ಹ್ಯಾಷ್ಟ್ಯಾಗ್ ಬಳಕೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಹಲವು ಪ್ರಶ್ನೆಗಳನ್ನು ಕೇಳಿದೆ.
'ಯುವಕರಿಗೆ ಪಕೋಡಾ ಮಾರುವ ಸಲಹೆ ನೀಡಿದ @narendramodi ಅವರೇ, ಯುವಜನೋತ್ಸವ ಎಂದರೆ ಸಿನೆಮಾ ತಾರೆಯರನ್ನು ಕರೆಸಿ ಹಾಡು, ಡ್ಯಾನ್ಸುಗಳ ಕಾರ್ಯಕ್ರಮ ಮಾಡುವುದಲ್ಲ. ರಾಜ್ಯದಲ್ಲಿ 1500ಕ್ಕೂ ಹೆಚ್ಚು ಯುವಜನರು ನಿರುದ್ಯೋಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಯುವಜನರ ಈ ಸಾವು ಹಾಗೂ ನೋವಿನ ಬಗ್ಗೆ ತಾವು ಮೌನ ಮುರಿಯುವಿರಾ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮತ್ತೊಂದು ಟ್ವೀಟ್ನಲ್ಲಿ, 'ಯುವಜನರ ಭವಿಷ್ಯವನ್ನು ಸಮಾಧಿ ಮಾಡಿದ @BJP4Karnataka ಸರ್ಕಾರ, ಈಗ ಆ ಸಮಾಧಿ ಮೇಲೆ ಉತ್ಸವ ಮಾಡುತ್ತಿದೆ. ಯುವಜನರ ಉದ್ಯೋಗ ಮಾರಟ, ಶಿಷ್ಯವೇತನ ನೀಡದೆ ಯುವಜನರ ಶಿಕ್ಷಣಕ್ಕೆ ದ್ರೋಹ, KPSC, KEA, KSP ಅಭ್ಯರ್ಥಿಗಳಿಗೆ ವಂಚನೆ @narendramodi ಅವರು ಉದ್ಘಾಟಿಸುವುದು ಉತ್ಸವವನ್ನಲ್ಲ, ಯುವಕರ ಭವಿಷ್ಯಕ್ಕೆ ಬಿಜೆಪಿ ತೋಡಿದ ಸಮಾಧಿಯನ್ನ' ಎಂದು ಟೀಕಿಸಿದೆ.
26ನೇ ರಾಷ್ಟ್ರೀಯ ಯುವ ಜನೋತ್ಸವ; ಯುವ ಜನೋತ್ಸವ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಉತ್ಸವಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ.
"ಪ್ರಧಾನ ಮಂತ್ರಿ ಆಗಮನ ರಾಜ್ಯದ ಯುವ ಜನತೆಗೆ ದೊಡ್ಡ ಪ್ರೇರಣೆಯಾಗಲಿದೆ. ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನ ಮೋದಿಯವರ ಜೊತೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ' ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ಹೇಳಿದರು.
"ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಅನುರಾಗ್ ಸಿಂಗ್ ಠಾಕೂರ್, ನಿಶಿತ್ ಪ್ರಮಾಣಿಕ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಗದೀಶ್ ಶೆಟ್ಟರ್ ಸೇರಿದಂತೆ ವೇದಿಕೆ ಮೇಲೆ 22 ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ" ಎಂದು ಸಚಿವ ಡಾ. ನಾರಾಯಣಗೌಡ ಮಾಹಿತಿ ನೀಡಿದರು.
ಐದು ದಿನಗಳ ಕಾಲ ನಡೆಯುವ ಯುವಜನೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರಿಂದ ಸಂಗೀತ ಸಂಜೆ ಇರಲಿದೆ.
ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ದೇಶದ ನಾನಾ ಭಾಗಗಳಿಂದ 6 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ. ಗುರುವಾರದ ಕಾರ್ಯಕ್ರಮಕ್ಕೆ 50 ಸಾವಿರ ಜನರು ನೋಂದಣಿ ಮಾಡಿಸಿದ್ದಾರೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಯಶಸ್ವಿಗೊಳಿಸಿದ್ದಕ್ಕೆ ಮತ್ತೆ ಯುವ ಜನೋತ್ಸವ ನಡೆಸುವ ಜವಾಬ್ದಾರಿಯನ್ನು ಕರ್ನಾಟಕಕ್ಕೆ ಈ ಅವಕಾಶ ಕೊಡಲಾಗಿದೆ.