'ತಿರುಪತಿ ಲಡ್ಡು ಕೋಟ್ಯಾಂತರ ಭಕ್ತರಿಗೆ ಕೇವಲ ಸಿಹಿ ಅಲ್ಲ..ಭಕ್ತಿಯ ಪ್ರಸಾದ'
ಚಿಕ್ಕಮಗಳೂರು, ಸೆಪ್ಟೆಂಬರ್ 20: ಪ್ರಾಣಿಗಳ ಕೊಬ್ಬು ಬಳಸಿ ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆ ಮಾಡಲಾಗುತ್ತಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ. ಕೋಟ್ಯಂತರ ಭಕ್ತರು ಭಕ್ತಯಿಂದ ಸ್ವೀಕರಿಸುವ ಪ್ರಸಾದದ ಬಗ್ಗೆ ಚಂದ್ರಬಾಬು ನಾಯ್ಡು ಮಾಡಿರುವ ಆರೋಪ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ಎಂಎಲ್ಸಿ, ಮಾಜಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಪತಿ ಕೋಟ್ಯಾಂತರ ಭಕ್ತರ ಶ್ರದ್ಧೆಯ ಧಾರ್ಮಿಕ ಸ್ಥಳ. ಸಾವಿರಾರು ವರ್ಷಗಳಿಂದ ಬಾಲಾಜಿ ಜೊತೆ ಅವಿನಾಭಾವ ಸಂಬಂಧವಿದೆ. ವಾರಕ್ಕೊಮ್ಮೆ ಬಾಲಾಜಿ ದರ್ಶನಕ್ಕೆ ಹೋಗುವವರು ಇದ್ದಾರೆ. ತಿರುಪತಿ ಲಡ್ಡು ಪ್ರಸಾದಕ್ಕೆ ಇರುವ ಭಾವನೆಗೆ ಬೇರೆ. ಅದು ಕೋಟ್ಯಾಂತರ ಭಕ್ತರಿಗೆ ಕೇವಲ ಸಿಹಿ ಅಲ್ಲ ಭಕ್ತಿಯ ಪ್ರಸಾದ ಎಂದರು.

ಇಂತಹ ಪ್ರಸಾದ ತಯಾರಿಸುವಾಗ ಧಾರ್ಮಿಕ ಪವಿತ್ರತೆ ಕಾಪಾಡಿಕೊಳ್ಳಬೇಕು. ಕರ್ನಾಟಕದಿಂದಲೇ ನಂದಿನಿ ತುಪ್ಪ ಅಲ್ಲಿಗೆ ಸರಬರಾಜಾಗುವುದನ್ನು ಕೇಳಿದ್ದೇನೆ. ಪ್ರಸಾದಕ್ಕೆ ಪ್ರಾಣಿಯ ಕೊಬ್ಬು ಬಳಕೆ ಎಂಬ ಮಾತು ಆಶ್ಚರ್ಯ-ಆಘಾತ ಎರಡೂ ಆಗಿದೆ. ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಈ ರೀತಿ ಮಾಡುವ ಯೋಚನೆಯಾದರೂ ಯಾರಿಗೆ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ.
ಯಾರಿಗೆ ಗುತ್ತಿಗೆ ನೀಡಿದ್ದರು ಎಲ್ಲವನ್ನು ಗಂಭೀರವಾಗಿ ತನಿಖೆ ನಡೆಸಬೇಕು. ಇದು ನಮ್ಮ ಭಾವನೆ, ನಂಬಿಕೆ, ಶ್ರದ್ಧೆಯ ಪ್ರಶ್ನೆ, ಅದಕ್ಕೆ ಧಕ್ಕೆಯಾಗುತ್ತೆ. ಸಮಗ್ರ ತನಿಖೆಯಾದರೆ ಭಕ್ತರ ಮನಸ್ಸಿಗೆ ಸ್ಪಷ್ಟತೆ ಬರಲಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಬುರ್ಖಾ ಹಾಕಿದರೆ ಲವ್ ಜಿಹಾದ್ ಪ್ರಶ್ನೆಯೇ ಬರಲ್ಲ ಎಂದು ಹೇಳಬಹುದು
ಇನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ಗಲಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ಎಫ್ಐಆರ್ ದಾಖಲಾಗಿರುವ ಬಗ್ಗೆ ಮಾತನಾಡಿದ ಅವರು, ಗಣಪತಿ ಕೂರಿಸಿದವರ ಮೇಲೆ ಎಫ್.ಐ.ಆರ್. ಮಾಡಿದ ಪುಣ್ಯಾತ್ಮರಿವರು. ಗಲಾಟೆ ಮಾಡಿದವರು ಆಮೇಲೆ. ಸರ್ಕಾರಕ್ಕೆ ಗಲಾಟೆ ಮಾಡಿದವರಿಗಿಂತ ಗಣಪತಿ ಕೂರಿಸಿದವರದ್ದೇ ತಪ್ಪು ಎಂದರು.

ಮುಂದೆ ಎಲ್ಲರೂ ಬುರ್ಖಾ ಹಾಕಿದರೆ ಲವ್ ಜಿಹಾದ್ ಪ್ರಶ್ನೆಯೇ ಬರಲ್ಲ ಎಂದು ಹೇಳಬಹುದು. ಇಂತಹ ಮಾನಸಿಕತೆ ಇರುವ ಸರ್ಕಾರದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ಗಣಪತಿಯನ್ನೇ ಕೂರಿಸದಿದ್ದರೆ ಗಲಭೆ ನಡೆಯುತ್ತಿರಲಿಲ್ಲ ಎಂಬ ಮನಸ್ಥಿತಿ ಇವರದ್ದು ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ವ್ಯಂಗ್ಯವಾಡಿದರು.












Click it and Unblock the Notifications